ಪುಣೆಯ ಲೋಹಗಡ ಕೋಟೆಯಿಂದ ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಪ್ರಪಾತಕ್ಕೆ ತಳ್ಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಯಾಳ ಪ್ರಿಯಕರ ಚೇತನ್ ಪ್ರಚೋದನೆ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಕೇತನ್‌ ವಿಗ್‌ ಧರಿಸುತ್ತಿದ್ದ ಕಾರಣಕ್ಕೆ ಮದುವೆ ಇಷ್ಟವಿರಲಿಲ್ಲ, ಹಾಗಾಗಿ ಕೊಲೆ ಮಾಡಿದ್ದಾಗಿ ಸಿಯಾ ಒಪ್ಪಿಕೊಂಡಿದ್ದಾಳೆ. ಈ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ಅಭಿಯೋಜಕರನ್ನು ನೇಮಿಸಲು ಸರ್ಕಾರ ಒಪ್ಪಿದೆ.

ಪುಣೆ: ಕೇತನ್ ಅಗರ್ವಾಲ್ ಹತ್ಯೆ ಮಾಡಲು ಸಿಯಾಗೆ ಆಕೆಯ ಪ್ರಿಯಕರ ಚೇತನ್‌ ಪ್ರಚೋದನೆ ನೀಡಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸಿಯಾ ಮತ್ತು ಚೇತನ್‌ ಪರಸ್ಪರರ ಮೇಲೆ ಆರೋಪ ಹೊರಿಸಿದ್ದರಾದರೂ, ಇಬ್ಬರ ಹೇಳಿಕೆಯನ್ನು ಪರಿಶೀಲಿಸಿದಾಗ ಚೇತನ್‌ ಪ್ರಚೋದನೆ ನೀಡಿದ್ದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಟ್ಟುಹಬ್ಬದ ನೆಪದಲ್ಲಿ ಜೂ.18ರಂದು ಕೇತನ್‌ರನ್ನು ಪುಣೆಯ ಲೋಹಗಡ ಕೋಟೆಗೆ ಕರೆಸಿದ್ದ ಸಿಯಾ, ಅಲ್ಲಿ ಬೆಟ್ಟಂದ ಮೇಲಿನ 400 ಅಡಿ ಆಳದ ಕಂದಕಕ್ಕೆ ಬಾವಿ ಪತಿಯನ್ನು ತಳ್ಳಿ ಹತ್ಯೆ ಮಾಡಿದ್ದಳು.

ನಿಕಂ ನೇಮಕ?:

ಈ ನಡುವೆ, ಖ್ಯಾತ ವಕೀಲ ಉಜ್ವಲ್ ನಿಕಂ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಿ ತ್ವರಿತ ನ್ಯಾಯಾಲಯದ ವಿಚಾರಣೆ ನಡೆಸಬೇಕೆಂಬ ಕೇತನ್‌ ಕುಟುಂಬದ ಬೇಡಿಕೆಯನ್ನು ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ.

