ಕೇರಳ ಸರ್ಕಾರಕ್ಕೆ ಲೈಫ್‌ ಮಿಷನ್‌ ಪ್ರಾಜೆಕ್ಟ್‌ನ ಉರುಳು ಮತ್ತಷ್ಟು ಬಿಗಿಯಾಗಿದೆ. ಫೆರಾ ಕಾಯ್ದೆಯ ಉಲ್ಲಂಘನೆಯ ಆರೋಪದ ನಡುವೆ ಲೈಫ್‌ ಮಿಷನ್‌ ಪ್ರಾಜೆಕ್ಟ್‌ಗೆ ಯುಎಇಯ ರೆಡ್‌ ಕ್ರೆಸೆಂಟ್‌ ಸಂಸ್ಥೆಯನ್ನು ಹೇಗೆ ಸೇರಿಸಿಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ಶಿವಶಂಕರ್‌ ನೀಡಿದ ಸಲಹೆಗಳ ವಾಟ್ಸಾಪ್‌ ಲೀಕ್‌ ಬಹಿರಂಗವಾಗಿದೆ. 

ತಿರುವನಂತರಪುರ (ಫೆ.17): 2018ರ ಪ್ರವಾಹದ ಸಂದರ್ಭದಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತರದೆ ಯುಎಇಯ ರೆಡ್‌ ಕ್ರೆಸೆಂಟ್‌ ಸಂಸ್ಥೆಯೊಂದಿಗೆ ಡೀಲ್‌ ಮಾಡಿದ ವಿಚಾರದಲ್ಲಿ ಸಿಬಿಐ ಕೇರಳ ಸರ್ಕಾರವನ್ನು ಕೋರ್ಟ್‌ ಮೆಟ್ಟಿಲಿಗೆ ತಂದಿದೆ. ಇದನ್ನು ನೇರ ಫೆರಾ ಕಾಯ್ದೆಯ ಉಲ್ಲಂಘನೆ ಎಂದು ಸಿಬಿಐ ಹಾಗೂ ಇಡಿ ಹೇಳಿದ್ದರೆ, ಅಂಥ ಯಾವುದೇ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದರು. ಅದಲ್ಲದೆ, ಕೇಸ್‌ಅನ್ನು ರದ್ದು ಮಾಡಲು ಮನವಿ ಮಾಡಿದ್ದರು. ಆದರೆ, ಕೋರ್ಟ್‌ ಮಾತ್ರ ಕೇಸ್‌ ರದ್ದು ಮಾಡಲು ನಿರಾಕರಿಸಿದೆ. ಈ ನಡುವೆ ಇಡಿ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್‌ ಅವರನ್ನು ಬಂಧನ ಮಾಡಿತ್ತು. ಶಿವಶಂಕರ್‌ ಹಾಗೂ ಯುಎಇ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಾ ಸುರೇಶ್‌ ನಡುವಿನ ಚಾಟ್‌ ಕೂಡ ಲೀಕ್‌ ಆಗಿದ್ದು, ಪ್ರಕರಣ ಸರ್ಕಾರದ ಪಾಲಿಗೆ ಇನ್ನಷ್ಟು ಕಗ್ಗಂಟು ಮಾಡಿದೆ. 2019ರ ಸೆಪ್ಟೆಂಬರ್‌ನಲ್ಲಿ ನಡೆದ ವಾಟ್ಸಾಪ್‌ ಚಾಟ್‌ನಲ್ಲಿ ಯುಎಇಯ ರೆಡ್‌ ಕ್ರೆಸೆಂಟ್‌ಅನ್ನು ಲೈಫ್‌ ಮಿಷನ್‌ ಪ್ರಾಜೆಕ್ಟ್‌ಗೆ ಸೇರಿಸಿಕೊಳ್ಳುವುದು ಹೇಗೆ ಎನ್ನುವ ವಿಚಾರವಾಗಿ ಶಿವಶಂಕರ್‌ ಸಲಹೆ ನೀಡಿದ್ದು ಬಹಿರಂಗಗೊಂಡಿದೆ. ಶಿವಶಂಕರ್ ಅವರೇ ರೆಡ್ ಕ್ರೆಸೆಂಟ್ ಸರ್ಕಾರಕ್ಕೆ ನೀಡಬೇಕಾದ ಪತ್ರದ ರೂಪುರೇಷೆಯನ್ನೂ ಕೂಡ ನೀಡಿದ್ದರು.



