ದೇವಸ್ಥಾನವನ್ನೇ ಉದ್ಯಮ ಮಾಡಿದ ಸರ್ಕಾರ, VIPಗಳಿಗೆ ದರ್ಶನ ಉಳಿದವರ ಕತ್ತು ಹಿಡಿದು ದಬ್ಬುವ ದೃಶ್ಯ ಸೆರೆಯಾಗಿದೆ. ಬೈದ್ಯನಾಥ ದೇವಸ್ತಾನದ ಈ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಸರ್ಕಾರ ಸುಪರ್ದಿಗೆ ತೆಗೆದುಕೊಂಡು ಈ ರೀತಿ ಹಿಂಸೆ ಯಾಕೆ ಅನ್ನೋ ಪ್ರಶ್ನೆ ಮೂಡಿದೆ.
ರಾಂಚಿ (ಮಾ.20) ಭಾರತದಲ್ಲಿ ಪ್ರತಿ ರಾಜ್ಯದ ದಾರ್ಮಿಕ ಹಾಗೂ ದತ್ತಿ ಇಲಾಖೆ ದೇವಸ್ಥಾನಗಳ ನಿರ್ವಹಣೆ ಮಾಡುತ್ತಿದೆ. ಭಕ್ತರು ನಂಬಿಕೆಯಿಂದ ಹಾಕುವ ಕಾಣಿಕೆ, ದೇಣಿಗೆಯನ್ನು ಬಾಚಿಕೊಳ್ಳುವ ಸರ್ಕಾರಗಳು ದೇವಸ್ಥಾನದಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ, ಭಕ್ತರ ದೇವರ ದರ್ಶನಕ್ಕೆ ಸುಗಮ ಅವಕಾಶ ಮಾಡಿಕೊಡಲು ಹಿಂದೇಟು ಹಾಕುತ್ತದೆ. ಬಳಿಕ ಇದೇ ಸರ್ಕಾರಗಳು ಹಿಂದೂಗಳ ನಂಬಿಕೆ, ದೇವಸ್ಥಾನಗಳ ಪಾವಿತ್ರ್ಯತೆಗೆ ಧಕ್ಕೆ ಮಾಡಿದ ಹಲವು ಊದಾಹರಣೆಗಳಿವೆ. ಇದೀಗ ಜಾರ್ಖಂಡ್ನ ದಿಯೋಘಡದ ಬೈದ್ಯನಾಥ ದೇವಸ್ಥಾನದ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ. ಭಕ್ತಿಯಿಂದ ದೇವರ ದರ್ಶನಕ್ಕೆ ಬಂದ ಜನಸಾಮಾನ್ಯರನ್ನು ಕುತ್ತಿ ಹಿಡಿದು ತಳ್ಳುವ ದೃಶ್ಯ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಬಾಬಾ ಬೈದ್ಯನಾಥ್ ದೇವಸ್ಥಾನದ ವಿಡಿಯೋ
ಬಾಬಾ ಬೈದ್ಯನಾಥ್ ದೇವಸ್ಥಾನದ ಗರ್ಭಗುಡಿ ಹೊರಗಿನ ವಿಡಯೋ ಒಂದು ವೈರಲ್ ಆಗಿದೆ. ಗರ್ಭಗುಡಿ ಹೊರಗಡೆ ಸರದಿ ಸಾಲಿನಲ್ಲಿ ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ದೇವಸ್ಥಾನದಲ್ಲಿ ಭಕ್ತರು ತುಂಬಿದ್ದಾರೆ. ಆದರೆ ಸರಿಯಾದ ವ್ಯವಸ್ಥೆ ಮಾಡುವ ಬದಲು ಸಿಬ್ಬಂದಿಗಳು, ಭದ್ರತಾ ಪಡೆ ಸಿಬ್ಬಂದಿಗಳು ಸಾಮಾನ್ಯರ ಕತ್ತು ಹಿಡಿದು ತಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ. ಒಂದು ಸೆಕೆಂಡ್ ಕೂಡ ಅವಕಾಶ ನೀಡುತ್ತಿಲ್ಲ. ಕುತ್ತಿಗೆ ಹಿಡಿದು ಜೋರಾಗಿ ತಳ್ಳಿ ಹೊರಗೆ ಕಳುಹಿಸುತ್ತಿರುವ ದೃಶ್ಯವಿದೆ. ಭಕ್ತರಿಗೆ ದೇವರ ದರ್ಶನಕ್ಕೂ ಅವಕಾಶ ನೀಡುತ್ತಿಲ್ಲ. ಇದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ವಿಐಪಿಗಳಿಗೆ ಮಣೆ, ಸಾಮಾನ್ಯರ ಮೇಲೆ ದರ್ಪ
