Choking on toffee accident: ಚಾಕೊಲೇಟ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಅದೇ ಚಾಕೊಲೇಟ್ ಒಂದು ಮುಗ್ಧ ಬಾಲಕನ ಪ್ರಾಣವನ್ನೇ ಬಲಿಪಡೆದಿದೆ ಎಂದರೆ ನೀವು ನಂಬುತ್ತೀರಾ?. ಈ ಘಟನೆ ಪ್ರತಿ ಪೋಷಕರೂ ಎಚ್ಚರದಿಂದಿರಬೇಕು ಎಂಬ ಸಂದೇಶ ನೀಡುತ್ತಿದೆ. ಏನಿದು ದುರಂತ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಮೂರೂವರೆ ವರ್ಷದ ಬಾಲಕ ಟಾಫಿ (ಚಾಕೊಲೇಟ್) ತಿನ್ನುವಾಗ ಅದು ಗಂಟಲಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಕ್ಕನ ಜೊತೆ ಅಂಗಡಿಗೆ ಹೋಗಿ ತಿಂಡಿ ತಂದ ಬಾಲಕ, ಮನೆಯಲ್ಲಿ ಚಾಕೊಲೇಟ್ ತಿನ್ನುವಾಗ ಈ ದುರಂತ ಸಂಭವಿಸಿದೆ.

Add Asianetnews Kannada as a Preferred SourcegooglePreferred

ತೀವ್ರವಾಗಿ ಒದ್ದಾಡಿ ಪ್ರಾಣಬಿಟ್ಟ ಬಾಲಕ

ಮೈನ್‌ಪುರಿಯಲ್ಲಿ ಈ ಕಂದಮ್ಮನ ಸಾವು ಪೋಷಕರನ್ನು ಆಘಾತಕ್ಕೀಡುಮಾಡಿದೆ. ಟಾಫಿ ಗಂಟಲಲ್ಲಿ ಸಿಲುಕಿದ್ದರಿಂದ ಬಾಲಕನಿಗೆ ಉಸಿರಾಡಲು ಸಾಧ್ಯವಾಗದೆ ತೀವ್ರವಾಗಿ ಒದ್ದಾಡಿದ್ದಾನೆ. ಕೂಡಲೇ ಪೋಷಕರು ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೂ ಸಹ, ಪರೀಕ್ಷಿಸಿದ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಈ ಘಟನೆಯಿಂದ ಇಡೀ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಅಕ್ಕನ ಜೊತೆ ಅಂಗಡಿಗೆ ಹೋಗಿದ್ದ ಆನಂದ್

ಭೋಗಾಂವ್ ಕೊತ್ವಾಲಿ ವ್ಯಾಪ್ತಿಯ ಛಾಛಾ ಗ್ರಾಮದ ಮನೀಶ್ ಎಂಬುವವರ ಮೂರೂವರೆ ವರ್ಷದ ಮಗ ಆನಂದ್, ತನ್ನ 7 ವರ್ಷದ ಅಕ್ಕ ಶಗುನ್ ಜೊತೆಗೆ ಗ್ರಾಮದ ಕಿರಾಣಿ ಅಂಗಡಿಗೆ ನಮಕೀನ್ ಖರೀದಿಸಲು ಹೋಗಿದ್ದನು. ಇಬ್ಬರೂ ಅಕ್ಕ-ತಮ್ಮ ಅಂಗಡಿಯಲ್ಲೇ ಕುಳಿತು ನಮಕೀನ್ ತಿಂದಿದ್ದರು. ಆ ಸಮಯದಲ್ಲಿ ತಂದೆ ಮನೀಶ್ ಕೂಡ ಅಂಗಡಿಯಲ್ಲೇ ಇದ್ದರು.

ಹಠ ಹಿಡಿದು ಟಾಫಿ ಕೊಡಿಸಿಕೊಂಡಿದ್ದ ಮಗ
ಅಲ್ಲಿ ತಂದೆಯನ್ನು ಕಂಡ ಆನಂದ್ ಚಾಕೊಲೇಟ್ ಬೇಕೆಂದು ಹಠ ಹಿಡಿದಿದ್ದನು. ಮಗನ ಹಠಕ್ಕೆ ಮಣಿದ ತಂದೆ ಮನೀಶ್ ಚಾಕೊಲೇಟ್ ಕೊಡಿಸಿದ್ದರು. ಚಾಕೊಲೇಟ್ ಪಡೆದ ಆನಂದ್ ಸಂತೋಷದಿಂದ ಮನೆಗೆ ಮರಳಿದ್ದನು. ಆದರೆ ಮನೆಯಲ್ಲಿ ಅದನ್ನು ತಿನ್ನಲು ಹೋದಾಗ ಅದು ಆಕಸ್ಮಿಕವಾಗಿ ಗಂಟಲಿನಲ್ಲಿ ಸಿಲುಕಿಕೊಂಡಿದೆ.

ಟಾಫಿ ಸಿಲುಕುತ್ತಿದ್ದಂತೆ ಹದಗೆಟ್ಟ ಬಾಲಕನ ಸ್ಥಿತಿ
ಗಂಟಲಿನಲ್ಲಿ ಟಾಫಿ ಸಿಲುಕಿದ ತಕ್ಷಣ ಆನಂದ್‌ಗೆ ಉಸಿರಾಟದ ಸಮಸ್ಯೆ ಶುರುವಾಯಿತು. ಬಾಲಕ ನೋವಿನಿಂದ ಒದ್ದಾಡುವುದನ್ನು ಕಂಡು ಮನೆಯವರು ಗಾಬರಿಯಾದರು. ತಕ್ಷಣ ಆಸ್ಪತ್ರೆಗೆ ಧಾವಿಸಿದರೂ ಸಹ ಅಷ್ಟರಲ್ಲೇ ಕಾಲ ಮಿಂಚಿತ್ತು. ಮೃತರಾದ ಆನಂದ್ ಮೂವರು ಮಕ್ಕಳಲ್ಲಿ ಎಲ್ಲರಿಗಿಂತ ಚಿಕ್ಕವನಾಗಿದ್ದ ಮತ್ತು ಮನೆಯವರೆಲ್ಲರ ಪ್ರೀತಿಯ ಕಂದನಾಗಿದ್ದನು.

ಘಟನೆಯ ನಂತರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡದೆ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಅಕಾಲಿಕ ಸಾವು ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.