ಇಸ್ರೋದ ಇನ್ಸಾಟ್-3ಡಿಆರ್ ಉಪಗ್ರಹವು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಏಕಕಾಲದಲ್ಲಿ ಸಕ್ರಿಯವಾಗಿರುವ ಎರಡು ದೈತ್ಯ ಮಳೆ ಮಾರುತಗಳ ಚಿತ್ರಗಳನ್ನು ಸೆರೆಹಿಡಿದಿದೆ. ಈ ಹವಾಮಾನ ವ್ಯವಸ್ಥೆಗಳು ದೇಶದಾದ್ಯಂತ ಭಾರಿ ಮಳೆಯನ್ನು ಸುರಿಸುತ್ತಿದ್ದು, ಮುಂಬರುವ ಕೆಲವು ದಿನಗಳವರೆಗೆ ಮುಂಗಾರು ಸಕ್ರಿಯವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು: ಪೂರ್ವ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಮತ್ತೊಂದು ಹಂತದ ಭಾರೀ ಮಳೆ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯಲ್ಲಿ ಸಕ್ರಿಯ ಹವಾಮಾನ ವ್ಯವಸ್ಥೆಯು ರೂಪುಗೊಳ್ಳುತ್ತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಹವಾಮಾನ ತಜ್ಞರ ಪ್ರಕಾರ.. ಮುಂಬರುವ 7 ರಿಂದ 10 ದಿನಗಳು ನೈಋತ್ಯ ಮುಂಗಾರು ಮಳೆಗೆ ಅತ್ಯಂತ ಪ್ರಮುಖ ಅವಧಿಯಾಗಲಿವೆ. ಬಂಗಾಳ ಕೊಲ್ಲಿಯಿಂದ ಪಶ್ಚಿಮ ಪೆಸಿಫಿಕ್ ಮಹಾಸಾಗರದವರೆಗೆ ವಾತಾವರಣದಲ್ಲಿ ಮಹತ್ವದ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಪ್ರಸ್ತುತ ನೈಋತ್ಯ ಮುಂಗಾರು ಅತ್ಯಂತ ಪ್ರಬಲ ಹಂತವನ್ನು ತಲುಪಿದ್ದು, ಇದರ ದೃಶ್ಯಗಳು ಭೂಮಿಯಿಂದಷ್ಟೇ ಅಲ್ಲದೆ ಬಾಹ್ಯಾಕಾಶದಿಂದಲೂ ಸ್ಪಷ್ಟವಾಗಿ ಗೋಚರಿಸುತ್ತಿವೆ.
ಇಸ್ರೋ ಉಪಗ್ರಹ ಕಣ್ಣಿನಲ್ಲಿ ಸೆರೆ ದೈತ್ಯ ಮಳೆ ಮಾರುತಗಳು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ಉಪಗ್ರಹ ಚಿತ್ರಗಳು ಭಾರತದಾದ್ಯಂತ ಹರಡಿರುವ ಎರಡು ದೈತ್ಯ ಮಳೆ ಮಾರುತಗಳನ್ನ ಬಹಿರಂಗಪಡಿಸಿವೆ. ಇವು ದೇಶದ ಪಶ್ಚಿಮದಲ್ಲಿರುವ ಮಹಾರಾಷ್ಟ್ರ ಮತ್ತು ಪೂರ್ವದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯನ್ನು ತರುತ್ತಿವೆ. ಇಸ್ರೋದ 'ಇನ್ಸಾಟ್-3ಡಿಆರ್' (INSAT-3DR) ಹವಾಮಾನ ಉಪಗ್ರಹವು ಈ ದೃಶ್ಯಗಳನ್ನು ಸೆರೆಹಿಡಿದಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಏಕಕಾಲದಲ್ಲಿ ದೇಶದ ಮುಂಗಾರು ಮಳೆಗೆ ಹೇಗೆ ಇಂಧನ ತುಂಬುತ್ತಿವೆ ಎಂಬುದನ್ನು ಚಿತ್ರಗಳು ಸಾಬೀತುಪಡಿಸುತ್ತವೆ.