ಮಗಳು ಅಪರಾಧಿ ಆಗಿದ್ರೆ ಅವಳನ್ನೂ ಕೋಟೆಯಿಂದ ತಳ್ಳಿ: ಸಿಯಾ ತಂದೆ

‘ನಮ್ಮ ಮಗಳು ನಿಜವಾಗಿಯೂ ದೋಷಿ ಆಗಿದ್ದರೆ ಅವಳನ್ನು ಲೋಹಗಡ ಕೋಟೆಯ ಮೇಲಿಂದ ತಳ್ಳಿಬಿಡಿ’ ಎಂದು, ಕೇತನ್‌ ಹತ್ಯೆಗೈದ ಪ್ರಕರಣದಲ್ಲಿ ಬಂಧಿತ ಸಿಯಾಳ ತಂದೆ ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಯಾಳ ತಂದೆ, ‘19 ವರ್ಷದ ಸಿಯಾ, ಚೇತನ್‌ನನ್ನು ಪ್ರೀತಿಸುತ್ತಿದ್ದಳು ಎಂದು ನಮಗೆ ಗೊತ್ತೇ ಇರಲಿಲ್ಲ. ಅವನನ್ನು ನಾವೆಂದೂ ನೋಡಿರಲಿಲ್ಲ. ಒಬ್ಬ ಮಗ (ಕೇತನ್‌) ಮತ್ತು ಒಂದು ಸುಂದರ ಸಂಬಂಧವನ್ನು ಕಳೆದುಕೊಂಡಿದ್ದೇವೆ. ತನಿಖೆಯಿಂದ ಯಾರು ದೋಷಿ ಎಂದು ತಿಳಿದುಬರುತ್ತದೆಯೋ ಅವರನ್ನು ಅದೇ (ಲೋಹಗಡ) ಕೋಟೆಯ ಮೇಲಿಂದ ತಳ್ಳಬೇಕು. ನಮ್ಮ ಮಗಳೇ ಆಗಿದ್ದರೂ ಅದೇ ಶಿಕ್ಷೆ ಕೊಡಬೇಕು’ ಎಂದಿದ್ದಾರೆ. ಸಿಯಾಳ ತಾಯಿ ಪೂಜಾ ಮಾತನಾಡಿ, ‘ನಿಶ್ಚಿತಾರ್ಥ ಆದಂದಿನಿಂದ ಸಿಯಾ ಕೇವಲ ಕೇತನ್‌ ಜತೆ ಮಾತನಾಡುತ್ತಿದ್ದಳು. ಅವಳು ಹತ್ಯೆಗೆ ಒಪ್ಪಿದ್ದಾಳೆ ಎಂದು ನಮಗೆ ಅನ್ನಿಸುವುದಿಲ್ಲ. ಅವಳಿಗೆ ಈ ಮದುವೆ ಇಷ್ಟವಿಲ್ಲದೆ ಇದ್ದಿದ್ದರೆ ನಮ್ಮೊಂದಿಗೆ ಆ ಬಗ್ಗೆ ಮಾತನಾಡುತ್ತಿದ್ದಳು. ಅವಳೀಗ ನಮಗೆ ದ್ರೋಹ ಬಗೆದಿದ್ದಾಳೆ’ ಎಂದು ಕಣ್ಣೀರಿಟ್ಟಿದ್ದಾರೆ.

ಕೇತನ್‌ ವಿಗ್‌ ಧರಿಸುತ್ತಿದ್ದಕ್ಕೆ ಕೊಲೆಗೆ ನಿರ್ಧರಿಸಿದ್ದ ಸಿಯಾ

ಭಾವಿ ಪತಿ ಕೇತನ್‌ಗೆ ತಲೆಯಲ್ಲಿ ಕೂದಲಿರಲಿಲ್ಲ. ಆತ ವಿಗ್‌ ಧರಿಸುತ್ತಿದ್ದ. ಹೀಗಾಗಿ ಆತನನ್ನು ಮದುವೆಯಾಗುವುದಕ್ಕೆ ಇಷ್ಟವಿಲ್ಲದ್ದಾಕ್ಕಾಗಿ ಕೊಂದೆ ಎಂದು ಸಿಯಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ‘ಕೇತನ್‌ ವಿಗ್‌ ಧರಿಸುತ್ತಿರುವುದು ನನಗೆ ಇಷ್ಟವಿರಲಿಲ್ಲ. ಹಾಗಂತ ಮದುವೆ ರದ್ದುಗೊಳಿಸಿ ತನ್ನ ಮನೆಯವರಿಗೆ ನೋವುಂಟು ಮಾಡಲು ನನಗೆ ಮನಸ್ಸಿರಲಿಲ್ಲ. ಹೀಗಾಗಿ ಆತನನ್ನು ಕೊಲ್ಲುವುದೇ ಸುಲಭದ ನಿರ್ಧಾರ ಎಂದು ನಿರ್ಧರಿಸಿದೆ’ ಎಂದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಕೇತನ್‌ ತಂದೆ ವಿಶಾಲ್‌ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ‘ಕೇತನ್‌ ವಿಗ್‌ ಧರಿಸುತ್ತಿದ್ದನೆಂದು ಸಿಯಾ ಕುಟುಂಬಸ್ಥರಿಗೆ ಮೊದಲೇ ತಿಳಿಸಿದ್ದೆವು. ಆದರೆ ಕೊಲೆಗೆ ಇದೊಂದು ಕಾರಣವೇ?’ ಎಂದು ಪ್ರಶ್ನಿಸಿದ್ದಾರೆ.