ಇದೇ ಬೈದ್ಯನಾಥ್ ದೇವಸ್ಥಾನದಲ್ಲಿ 600 ರೂಪಾಯಿ ನೀಡಿ ದರ್ಶನ ಟಿಕೆಟ್ ಖರೀದಿಸಿದ ಭಕ್ತರನ್ನು ಉತ್ತಮವಾಗಿ ನಡೆಸಿಕೊಳ್ಳಲಾಗುತ್ತಿದೆ. ವಿಐಪಿ ಭಕ್ತರಿಗೆ ಆತಿಥ್ಯ ನೀಡವ ಬೈದ್ಯನಾಥ್ ದೇವಸ್ಥಾನದಲ್ಲಿ ಸಾಮಾನ್ಯರಿಗೆ ಯಾಕೆ ಈ ಶಿಕ್ಷೆ ಎಂದು ಹಲವರು ಪ್ರಶ್ನಿಸಿದ್ದಾರೆ. ಹಲವು ದೇವಸ್ಥಾನಗಳಲ್ಲಿ ವಿಐಪಿ ದರ್ಶನ ವ್ಯವಸ್ಥೆ ಇದೆ. ಹೆಚ್ಚುವರಿ ಪಾವತಿ ಮಾಡಿ ವಿಐಪಿ ಟಿಕೆಟ್, ಸಚಿವರು, ಶಾಸಕರ ಪತ್ರ, ಪ್ರಮುಖರ ಶಿಫಾರಸ್ಸು ಮೂಲಕ ಆಗಮಿಸುವ ಭಕ್ತರಿಗೆ ವಿಶೇಷ ಆತಿಥ್ಯ ನೀಡುವ ವಿಡಿಯೋಗಳು ವೈರಲ್ ಆಗಿದೆ. ಸರ್ಕಾರ ದುಡ್ಡು ನೀಡುವ ಭಕ್ತರಿಗೆ ವಿಶೇಷ ಆತಿಥ್ಯ, ನಂಬಿಕೆಯಿಂದ, ಭಕ್ತಿಯಿಂದ ಆಗಮಿಸುವ ಸಾಮಾನ್ಯ ಭಕ್ತನ ಕಾಲಿನ ಕಸದಂತೆ ಹೊರಗೆಸುವ ರೀತಿ ಕುರಿತು ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಟೋಕನ್ ನೀಡಿ ಅಥವಾ ಶಾಂತಿಯುತವಾಗಿ ಭಕ್ತರಿಗೆ ದರ್ಶನ ಭಾಗ್ಯ ಕುರಣಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ದೇವಸ್ಥಾನ ಮುಕ್ತಿಗೊಳಿಸಲು ಮತ್ತೆ ಭುಗಿಲೆದ್ದ ಕೂಗು
ಸರ್ಕಾರದ ಕಪಿಮುಷ್ಠಿಯಿಂದ ದೇವಸ್ಥಾನಗಳನ್ನು ಮುಕ್ತಿಗೊಳಿಸಬೇಕು ಎಂಬ ಕೂಗು ಹಲವು ದಶಕಗಳಿಂದ ಕೇಳಿಬರುತ್ತಿದೆ. ಹಿಂದೂ ದೇವಸ್ಥಾನಗಳನ್ನು ಮಾತ್ರ ಸರ್ಕಾರ ನಿರ್ವಹಣೆ ಮಾಡುತ್ತಿದೆ. ಇತರ ಸಮುದಾಯ, ಧರ್ಮದ ಪ್ರಾರ್ಥನಾ ಸ್ಥಳಗಳನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ, ಸರ್ಕಾರದ ಸುಪರ್ದಿಯಲ್ಲೂ ಇಲ್ಲ. ಸರ್ಕಾರ ನಿಯಂತ್ರಿಸುವ ಹಿಂದೂ ದೇವಸ್ಥಾನಗಳ ಪರಿಸ್ಥಿತಿ ನೋಡಿದರೆ ಮತ್ತೆ ದರ್ಶನವೇ ಬೇಡ ಅನ್ನೋ ಪರಿಸ್ಥಿತಿ ಇದೆ. ಹೀಗಾಗಿ ಸರ್ಕಾರಗಳು ಹಿಂದೂ ದೇವಸ್ಥಾನಗಳಿಗೆ ಮುಕ್ತಿ ನೀಡಬೇಕು ಅನ್ನೋ ಕೂಗು ಮತ್ತೆ ಭುಗಿಲೆದ್ದಿದೆ.