ಉಪಗ್ರಹದ ವರದಿಯ ಪ್ರಕಾರ ದೇಶದಲ್ಲಿ ಪ್ರಸ್ತುತ ಎರಡು ಪ್ರಮುಖ ಮಳೆ ಆಗಲಿದೆ. ಅರಬ್ಬಿ ಸಮುದ್ರದ ಮೇಲೆ ಒಂದು ಪ್ರಬಲ ಹವಾಮಾನ ವ್ಯವಸ್ಥೆ ಇದ್ದು, ಇದು ಮಹಾರಾಷ್ಟ್ರ ಮತ್ತು ಕೊಂಕಣ ಕರಾವಳಿಯುದ್ದಕ್ಕೂ ಭಾರಿ ಮಳೆಯನ್ನು ಸುರಿಸುತ್ತಿದೆ. ಎರಡನೇ ವ್ಯವಸ್ಥೆಯು ಬಂಗಾಳ ಕೊಲ್ಲಿಯಲ್ಲಿ ಅಭಿವೃದ್ಧಿಗೊಂಡಿದ್ದು, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ದಟ್ಟವಾದ ಮಳೆ ಮೋಡಗಳನ್ನು ಹರಡುತ್ತಿದೆ.
ಉಪಗ್ರಹ ಚಿತ್ರಗಳು ಏನು ತೋರಿಸುತ್ತವೆ?
ಉಪಗ್ರಹದ ಥರ್ಮಲ್ ಇನ್ಫ್ರಾರೆಡ್ (Thermal Infrared) ಚಿತ್ರಗಳಲ್ಲಿ ಪ್ರಕಾಶಮಾನವಾದ ಬಿಳಿ ಮೋಡಗಳ ರಾಶಿ ಕಾಣಿಸಿಕೊಂಡಿದೆ. ನೈಜ ಸಮಯದಲ್ಲಿ ಮೋಡಗಳ ರಚನೆ, ಮಳೆಯ ಪ್ರಮಾಣ ಮತ್ತು ಚಂಡಮಾರುತದ ತೀವ್ರತೆಯನ್ನು ಪತ್ತೆಹಚ್ಚಲು ವಿಜ್ಞಾನಿಗಳು ಇನ್ಸಾಟ್-3ಡಿಆರ್ ಉಪಗ್ರಹದ ದತ್ತಾಂಶವನ್ನು ಬಳಸುತ್ತಾರೆ. ಉಪಗ್ರಹ ಚಿತ್ರಗಳಲ್ಲಿ ಕಾಣಿಸುವ ದಟ್ಟವಾದ ಬಿಳಿ ಮೋಡಗಳು ಭಾರಿ ಮಳೆ, ಗುಡುಗು ಮತ್ತು ಮಿಂಚನ್ನು ತರಬಲ್ಲ ಬೃಹತ್ ಮಳೆ ಮೋಡಗಳಾಗಿವೆ. ಎರಡೂ ಸಾಗರಗಳ ಮುಂಗಾರು ಮಾರುತಗಳು ಏಕಕಾಲದಲ್ಲಿ ಸಕ್ರಿಯವಾಗಿರುವುದರಿಂದ ದೇಶದ ವಿಶಾಲ ಪ್ರದೇಶದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ.
ಮುಂದೆ ಏನಾಗಲಿದೆ?
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ.. ಮುಂಬರುವ ಕೆಲವು ದಿನಗಳವರೆಗೆ ದೇಶದಲ್ಲಿ ಮುಂಗಾರು ಅತ್ಯಂತ ಸಕ್ರಿಯವಾಗಿರಲಿದೆ. ಮಹಾರಾಷ್ಟ್ರ, ಕೊಂಕಣ, ಗೋವಾ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಭಾಗಗಳಲ್ಲಿ ಭಾರಿ ಇಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಮಳೆಯು ದೇಶದ ಮುಂಗಾರು ಮಳೆಯ ಕೊರತೆಯನ್ನು ನೀಗಿಸಲು ಸಹಕಾರಿಯಾಗಲಿದೆ. ಅದೇ ಸಮಯದಲ್ಲಿ ನಗರ ಪ್ರದೇಶಗಳಲ್ಲಿ ನೆರೆ ಹಾವಳಿ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಅಪಾಯವೂ ಇರಲಿದೆ ಎಂದು ಎಚ್ಚರಿಸಲಾಗಿದೆ. ಇಸ್ರೋ ಬಿಡುಗಡೆ ಮಾಡಿರುವ ಚಿತ್ರಗಳು ವಿಜ್ಞಾನಿಗಳಿಗೆ ಹವಾಮಾನದ ಚಲನವಲನಗಳನ್ನು ನಿಖರವಾಗಿ ಅಧ್ಯಯನ ಮಾಡಲು ಪ್ರಮುಖ ಮಾಹಿತಿಯನ್ನು ಒದಗಿಸುತ್ತವೆ.


