ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬರಿಗೆ ಕಚ್ಚಿದ ವಿಷಕಾರಿ ಹಾವು ಐದೇ ನಿಮಿಷಗಳಲ್ಲಿ ಸಾವನ್ನಪ್ಪಿದೆ.

ಭೋಪಾಲ್: ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಪರೂಪದಲ್ಲಿ ಅತೀ ಅಪರೂಪದಂತಹ ಪ್ರಕಣವೊಂದರಲ್ಲಿ ವಿಷಕಾರಿ ಹಾವೊಂದು ವ್ಯಕ್ತಿಗೆ ಕಚ್ಚಿದ ಐದೇ ನಿಮಿಷದಲ್ಲಿ ಸಾವನ್ನಪ್ಪಿದೆ. ಸಾಮಾನ್ಯವಾಗಿ ಹಾವು ಮನುಷ್ಯರಿಗೆ ಕಚ್ಚಿ ಮನುಷ್ಯರು ಸಾವನ್ನಪ್ಪಿದಂತಹ ಹಲವು ಘಟನೆಗಳು ನಡೆದಿವೆ. ಆದರೆ ಇಲ್ಲಿ ಮನುಷ್ಯನಿಗೆ ಕಚ್ಚಿದ ನಂತರ ವಿಷಪೂರಿತವಾಗಿದ್ದ ಹಾವೇ ಸಾವನ್ನಪ್ಪಿದೆ. ಮಧ್ಯಪ್ರದೇಶ ಬಾಲ್‌ಘಾಟ್‌ ಪ್ರದೇಶದ ಖುಡ್‌ಸೋದಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಘಟನೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಅಪಾಯದಿಂದ ಪಾರಾಗಿದ್ದರೆ, ಅತ್ತ ಹಾವು ಸಾವನ್ನಪ್ಪಿದೆ. ಹಾವು ಕಚ್ಚಿದ ವ್ಯಕ್ತಿಯನ್ನು 25 ವರ್ಷದ ಸಚಿನ್ ನಾಗಪುರೆ ಎಂದು ಗುರುತಿಸಲಾಗಿದೆ. ಸಚಿನ್ ನಾಗಪುರೆ ಕಾರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಗುರುವಾರ ಮುಂಜಾನೆ 7 ಗಂಟೆ ಹೊತ್ತಿಗೆ ತಮ್ಮ ಜಮೀನಿಗೆ ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಿದ್ದು, ಇವರಿಗೆ ಹಾವು ಕಚ್ಚಿದೆ.

ಇದಾಗಿ 5ರಿಂದ 6 ನಿಮಿಷದಲ್ಲಿ ಅನೀರಿಕ್ಷಿತವಾಗಿ ಹಾವು ಕೂಡ ಸಾವನ್ನಪ್ಪಿದೆ. ಮನುಷ್ಯರಿಗೆ ಕಚ್ಚಿದ ನಂತರ ಹಾವು ಸಾವನ್ನಪ್ಪುವುದು ಅತ ಅಪರೂಪವಾಗಿದೆ. ಬಹುಶಃ ಇದಕ್ಕೆ ಬೇರೆನಾದರು ಕಾರಣ ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 7–8 ವರ್ಷಗಳಿಂದ ಸಚಿನ್ ಅವರು ಚಿಡ್ಚಿಡಿಯಾ, ಪಿಸುಂಡಿ, ಪಲ್ಸಾ, ಜಾಮೂನ್, ಮಾವು, ತುವಾರ್, ಆಜನ್, ಕಾರಂಜಿ ಮತ್ತು ಬೇವು ಸೇರಿದಂತೆ ವಿವಿಧ ಮರಗಳ ಕೊಂಬೆಗಳನ್ನು ಬಳಸಿ ಹಲ್ಲುಜ್ಜುತ್ತಿದ್ದೇನೆ ಎಂದು ಸಚಿನ್ ಮಾಹಿತಿ ನೀಡಿದ್ದಾರೆ. ಈ ಗಿಡಮೂಲಿಕೆಗಳ ಮಿಶ್ರಣವು ಹಾವಿನ ರಕ್ತಕ್ಕೆ ವಿಷಕಾರಿಯಾಗಿ ಪರಿಣಮಿಸಿ, ಅದರ ಸಾವಿಗೆ ಕಾರಣವಾಗಿರಬಹುದು ಎಂದು ಕೆಲವರು ಅಂದಾಜಿಸಿದ್ದಾರೆ.

ಅರಣ್ಯ ಇಲಾಖೆಯ ರೇಂಜರ್ ಧರ್ಮೇಂದ್ರ ಬಿಸೆನ್ ಅವರು ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಕರೆದಿದ್ದಾರೆ. ಒಬ್ಬ ವ್ಯಕ್ತಿಯನ್ನು ಕಚ್ಚಿದ ತಕ್ಷಣ ಹಾವು ಸಾಯುವುದು ಅತ್ಯಂತ ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ. ಅಂತಹ ಒಂದು ಸಾಧ್ಯತೆಯೆಂದರೆ, ಹಾವು ಕಚ್ಚಿದ ನಂತರ ತೀವ್ರವಾಗಿ ತಿರುಚಿದರೆ ಅದರ ವಿಷ ಚೀಲವು ಛಿದ್ರವಾಗಬಹುದು, ಇದರಿಂದಾಗಿ ಅದು ಹಠಾತ್ ಸಾವಿಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.

ಘಟನೆಯ ನಂತರ, ಯುವಕ ತನ್ನ ಕುಟುಂಬಕ್ಕೆ ಈ ಬಗ್ಗೆ ತಿಳಿಸಿದ್ದು,. ಕುಟುಂಬ ಸದಸ್ಯರು ಸ್ಥಳಕ್ಕೆ ತಲುಪಿ ಹಾವು ಮತ್ತು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ಕುಟುಂಬ ಸದಸ್ಯರು ಕಚ್ಚಿದ ಹಾವು ಸಾಮಾನ್ಯ ಹಾವಲ್ಲ, ಬದಲಾಗಿ ಡೊಂಗರ್ಬೆಲಿಯಾ ಎಂಬ ಬಹಳ ವಿಷಕಾರಿ ಹಾವು ಎಂದು ಹೇಳಿದ್ದಾರೆ.