ಮಧ್ಯಪ್ರದೇಶದ ಇಂದೋರ್‌ನಲ್ಲಿ, ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕ್ ಕಾರಿನಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮೂರಂತಸ್ತಿನ ಮನೆಗೆ ವ್ಯಾಪಿಸಿದೆ. ಈ ದುರಂತದಲ್ಲಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ, ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ.

ಇಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವೇಳೆ ದುರಂತ: ಶಾರ್ಟ್‌ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

ಇಂದೋರ್‌: ಚಾರ್ಜ್‌ಗೆ ಇಟ್ಟ ಇಲೆಕ್ಟ್ರಿಕ್ ಕಾರೊಂದರಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿ ಕ್ಷಣದಲ್ಲೇ ಮನೆಗೆ ವ್ಯಾಪಿ ಮನೆಯಲ್ಲಿದ್ದ 8 ಜನರನ್ನು ಬಲಿ ಪಡೆದ ಘಟನೆ ಮಧ್ಯಪ್ರದೇಶದ ಇಂದೋರ್‌ನ ಬಂಗಾಳಿ ಚೌಕ್ ಬಳಿಯ ಕಾಲೋನಿಯೊಂದರಲ್ಲಿ ನಡೆದಿದೆ. ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಮನೆಯ ಹೊರಗೆ ಚಾರ್ಜ್ ಆಗುತ್ತಿದ್ದ ಇಲೆಕ್ಟ್ರಿಕ್ ಕಾರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ಬೆಂಕಿ ಕೆಲ ಕ್ಷಣದಲ್ಲೇ ಮೂರಂತಸ್ಥಿನ ಮನೆಗೆ ಹಬ್ಬಿದೆ. ರಬ್ಬರ್ ವ್ಯಾಪಾರಿ ಮನೋಜ್ ಪುಗ್ಲಿಯಾ ಎಂಬುವವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಅವರ ಸೊಸೆ ಸಿಮ್ರಾನ್ ಸೇರಿದಂತೆ ಈ ದುರಂತದಲ್ಲಿ ಒಟ್ಟು 8 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಉಳಿದ ಆರು ಜನ ಮನೋಜ್ ಪುಗ್ಲಿಯಾ ಅವರ ಸಂಬಂಧಿಗಳಾಗಿದ್ದರು. ಅವರು ಬಿಹಾರದ ಕಿಶನ್‌ಗಂಜ್‌ನಿಂದ ಒಂದು ದಿನ ಮೊದಲಷ್ಟೇ ಇಂದೋರ್‌ಗೆ ಬಂದಿದ್ದರು. ಆದರೆ ಇಂದು ನಸುಕಿನ ಜಾವ 3.30ರಿಂದ 4 ಗಂಟೆ ಸಮಯದಲ್ಲಿ ಬಂಗಾಳಿ ಚೌಕ್ ಬಳಿ ಇರುವ ಗ್ರೇಟರ್ ಬ್ರಿಜೇಶ್ವರಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಮನೆಯಲ್ಲಿದ್ದ 8 ಜನ ಸಜೀವ ದಹನ

ಕಾರಿನಲ್ಲಿ ಉಂಟಾದ ಶಾರ್ಟ್‌ಸರ್ಕ್ಯೂಟ್‌ನಿಂದ ಆರಂಭವಾದ ಬೆಂಕಿ ಮನೆಯೊಳಗಿದ್ದ ಗ್ಯಾಸ್ ಸಿಲಿಂಡರ್‌ಗೆ ತಲುಪಿದ್ದು, ಅಲ್ಲಿ 4 ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದ್ದು, ಅವು ಒಂದಾದ ಮೇಲೊಂದರಂತೆ ಸ್ಫೋಟಿಸುವುದಕ್ಕೆ ಶುರುವಾಗಿದೆ. ಇವುಗಳ ಸ್ಫೋಟ ಆ ಪ್ರದೇಶವನ್ನೇ ನಡುಗಿಸಿವೆ. ಸ್ಫೋಟದ ಶಕ್ತಿ ಎಷ್ಟು ಪ್ರಬಲವಾಗಿತ್ತೆಂದರೆ ಮನೆಯ ಒಂದು ಭಾಗ ಕುಸಿದುಬಿತ್ತು, ಹೀಗಾಗಿ ಒಳಗೆ ಮಲಗಿದ್ದವರಿಗೆ ಚೇತರಿಸಿಕೊಳ್ಳಲು ಅವಕಾಶವಿರಲಿಲ್ಲ.

