ಆರ್ಎಸ್ಎಸ್ ಜಿಲ್ಲಾ ಪ್ರಚಾರಕ ಜೈಕಿಶೋರ್ ಅವರ ಮೇಲೆ ಗುಂಪು ಹಲ್ಲೆ ನಡೆದಿದೆ. ಕಿರಿದಾದ ರಸ್ತೆಯಲ್ಲಿ ಕಾರ್ ಮತ್ತು ಬೈಕ್ ನಡುವಿನ ಜಗಳ ತಾರಕಕ್ಕೇರಿ, ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಮೆಕ್ಯಾನಿಕ್ ಉಪಕರಣಗಳಿಂದ ದಾಳಿ ನಡೆಸಿ, ಅವರನ್ನು ಚರಂಡಿ ಬಳಿ ಎಸೆದು ಪರಾರಿಯಾಗಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸ್ಥಳೀಯ ಆರ್ಎಸ್ಎಸ್ ಜೈಕಿಶೋರ್ ಎಂಬವರ ಮೇಲೆ ಗುಂಪು ಹಲ್ಲೆ ನಡೆಸಿದೆ. ಈ ಘರ್ಷಣೆಯಲ್ಲಿ ಜೈಕಿಶೋರ್ ಅವರ ಕಾರ್ ಸಹ ಜಖಂಗೊಳಿಸಲಾಗಿದೆ. ಜೈಕಿಶೋರ್ ಅವರು ತಲಾಬ್ ಚೌರಾಹಾದಿಂದ ನವಲ್ ನಗರದಲ್ಲಿರುವ ಸಂಘಟನೆಯ ಕಚೇರಿಗೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಹತ್ರಾಸ್ನ ನವಲ್ ನಗರದಲ್ಲಿ ಹಲ್ಲೆ ನಡೆದಿದೆ. ಈ ಗಲಾಟೆ ಬಳಿಕ ಹತ್ರಾಸ್ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಗಾಯಗೊಂಡಿರುವ ಜೈಕಿಶೋರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಗಲಾಟೆಗೆ ಕಾರಣ ಏನು?
ಆರ್ಎಸ್ಎಸ್ ಜಿಲ್ಲಾ ಪ್ರಚಾರಕರಾಗಿರುವ ಜೈಕಿಶೋರ್ ಕಾರ್ ಹತ್ರಾಸ್ನ ನವಲ್ ನಗರದ ಕಿರಿದಾದ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಎದುರಾದ ಬೈಕ್ ಸವಾರರು ಕಾರ್ ಹಿಂದಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದಾನೆ. ಈ ವೇಳೆ ಯಾರು ಹಿಂದೆ ಸರಿಬೇಕು ಎಂಬುದರ ನಡುವೆ ಇರ್ವರ ನಡುವೆ ಗಲಾಟೆ ಶುರುವಾಗಿದೆ. ಜಗಳದ ಸಂದರ್ಭದಲ್ಲಿ ತಾನು ಆರ್ಎಸ್ಎಸ್ ಮುಖಂಡ ಎಂದು ಜೈಕಿಶೋರ್ ಮುಂದಾಗುತ್ತಿದ್ದಂತೆ ಬೈಕ್ ಸವಾರ ಇಟ್ಟಿಗೆ ಮತ್ತು ಮೆಕ್ಯಾನಿಕ್ ಉಪಕರಣಗಳಿಂದ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಬೈಕ್ ಸವಾರ ಕರೆ ಮಾಡಿ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದಾನೆ. ಕಾರ್ನಲ್ಲಿದ್ದ ಜೈಕಿಶೋರ್ ಅವರನ್ನು ಹೊರಗೆಳೆದು ಥಳಿಸಲಾಗಿದೆ. ಇದು ದೊಡ್ಡಮಟ್ಟದ ಗಲಾಟೆ ಆಗಬಹುದು ಎಂದು ಹೆದರಿದ ಸ್ಥಳೀಯರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡಿದ್ದಾರೆ. ಬೈಕ್ ಸವಾರರು ಬದಿಯಲ್ಲಿದ್ದ ಮೆಕ್ಯಾನಿಕ್ ಅಂಗಡಿಯಿಂದ ಉಪಕರಣಗಳನ್ನು ತಂದು ಹಲ್ಲೆ ನಡೆಸಿದ್ದಾರೆ.
ಚರಂಡಿ ಬಳಿ ಎಸೆದು ಬೈಕ್ ಸವಾರರು ಎಸ್ಕೇಪ್
ಹಲ್ಲೆ ಬಳಿಕ ಜೈಕಿಶೋರ್ ಅವರನ್ನು ಚರಂಡಿ ಬಳಿ ಎಸೆದು ಬೈಕ್ ಸವಾರರು ಎಸ್ಕೇಪ್ ಆಗಿದ್ದರು. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಜೈಕಿಶೋರ್ ಅವರನ್ನು ಗುರುತಿಸಿ ಸ್ಥಳೀಯ ವಿಎಚ್ಪಿ, ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕಾರ್ಯಕರ್ತರು ಜೈಕಿಶೋರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಪಕ್ಕದಲ್ಲಿ ಬೋರ್ ಕೊರೆಸುತ್ತಿದ್ದಾಗ ನೆರೆಮನೆಯ ಒಳಗೆ ನೆಲ ಸೀಳಿ ಚಿಮ್ಮಿದ ನೀರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸ್ ಆಯುಕ್ತ ಯೋಗೇಂದ್ರ ಕೃಷ್ಣ ನಾರಾಯಣ್ ಅವರು ಕೊತ್ವಾಲಿ ಸದರ್ ಮತ್ತು ಹತ್ರಾಸ್ ಗೇಟ್ ಪೊಲೀಸರೊಂದಿಗೆ ಪರಿಶೀಲನೆ ನಡೆಸಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಎಸ್ಕೇಪ್ ಆಗಿರುವ ಬೈಕ್ ಸವಾರರ ಹುಡುಕಾಟಕ್ಕೆ ಸೂಚನೆ ನೀಡಲಾಗಿದೆ. ಆರೋಪಿಗಳ ಬಂಧನಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಇದನ್ನೂ ಓದಿ: ರೇಷ್ಮಾ ಆಂಟಿ ಸಂತೋಷದ ಕಣ್ಣೀರು: ವರ್ಷಗಳ ನಂತರ ಬಂದ ಕಾಲ್; ಹೊರಟೇ ಬಿಟ್ರು ಹಾಸನಕ್ಕೆ


