ಅದೆಷ್ಟೋ ಜನ ತಮ್ಮ ಜೀವಮಾನ ಪೂರ್ತಿ ದುಡಿದ ಹಣವನ್ನು ಮನೆಯ ಆಸೆಗಾಗಿ ನಿಮ್ಮ ಕೈಗೆ ಕೊಟ್ಟಿದ್ದರು. ಆದರೆ, ನೀವು ಅವರೆಲ್ಲರಿಗೂ ಕಣ್ಣೀರಿ ತರಿಸಿದ್ದೀರಿ. ಹಾಗಾಗಿ ನಿಮ್ಮ ಮೇಲೆ ಯಾವುದೇ ಕನಿಕರ ನಮಗಿಲ್ಲ. ಸದ್ಯಕ್ಕೆ ಜೈಲೇ ನಿಮ್ಮ ಮನೆ ಎಂದು ಸುಪ್ರೀಂ ಕೋರ್ಟ್ ಅಮ್ರಪಾಲಿ ಸಿಎಂಡಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ಹೇಳಿದೆ.
ನವದೆಹಲಿ (ಮೇ.5): ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದ ಅಮ್ರಪಾಲಿ ಸಮೂಹದ ಕಂಪನಿಗಳ ಸಿಎಂಡಿ ಅನಿಲ್ ಕುಮಾರ್ ಶರ್ಮಗೆ ಸುಪ್ರೀಂ ಕೋರ್ಟ್ ಕಟು ಶಬ್ದಗಳ ಮೂಲಕ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಸ್ವಂತ ಸೂರು ಕಟ್ಟಿಕೊಳ್ಳುವ ಆಸೆ ಇರಿಸಿಕೊಂಡ ಸಾವಿರಾರು ಜನರಿಗೆ ಈತ ಮೋಸಮಾಡಿದ್ದಾನೆ. ಹಾಗಾಗಿ ನಿಮ್ಮ ಮೇಲೆ ಖಂಡಿತ ಯಾವ ಕನಿಕರವೂ ನಮಗಿಲ್ಲ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಮಾ ಅವರ ಜಾಮೀನು ಅರ್ಜಿಯ ಕುರಿತು ಪ್ರಾಸಿಕ್ಯೂಟಿಂಗ್ ಏಜೆನ್ಸಿಗೆ ನೋಟಿಸ್ ನೀಡಲು ನಿರಾಕರಿಸಿತು. 'ಒಂದೆರಡಲ್ಲ ನೀವು ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಹೊತ್ತ ಸಾವಿರಾರು ಜನರಿಗೆ ಮೋಸ ಮಾಡಿದ್ದೀರಿ. ನೀವು ಅವರ ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಅವರ ಜೀವನದ ಉಳಿತಾಯವನ್ನು ಕಸಿದುಕೊಂಡಿದ್ದೀರಿ. ನೀವು ಯಾವುದೇ ಸಹಾನುಭೂತಿಗೆ ಅರ್ಹರಲ್ಲ" ಎಂದು ಪೀಠವು ಗುರುವಾರ ಹೇಳಿದೆ. ರಿಯಲ್ ಎಸ್ಟೇಟ್ ಗ್ರೂಪ್ನ ಮಾಜಿ ಸಿಎಂಡಿ ಮತ್ತು ಸಂಸ್ಥೆಯ ಇತರ ನಿರ್ದೇಶಕರನ್ನು ಉನ್ನತ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಂಧಿಸಲಾಯಿತು ಫೊರೆನ್ಸಿಕ್ ಆಡಿಟ್ ವರದಿಯ ನಂತರ ದೊಡ್ಡ ಪ್ರಮಾಣದ ಮನೆ ಖರೀದಿದಾರರ ಹಣವನ್ನು ಆಡಳಿತ ಮಂಡಳಿಯು ಪೋಲು ಮಾಡಿದ್ದು ಗೊತ್ತಾಗಿತ್ತು.
ನೀವು ಮಾಡಿರುವ ಅಪರಾಧ ಅತ್ಯಂತ ಆಳವಾದದ್ದಾಗಿದೆ. ನ್ಯಾಯಾಲಯವು ಸಮಸ್ಯೆಯನ್ನು ನಿಭಾಯಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 'ನಿಮ್ಮದು ಸಣ್ಣ ಪ್ರಮಾಣದ ಮೋಸದ ಪ್ರಕರಣವಲ್ಲ. ಸಾವಿರಾರು ಮನೆ ಖರೀದಿದಾರರ ಪಾಡನ್ನು ನೀವೇ ನೋಡಿ. ನಿಮಗೆ ನಾವು ಯಾವುದೇ ಕನಿಕರ ತೋರಲು ಸಾಧ್ಯವಿಲ್ಲ. ಹಾಗಾಗಿ ನೀವು ಈಗ ಜೈಲಿನಲ್ಲೇ ನಿಮ್ಮ ದಿನವನ್ನು ಕಳೆಯಿರಿ. ನೀವೇನು ಮಾಡಿದ್ದೀರಿ ಅನ್ನೋದರ ಸಂಪೂರ್ಣ ಅಂದಾಜು ಈ ಕೋರ್ಟ್ಗೆ ಇದೆ. ಇಡೀ ಅವ್ಯವಸ್ಥೆಯನ್ನು ರಚನೆ ಮಾಡಿದ್ದೇ ನೀವು. ಕೊನೆಗೆ ಇದರಿಂದ ಹೊರಬರಲು ನಿಮಗೆ ಕೂಡ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ದೊಡ್ಡ ಸಂಖ್ಯೆಯ ಮನೆ ಖರೀದಿದಾರರು ತೊಂದರೆ ಅನುಭವಿಸಿದ್ದಾರೆ' ಎಂದು ಪೀಠ ಹೇಳಿದೆ.