ಇದನ್ನೂ ಓದಿ: ರಾಯಚೂರು ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ: ಗದಗ: ವ್ಯಕ್ತಿ ಸಿಡಿಲಿಗೆ ಬಲಿ: ಚಾಮರಾಜನಗರ: ಆಲಿಕಲ್ಲು ಮಳೆಗೆ ಬೆಳೆ ಹಾನಿ

ಬೆಂಕಿ ಹೊತ್ತಿಕೊಂಡ ತಕ್ಷಣ, ಮನೆಯಲ್ಲಿ ಸಂಗ್ರಹಿಸಲಾಗಿದ್ದ ಸಿಲಿಂಡರ್‌ಗಳು ಸ್ಫೋಟಗೊಳ್ಳಲು ಪ್ರಾರಂಭಿಸಿದವು. ನಾಲ್ಕು ಗ್ಯಾಸ್ ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಸ್ಫೋಟಗೊಂಡು ಇಡೀ ಪ್ರದೇಶವನ್ನು ನಡುಗಿಸಿದವು. ಅಲ್ಲದೇ ಮನೆಯ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದರಿಂದ ಮನೆಯ ಡಿಜಿಟಲ್ ಲಾಕ್ ಇರುವ ಬಾಗಿಲುಗಳು ತೆರೆದುಕೊಳ್ಳದೇ ಒಳಗಿದ್ದವರು ಅಲ್ಲೇ ಸಿಲುಕುವಂತಾಯ್ತು. ಈ ದುರಂತದಲ್ಲಿ ಮೃತರಾದವರನ್ನು 60 ವರ್ಷದ ಮನೋಜ್ ಜೈನ್, 65 ವರ್ಷದ ವಿಜಯ್ ಸೇಥಿಯಾ, 22 ವರ್ಷದ ಚೋಟು ಸೇಥಿಯಾ, 60 ವರ್ಷದ ಸುಮನ್ ವಿಜಯ್ ಸೇಥಿಯಾ, 30 ವರ್ಷದ ಸಿಮ್ರಾನ್, 12 ವರ್ಷದ ರಾಶಿ ಸೇಥಿಯಾ, 35 ವರ್ಷದ ಟೀನು, 8 ವರ್ಷದ ತನಯ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸೌರಭ್ ಪುಗ್ಲಿಯಾ, ಸುನೀತಾ, ಅಶೀಶ್, ಹರ್ಷಿತ್ ಪುಗ್ಲಿಯಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಒಡೆದ ತುಂಗಭದ್ರಾ ಎಡದಂಡೆ ಕಾಲುವೆ: ಅಪಾರ ಪ್ರಮಾಣ ನೀರು ಪೋಲು: ರೈತರ ಜಮೀನಿಗೆ ನುಗ್ಗಿದ ನೀರು

ಮೃತರಲ್ಲಿ ವಿಜಯ್ ಸೇಥಿಯಾ ಅವರು ತಮ್ಮ ಪತ್ನಿ ಸುಮನ್ ವಿಜಯ್ ಸೇಥಿಯಾ ಅವರ ಜೊತ ಬಿಹಾರದ ಕಿಶನ್‌ಗಂಜ್‌ನಿಂದ ಇಂದೋರ್‌ಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಬಂದಿದ್ದರು. ಬಿಹಾರದ ಕಿಶನ್‌ಗಂಜ್ ನಿವಾಸಿ ಬಿಜ್ಲಿ ದೇವಿ ಅವರ ಪ್ರಕಾರ, ವಿಜಯ್ ಸೇಥಿಯಾ ಸೌಂದರ್ಯವರ್ಧಕ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಅವರಿಗೆ ದವಡೆಯ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ತಮ್ಮ ಮಗಳು ಮತ್ತು ಅಳಿಯನ ಮನೆ ಇರುವ ಇಂದೋರ್‌ಗೆ ಕುಟುಂಬದೊಂದಿಗೆ ಪ್ರಯಾಣ ಬೆಳೆಸಿದ್ದರು. ಈ ದುರಂತದಲ್ಲಿ ವಿಜಯ್ ಸೇಥಿಯಾ ಅವರ ಪತ್ನಿ, ಮಗ, ಸಹೋದರಿ ಮತ್ತು ಮೈದುನ ಸಾವನ್ನಪ್ಪಿದ್ದಾರೆ. ಇವರು ಬಿಹಾರದ ಕಿಶನ್‌ಗಂಜ್‌ನಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದು, ಹೊಸ ಮನೆ ನಿರ್ಮಿಸುವ ಪ್ರಕ್ರಿಯೆಯಲ್ಲಿದ್ದರು. ಘಟನೆ ನಡೆಯುವ ಕೆಲವು ದಿನಗಳ ಮೊದಲು ಅವರು ಸೇಥಿಯಾ ಅವರ ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತಲುಪಿಸಿದ್ದಾಗಿ ಸೌರಭ್ ಎಂಬುವವರು ಹೇಳಿದ್ದಾರೆ.