ಸ್ವತಃ ರಾಯಭಾರಿ ಕಚೇರಿಯಿಂದ ಇದೇ ರೀತಿಯ ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿಕೊಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅದಲ್ಲದೆ, ಈ ಎರಡೂ ಪತ್ರವನ್ನು ಸಿದ್ಧ ಮಾಡಿದ ಬಳಿಕ ಅದನ್ನು ತಮಗೆ ನೀಡುವಂತೆಯೂ ಶಿವಶಂಕರ್‌ ಹೇಳಿದ್ದರು. ಅಗತ್ಯ ಬಿದ್ದಲ್ಲಿ, ಮುಖ್ಯಮಂತ್ರಿಯವರ ಸಹಾಯಕ ಆಪ್ತ ಕಾರ್ಯದರ್ಶಿಯಾಗಿದ್ದ ಸಿಎಂ ರವೀಂದ್ರನ್‌ ಅವರಿಗೆ ಕರೆ ಮಾಡುವಂತೆಯೂ ಸ್ವಪ್ನಾ ಸುರೇಶ್‌ಗೆ ಶಿವಶಂಕರ್‌ ಹೇಳಿದ್ದರು. ಲೈಫ್‌ ಮಿಷನ್‌ ಪ್ರಾಜೆಕ್ಟ್‌ನೊಂದಿಗೆ ಯುಎಇಯ ರೆಡ್‌ ಕ್ರೆಸೆಂಟ್‌ಅನ್ನು ಸೇರಿಸಿಕೊಂಡಿದ್ದು ಶಿವಶಂಕರ್‌ ಅವರ ಉದ್ದೇಶಿತ ಕ್ರಮವಾಗಿತ್ತು ಎಂದು ಇದರಿಂದ ಸಿಬಿಐ ಹಾಗೂ ಇಡಿ ಅಂದಾಜಿಸಬಹುದು.

ಕೇರಳ ಚಿನ್ನ ಸ್ಮಗ್ಲಿಂಗ್‌ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌, ಸ್ವಪ್ನಾ ಸುರೇಶ್‌ ಶಾಕಿಂಗ್ ಆರೋಪ: ಸಿಎಂ, ಪತ್ನಿ, ಪುತ್ರಿಗೆ ಕುತ್ತು!

ಲೈಫ್‌ ಮಿಷನ್‌ ಪ್ರಾಜೆಕ್ಟ್‌ನ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಇದರ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಶಿವಶಂಕರ್‌ ಕೇಳಿಕೊಂಡಿದ್ದರು ಎನ್ನುವ ಮಾಹಿತಿಯೂ ಬಂದಿದೆ. ಯುಎಇ ಮೂಲದ ರೆಡ್‌ ಕ್ರೆಸೆಂಟ್‌ಅನ್ನು ಲೈಫ್‌ ಮಿಷನ್‌ ಪ್ರಾಜೆಕ್ಟ್‌ನ ಭಾಗವಾಗುವಂತೆ ಮಾಡುವುದರ ಹಿಂದೆ ದೊಡ್ಡ ಉದ್ದೇಶ ಅಡಗಿತ್ತು ಎನ್ನುವುದು ಇದರಿಂದ ಸರ್ಥವಾಗುತ್ತದೆ. ಶಿವಶಂಕರ್ ಮತ್ತು ಸ್ವಪ್ನಾ ಅವರ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಇಡಿ ಅಧಿಕಾರಿಗಳು ಈ ಮಾಹಿತಿ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್‌ 7ರ ಮಧ್ಯಾಹ್ನದ ಬಳಿಕ ನಡೆದಿರುವ ಚಾಟ್‌ನ ವಿವರಗಳು ಈಗ ಬಹಿರಂಗವಾಗಿದೆ.