ಇದಕ್ಕೂ ಮುನ್ನ, ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಶರ್ಮಾಗೆ ಸುಪ್ರೀಂ ಕೋರ್ಟ್ ಕೆಲವು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ವಂಚನೆ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ ಮತ್ತು ಹಣ ವರ್ಗಾವಣೆ ಸೇರಿದಂತೆ ವಿವಿಧ ಅಪರಾಧಗಳಿಗಾಗಿ 2018 ರಲ್ಲಿ ಬಂಧನದ ನಂತರ ಶರ್ಮಾ ಮತ್ತು ಇತರರು ಜೈಲಿನಲ್ಲಿದ್ದು ಸುಮಾರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಮನೆ ಖರೀದಿದಾರರ ಹಣವನ್ನು ಪೋಲು ಮಾಡಿದ ಆರೋಪ ಅವರ ಮೇಲಿದೆ.
ಸುಪ್ರೀಂ ಕೋರ್ಟ್, 2019ರ ಜುಲೈ 23ರ ತೀರ್ಪಿನಲ್ಲಿ, ಮನೆ ಖರೀದಿದಾರರ ನಂಬಿಕೆಯನ್ನು ಉಲ್ಲಂಘಿಸಿದ್ದಕ್ಕಾಗಿ ಬಿಲ್ಡರ್ ಮೇಲೆ ಪ್ರಹಾರ ಮಾಡಿದ್ದಲ್ಲದೆ, ರಿಯಲ್ ಎಸ್ಟೇಟ್ ಕಾನೂನು ರೆರಾ ಅಡಿಯಲ್ಲಿ ಆಮ್ರಪಾಲಿ ಗ್ರೂಪ್ನ ನೋಂದಣಿಯನ್ನು ರದ್ದುಗೊಳಿಸುವಂತೆ ಆದೇಶ ನೀಡಿತ್ತು. ಆಮ್ರಪಾಲಿ ಗ್ರೂಪ್ನ 42,000 ಕ್ಕೂ ಹೆಚ್ಚು ಮನೆ ಖರೀದಿದಾರರಿಗೆ ಪರಿಹಾರವನ್ನು ಒದಗಿಸುವ ಮೂಲಕ ರೀಲರ್ಗಳಿಂದ ಅಕ್ರಮ ಹಣ ವರ್ಗಾವಣೆಯ ಕುರಿತು ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಇಡಿ ಜೊತೆಗೆ, ದೆಹಲಿ ಪೊಲೀಸ್ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಮತ್ತು ಗಂಭೀರ ವಂಚನೆ ತನಿಖಾ ಕಚೇರಿ (ಎಸ್ಎಫ್ಐಒ) ಸಹ ರಿಯಲ್ ಎಸ್ಟೇಟ್ ಗುಂಪಿನ ಮಾಜಿ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳ ತನಿಖೆ ನಡೆಸುತ್ತಿದೆ.
ಅಮ್ರಪಾಲಿ ವಂಚನೆ ಹಣ ಧೋನಿ ಕಂಪನೀಲಿ ಹೂಡಿಕೆ!
ಮನೆಗೆ ನೀಡಿದ್ದ ಹಣವನ್ನು ಜಾಹೀರಾತಿಗೆ ಖರ್ಚು ಮಾಡ್ತಿದ್ದ ಅಮ್ರಪಾಲಿ: ಅಮ್ರಪಾಲಿ ಗ್ರೂಪ್ ಜನರು ಮನೆಗಾಗಿ ನೀಡಿದ್ದ ಹಣದಲ್ಲಿ ಜಾಹೀರಾತು ಸೇರಿದಂತೆ ಇತರ ವೈಭೋಗಗಳಿಗಾಗಿ ಖರ್ಚು ಮಾಡುತ್ತಿತ್ತು. ಇದೇ ಕಂಪನಿಗೆ ಅಂದಾಜು 6-7 ವರ್ಷಗಳ ಕಾಲ ಎಂಎಸ್ ಧೋನಿ ರಾಯಭಾರಿಯಾಗಿದ್ದಾರೆ. 2009-2015ರ ಅವಧಿಯಲ್ಲಿ42.22 ಕೋಟಿ ರೂಪಾಯಿಯನ್ನು ಧೋನಿಗೆ ವಾಪತಿ ಮಾಡಲಾಗಿತ್ತು. ಇದರಲ್ಲಿ 6.52 ಕೋಟಿ ರೂಪಾಯಿಯನ್ನು ಸ್ವತಃ ಜನರ ಹಣದಿಂದ ಪಾವತಿ ಮಾಡಲಾಗಿತ್ತು. ಅದರೊಂದಿಗೆ ಇಡೀ ಕಂಪನಿಯ ಆಡಿಟ್ನಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದವು.
4 ವರ್ಷದ ಮಗುವಿನ ಅತ್ಯಾಚಾರ-ಕೊಲೆ ಮಾಡಿದ್ದ ವ್ಯಕ್ತಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಮುರ್ಮು!
