ರಾಂಪುರದಲ್ಲಿ, ಹುಲ್ಲು ತುಂಬಿದ ಟ್ರಕ್ ನಿಯಂತ್ರಣ ತಪ್ಪಿ ವಿದ್ಯುತ್ ಇಲಾಖೆಯ ಅಧಿಕಾರಿಯ ಬೊಲೆರೋ ವಾಹನದ ಮೇಲೆ ಉರುಳಿಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಬೊಲೆರೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದುರಂತವು ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಉತ್ತರ ಪ್ರದೇಶದ ರಾಂಪುರದಲ್ಲಿ ಭಾನುವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ವಾಹನದ ಮೇಲೆ ಹುಲ್ಲು ತುಂಬಿದ ಟ್ರಕ್ ಉರುಳಿಬಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಬಿಲಾಸ್‌ಪುರ ಕಡೆಗೆ ಹೋಗುತ್ತಿದ್ದ ಹುಲ್ಲಿನ ಟ್ರಕ್, ಸ್ಥಳೀಯ ಪವರ್ ಹೌಸ್ ಬಳಿಯ ಪಹಾಡಿ ಗೇಟ್ ಸಮೀಪದ ನೈನಿತಾಲ್ ರಸ್ತೆಯಲ್ಲಿ ತಿರುವು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.

ರಾಂಪುರದ ಹೊಸ ವೈರಲ್ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಇದನ್ನು ರಸ್ತೆ ಸುರಕ್ಷತಾ ಜಾಗೃತಿ ಖಾತೆಯಾದ @motordave2 ಎಕ್ಸ್‌ನಲ್ಲಿ ಹಂಚಿಕೊಂಡಿದೆ. '#Rampur Disturbing Visuals #Chaos around #Intersection' ಎಂದು ಟ್ಯಾಗ್ ಮಾಡಲಾದ ಈ ಕ್ಲಿಪ್, ದುರಂತ ಅಪಘಾತವನ್ನು ತೋರಿಸುತ್ತದೆ.

ಬೊಲೆರೋ ಮೇಲೆ ಉರುಳಿಬಿದ್ದ ಟ್ರಕ್:

ಪೊಲೀಸ್ ವರದಿಗಳ ಪ್ರಕಾರ, ಟ್ರಕ್ ತಿರುವು ತೆಗೆದುಕೊಳ್ಳುವಾಗ ಅದರ ಚಕ್ರವು ರೋಡ್ ಡಿವೈಡರ್ ಮೇಲೆ ಹತ್ತಿದೆ. ಇದರಿಂದಾಗಿ ವಾಹನವು ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿಯೇ ಇದ್ದ ಬೊಲೆರೊ ವಾಹನದ ಮೇಲೆ ಉರುಳಿ ಬಿದ್ದು ನುಜ್ಜುಗುಜ್ಜು ಮಾಡಿದೆ. ಆ ವಾಹನವು ವಿದ್ಯುತ್ ಇಲಾಖೆಯ ಎಸ್‌ಡಿಒ (ಉಪ-ವಿಭಾಗಾಧಿಕಾರಿ) ಅವರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಬೊಲೆರೊ ಚಾಲಕ, ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಜರ್ ಟೋಲಾ ನಿವಾಸಿ 54 ವರ್ಷದ ಫಿರಾಸತ್ ಸಾವನ್ನಪ್ಪಿದ್ದಾರೆ. ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ ನಂತರ, ಮೂರು ಸ್ಥಳೀಯ ಪೊಲೀಸ್ ಠಾಣೆಗಳ ಸಿಬ್ಬಂದಿ ಸೇರಿದಂತೆ ತುರ್ತು ಸಹಾಯದ ತಂಡಗಳು ಸ್ಥಳಕ್ಕೆ ಧಾವಿಸಿವೆ.

Scroll to load tweet…

ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ

ಟ್ರಕ್ ಉರುಳಿದಾಗ ಪಕ್ಕದಲ್ಲೇ ಸಾಗುತ್ತಿದ್ದ ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಆದರೂ ಅವರ ವಾಹನ ಕೂಡ ಕ್ಷಣಕಾಲ ಅವಘಡದಲ್ಲಿ ಸಿಲುಕಿತ್ತು. ಪೊಲೀಸ್, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಕ್ರೇನ್ ಬಳಸಿ ಸಿಕ್ಕಿಹಾಕಿಕೊಂಡಿದ್ದ ಟ್ರಕ್ ಮತ್ತು ಬೊಲೆರೊವನ್ನು ಹೊರತೆಗೆದು ರಸ್ತೆಯನ್ನು ತೆರವುಗೊಳಿಸಿದವು. ಬೊಲೆರೊ ಸಂಪೂರ್ಣವಾಗಿ ಜಖಂಗೊಂಡಿದ್ದು, ಚಾಲಕನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಎಸ್‌ಪಿ ವಿದ್ಯಾ ಸಾಗರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಯ ಮೇಲ್ವಿಚಾರಣೆ ನಡೆಸಿದರು. ಈ ಅಪಘಾತವು ಭಾರೀ ವಾಹನಗಳ ಸುರಕ್ಷತೆ, ಜಂಕ್ಷನ್‌ಗಳಲ್ಲಿ ವಾಹನ ನಿಯಂತ್ರಣ ಮತ್ತು ಈ ಭಾಗದಲ್ಲಿನ ರಸ್ತೆ ಸಂಚಾರದ ಅಪಾಯಗಳ ಬಗ್ಗೆ ಮತ್ತೊಮ್ಮೆ ಕಳವಳ ಮೂಡಿಸಿದೆ. ಟ್ರಕ್ ಸ್ಥಿರತೆ ಕಳೆದುಕೊಂಡು ಉರುಳಲು ಕಾರಣವಾದ ಸಂದರ್ಭಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಜನನಿಬಿಡ ಗ್ರಾಮೀಣ ಹೆದ್ದಾರಿಗಳಲ್ಲಿ ಸುಧಾರಿತ ರಸ್ತೆ ಸುರಕ್ಷತಾ ನಿಯಮಗಳಿಗೆ ಕರೆ ನೀಡಿದ್ದಾರೆ.