ಸ್ವಪ್ನಾ ಸುರೇಶ್‌ ಸ್ಮಗ್ಲಿಂಗ್ ಚಿನ್ನ ಭಯೋತ್ಪಾದನೆಗೆ ಬಳಕೆ?

ಪ್ರತಿ ಬಾರಿ ಸ್ವಪ್ನಾ, ತನ್ನ ಮತ್ತು ಸ್ವಪ್ನಾ ಹೆಸರಿನಲ್ಲಿರುವ ಲಾಕರ್ ಅನ್ನು ತೆರೆದಾಗ ಶಿವಶಂಕರ್‌ಗೆ ಅದರ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ನಿನ್ನೆ ಶಿವಶಂಕರ್ ಅವರ ಚಾರ್ಟೆಡ್ ಅಕೌಂಟೆಂಟ್ ವೇಣುಗೋಪಾಲ್ ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ. ಶಿವಶಂಕರ್ ಹೇಳಿದ ನಂತರ ತನ್ನ ಮತ್ತು ಸ್ವಪ್ನಾ ಹೆಸರಿನಲ್ಲಿರುವ ಲಾಕರ್ ತೆರೆದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ಮೊದಲ ಹಂತದಲ್ಲಿ ಲಾಕರ್ ತೆರೆದಾಗ ಅದರಲ್ಲಿ 30 ಲಕ್ಷ ರೂಪಾಯಿ ಇತ್ತು. ಶಿವಶಂಕರ್‌ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದೆ ಎಂದಿದ್ದಾರೆ.

ಏನಿದು ಲೈಫ್‌ ಮಿಷನ್‌ ಹಗರಣ: ಲೈಫ್ ಮಿಷನ್ 2018 ರ ಕೇರಳ ಪ್ರವಾಹದ ನಿರಾಶ್ರಿತ ಸಂತ್ರಸ್ತರಿಗೆ ಉಚಿತ ವಸತಿ ಒದಗಿಸುವ ಸರ್ಕಾರಿ ಯೋಜನೆಯಾಗಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದ್ದಾಗ ಯೋಜನೆಯಲ್ಲಿನ ಅಕ್ರಮಗಳು ಬೆಳಕಿಗೆ ಬಂದದ್ದವು. 2020 ರ ಅಕ್ಟೋಬರ್‌ನಲ್ಲಿ ಸ್ವಪ್ನಾ ಸುರೇಶ್ ಅವರ ಬ್ಯಾಂಕ್ ಲಾಕರ್‌ನಿಂದ ಇಡಿ 2 ಕೋಟಿ ರೂಪಾಯಿ ನಗದು ಮತ್ತು 2 ಕೆಜಿ ಚಿನ್ನವನ್ನು ಪಡೆದಿದೆ ಎಂದು ವರದಿಯಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್, ಶಿವಶಂಕರ್ ಪಡೆದ ಕಮಿಷನ್‌ನಿಂದ ಹಣ ಬಂದಿದೆ ಎಂದು ಇಡಿಗೆ ತಿಳಿಸಿದ್ದರು. ತ್ರಿಶ್ಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ 2018 ರ ಪ್ರವಾಹ ಸಂತ್ರಸ್ತರಿಗೆ ವಸತಿ ಒದಗಿಸುವ ಸಲುವಾಗಿ ಅಂತರರಾಷ್ಟ್ರೀಯ ಎನ್‌ಜಿಓ ದಿ ರೆಡ್ ಕ್ರೆಸೆಂಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಹಣವನ್ನು ತನ್ನ ಲಾಕರ್‌ನಲ್ಲಿ ಇಡುವಂತೆ ಶಿವಶಂಕರ್ ಸ್ವಪ್ನಾಗೆ ಹೇಳಿದ್ದರು ಎನ್ನಲಾಗಿದೆ.