UP Elections : ಬಿಜೆಪಿ ನಾಯಕರಿಗೆ ಏರ್ ಟ್ರಾಫಿಕ್ ಇರೋದಿಲ್ವಾ? ಅಖಿಲೇಶ್ ಯಾದವ್ ಪ್ರಶ್ನೆ
ಅಖಿಲೇಶ್ ಯಾದವ್ ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿ
ಏರ್ ಟ್ರಾಫಿಕ್ ಕಾರಣ ನೀಡಿದ ದೆಹಲಿ ಏರ್ ಪೋರ್ಟ್
ಬಿಜೆಪಿ ನಾಯಕರು ಹೋಗುವಾಗ ಏರ್ ಟ್ರಾಫಿಕ್ ಇರೋದಿಲ್ವಾ ಎಂದು ಅಖಿಲೇಶ್ ಪ್ರಶ್ನೆ
ನವದೆಹಲಿ (ಜ. 28): ಉತ್ತರಪ್ರದೇಶದಲ್ಲಿ ರಾಜಕೀಯ ನಾಯಕರು ತಮ್ಮ ಪಕ್ಷಗಳನ್ನು ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುವ ನಡುವೆ ಹೆಲಿಕಾಪ್ಟರ್ ರಾದ್ಧಾಂತ ಶುರುವಾಗಿದೆ. ದೆಹಲಿ ಏರ್ ಪೋರ್ಟ್ ನಿಂದ ಅಖಿಲೇಶ್ ಯಾದವ್ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡದೇ ಇರುವುದನ್ನು ರಾಜಕೀಯ ದಾಳ ಮಾಡಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ನಾಯಕರು ಹೆಲಿಕಾಪ್ಟರ್ ನಲ್ಲಿ ಹೋಗುವಾಗ ಯಾವ ಏರ್ ಟ್ರಾಫಿಕ್ ಕೂಡ ಇರೋದಿಲ್ಲ. ನಾವು ಹೋಗುವಾಗ ಇವೆಲ್ಲವೂ ಇರುತ್ತದೆ ಎಂದು ಲೇವಡಿ ಮಾಡಿದ್ದಾರೆ.
ದೆಹಲಿ ಏರ್ ಪೋರ್ಟ್ ನಲ್ಲಿ ಯಾವುದೇ ಕಾರಣವಿಲ್ಲದೆ ತಮ್ಮ ಹೆಲಿಕಾಪ್ಟರ್ ಹಾರಾಟಕ್ಕೆ ತಡೆ ನೀಡಿದ ವಿಚಾರವಾಗಿ ಸ್ಪಷ್ಟೀಕರಣ ನೀಡಿರುವ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ವಿಪರೀತ ಏರ್ ಟ್ರಾಫಿಕ್ ಹಾಗೂ ಇಂಧನ ತುಂಬುವ ಸಮಯದಲ್ಲಿ ಆದ ವಿಳಂಬದಿಂದಾಗಿ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ತಡೆ ನೀಡಲಾಗಿತ್ತು ಎಂದು ಹೇಳಿದ್ದಾರೆ. ಆರಂಭದಲ್ಲಿ ಏರ್ ಟ್ರಾಫಿಕ್ ನಿಂದಾಗಿ ವಿಳಂಬವಾಗಿದ್ದರೆ, ಬಳಿಕ ಹೆಲಿಕಾಪ್ಟರ್ ಗೆ ಇಂಧನ ತುಂಬುವ ಸಮಯದಲ್ಲೂ ಹೆಚ್ಚಳವಾಯಿತು. ಇದರಿಂದಾಗಿ ಅಖಿಲೇಶ್ ಯಾದವ್ ಅವರ ಹೆಲಿಕಾಪ್ಟರ್ ಹಾರಾಟ ತಡವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ಅಖಿಲೇಶ್ ಯಾದವ್ ಅವರ ಹೆಲಿಕಾಪ್ಟರ್ ಹೆಚ್ಚಿನ ವಾಯು ದಟ್ಟಣೆಯ ಕಾರಣ ಆರಂಭದಲ್ಲಿ ಹಾರಲು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅನುಮತಿ ನೀಡಲಿಲ್ಲ. ಕ್ಲಿಯರೆನ್ಸ್ ನೀಡಿದ ನಂತರ, ಚಾಪರ್ ಕಡಿಮೆ ಇಂಧನವನ್ನು ಹೊಂದಿತ್ತು. ಇಂಧನ ತುಂಬಿದ ನಂತರ, ಹೆಲಿಕಾಪ್ಟರ್ ಉದ್ದೇಶಿತ ಸ್ಥಳಕ್ಕೆ ತೆರಳಿದೆ ”ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿ ಹೇಳಿದ್ದಾರೆ.
ಆದರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಈ ಪ್ರತಿಕ್ರಿಯೆ ತೃಪ್ತಿ ನೀಡಿಲ್ಲ. ನನಗಿಂತ ಮುಂಚೆ ಕೆಲವು ಬಿಜೆಪಿ ನಾಯಕರು ಹೆಲಿಕಾಪ್ಟರ್ ನಲ್ಲಿ ತೆರಳಿದ್ದರು. ಅವರಿಗೆ ಯಾವುದೇ ರೀತಿಯ ಏರ್ ಟ್ರಾಫಿಕ್ ಇದ್ದಿರಲಿಲ್ಲ. ಏರ್ ಟ್ರಾಫಿಕ್ ಅವರಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ನನಗಿಂತ ಮೊದಲು ಬಿಜೆಪಿ ನಾಯಕರು ಟೇಕಾಫ್ ಆಗಿದ್ದಾರೆ ಎಂದು ಇಲ್ಲಿನ ಜನರು ಹೇಳಿದ್ದರು. ನಾನು ಪ್ರಯಾಣ ಮಾಡುವ ವೇಳೆ ಏರ್ ಟ್ರಾಫಿಕ್ ಎಂದು ಹೇಳಿದ್ದರು. ಆದರೆ, ಬಿಜೆಪಿ ನಾಯಕರು ಹೋಗುವಾಗ ಏರ್ ಟ್ರಾಫಿಕ್ ಇದ್ದಿರಲಿಲ್ಲವೇ. ನಾನು ಕ್ಲಿಯರೆನ್ಸ್ ಗಾಗಿ ಎರಡು ಗಂಟೆಗಳ ಕಾಲ ಕಾದಿದ್ದೇನೆ. ಆದರೆ, ಬಿಜೆಪಿ ನಾಯಕರು ಸ್ವಲ್ಪ ಹೊತ್ತೂ ಕಾಯುವ ಪ್ರಸಂಗವೇ ಬರುವುದಿಲ್ಲ. ಬಿಜೆಪಿಯವರು ಯಾವುದೇ ತಂತ್ರಗಳನ್ನು ಮಾಡಲಿ ಉತ್ತರ ಪ್ರದೇಶದ ಜನ ಇವರನ್ನು ಕಿತ್ತೊಗೆಯುತ್ತಾರೆ' ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
5 State Election : ಉತ್ತರದ ಗದ್ದುಗೆ ಗೆಲ್ಲಲು ಚಾಣಕ್ಯ ಹೊಸ ಸೂತ್ರ... ದೆಹಲಿಯಿಂದಲೇ ಚಕ್ರವ್ಯೂಹ
ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಬಿಗಿ ಪೈಪೋಟಿಯ ನಡುವೆ ಈ ಘಟನೆ ಗಮನಸೆಳೆದಿದೆ. ನನ್ನ ಹೆಲಿಕಾಪ್ಟರ್ ವಿಳಂಬದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಗಮನ ನೀಡುತ್ತದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ. "ನಾನು ಎರಡು ಗಂಟೆಗಳ ಕಾಲ ಹೆಲಿಕಾಪ್ಟರ್ ನಲ್ಲಿ ಕಾದಿದ್ದೇನೆ. ಚುನಾವಣಾ ಆಯೋಗ ಇದನ್ನು ಗಮನಿಸುತ್ತದೆ ಎಂದು ಭಾವಿಸಿದ್ದೇನೆ. ಸಮಾವೇಶಕ್ಕೆ ಭಾಗವಹಿಸುವ ಸಮಯದಲ್ಲಿ ಇಷ್ಟು ದೀರ್ಘ ಕಾಲದ ವಿಳಂಬವಾದಲ್ಲಿ ಏನು ಉತ್ತರ ನೀಡುವುದು? ಚುನಾವಣೆಗೂ ಮುನ್ನ ಬಿಜೆಪಿ ಎಲ್ಲಾ ರೀತಿಯ ರಾಜಕೀಯ ಮಾಡಲು ಸಿದ್ಧವಾಗಿದೆ" ಎಂದು ನನಗನಿಸಿದೆ ಎಂದು ಹೇಳಿದ್ದಾರೆ.
UP Elections: ಪಶ್ಚಿಮ ಯುಪಿ ಮೇಲೆ ಬಿಜೆಪಿ ಕಣ್ಣು, ಕಮಲ ಪಾಳಯದ ಎದುರಿದೆ ದೊಡ್ಡ ಸವಾಲು!
ಕ್ಷುಲ್ಲಕ ಕಾರಣಗಳಿಗಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮ ಹೆಲಿಕಾಪ್ಟರ್ ಅನ್ನು ನಿಲ್ಲಿಸಲಾಗುತ್ತಿದೆ ಎಂದು ಯಾದವ್ ಅವರು ಆರೋಪ ಮಾಡಿದ್ದರು. ಅವರು ಮೊದಲು ಲಖನೌ ವಾಣಿಜ್ಯ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ್ದರು ಮತ್ತು ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಪಕ್ಷದ ನಾಯಕ ಜಯಂತ್ ಚೌಧರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಬೇಕಿತ್ತು. ಇವೆಲ್ಲವೂ ಬಿಜೆಪಿಯ ಪಿತೂರಿಯ ಭಾಗ ಎಂದು ಅಖಿಲೇಶ್ ಯಾದವ್ ಹೇಳಿದ್ದು, ಈ ಎಲ್ಲಾ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂದು ಹೇಳಿದ್ದಾರೆ.