ಪ್ರಾಂಶುಪಾಲ ಹಾಗೂ ಪ್ರಾಧ್ಯಾಪಕನ ಮಧ್ಯೆ ಫೈಟಿಂಗ್... ಕಿತ್ತಾಟದ ವಿಡಿಯೋ ವೈರಲ್
- ಪ್ರಾಂಶುಪಾಲ ಹಾಗೂ ಪ್ರಾಧ್ಯಾಪಕನ ಮಧ್ಯೆ ಗಲಾಟೆ
- ಕಿತ್ತಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
- ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಭೋಪಾಲ್(ಜ.20): ಮಕ್ಕಳನ್ನು ತಿದ್ದಿ ಸರಿ ದಾರಿಯಲ್ಲಿ ನಡೆಸಬೇಕಾದ ಶಿಕ್ಷಕರೇ ಮಧ್ಯಪ್ರದೇಶದ ಕಾಲೇಜೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಪ್ರಾಂಶುಪಾಲ ಹಾಗೂ ಪ್ರಾಧ್ಯಾಪಕ ಕಿತ್ತಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದೆ. ಪ್ರಾಧ್ಯಾಪಕರೊಬ್ಬರು ತಾವು ಬೋಧಿಸುವ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಅವರ ಮೇಲೆ ಹಲ್ಲೆ ಮತ್ತು ಬೆದರಿಕೆಯ ಆರೋಪದಡಿ ಪೊಲೀಸ್ ಪ್ರಕರಣ ದಾಖಲಾಗಿದೆ. ಉಜ್ಜಯಿನಿಯ ಘಟ್ಟಿಯದಲ್ಲಿರುವ ದಿವಂಗತ ನಾಗುಲಾಲ್ ಮಾಳವೀಯ ( Nagulal Malviya) ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬ್ರಹ್ಮದೀಪ್ ಅಲುನೆ (Bramhadeep Alune) ಅವರ ಮೇಲೆ ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ, ಅಶ್ಲೀಲ ಮಾತುಗಳನ್ನಾಡಿದ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪವನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ.
ಜನವರಿ 15 ರಂದು ಕಾಲೇಜಿನ ಪ್ರಾಂಶುಪಾಲ ಡಾ ಶೇಖರ್ ಮೇಡಂವರ್ ( Dr Shekhar Medamwar)ಮೇಲೆ ಬ್ರಹ್ಮದೀಪ್ ಅಲುನೆ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಪ್ರಾಧ್ಯಾಪಕ ಬ್ರಹ್ಮದೀಪ್ ಅಲುನೆ ಅವರನ್ನು ಭೋಪಾಲ್ (Bhopal)ನಿಂದ ಉಜ್ಜಯಿನಿ (Ujjain) ಕಾಲೇಜಿಗೆ ವರ್ಗಾಯಿಸಲಾಗಿತ್ತು. ಪ್ರಾಂಶುಪಾಲರ ಪ್ರಕಾರ, ಬ್ರಹ್ಮದೀಪ್ ಅಲುನೆ ಕಾಲೇಜಿಗೆ ಬಂದ ನಂತರ ಪ್ರತಿದಿನ 5 ಕಿ.ಮೀ. ವಾಕ್ ತೆರಳುತ್ತಿದ್ದರು. ನಮ್ಮಲ್ಲಿ ಈಗಾಗಲೇ ಸಿಬ್ಬಂದಿ ಕೊರತೆಯಿದೆ, ಜನವರಿ 15 ರಂದು ಕಾಲೇಜನ್ನು ಲಸಿಕಾ ಕೇಂದ್ರವನ್ನಾಗಿ ಮಾಡಲಾಗಿತ್ತು., ಹೀಗಾಗಿ ಈ ಬಗ್ಗೆ ಮಾತನಾಡಲು ನಾನು ಅವರನ್ನು ಕರೆದಿದ್ದೇನೆ ಆದರೆ ಅವರು ಕೋಪಗೊಂಡರು ಮತ್ತು ನನ್ನನ್ನು ನಿಂದಿಸುತ್ತಾ ಹಲ್ಲೆ ಮಾಡಲು ಶುರು ಮಾಡಿದರು ಎಂದು ಪ್ರಾಂಶುಪಾಲರು ಹೇಳಿದರು.
ಜಗಳವಾಡ್ತಾ ಬಾಲ್ಕನಿಯಿಂದ ಬಿದ್ರು ಗಂಡ-ಹೆಂಡತಿ
ಮತ್ತೊಂದೆಡೆ, ಪ್ರಾಧ್ಯಾಪಕ ಬ್ರಹ್ಮದೀಪ್ ಅಲುನೆ , ಪ್ರಾಂಶುಪಾಲರ ಬಗ್ಗೆ ದೂರಿದ್ದು, ಪ್ರಾಂಶುಪಾಲರು ಕಾಲೇಜಿನ ಎಲ್ಲ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಾಂಶುಪಾಲ ಡಾ ಶೇಖರ್ ಮೇಡಂವರ್ ಅವರ ಅಧಿಕಾರಾವಧಿಯಲ್ಲಿ ಮೂವರು ಅಕಾಲಿಕ ನಿವೃತ್ತಿ ಪಡೆದಿದ್ದಾರೆ. ಅವರು ಎಲ್ಲಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು. ನನ್ನನ್ನು ಅವರ ಕೊಠಡಿಗೆ ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದು ಜಗಳಕ್ಕೆ ಕಾರಣವಾಯಿತು, ಎಂದು ಪ್ರಾಧ್ಯಾಪಕ ಬ್ರಹ್ಮದೀಪ್ ಆರೋಪಿಸಿದ್ದಾರೆ.
ಪ್ರಾಂಶುಪಾಲರ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಪ್ರೊಫೆಸರ್ ಮತ್ತು ಪ್ರಿನ್ಸಿಪಾಲ್ ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಕೈ ತೋರಿಸಿ ವಾಗ್ವಾದ ನಡೆಸುತ್ತಿದ್ದಂತೆ ಜಗಳ ಉಲ್ಬಣಗೊಳ್ಳುತ್ತದೆ. ಈ ವೇಳೆ ಕೋಪದ ಭರದಲ್ಲಿ, ಪ್ರಾಧ್ಯಾಪಕ ತಮ್ಮ ಕುರ್ಚಿಯಿಂದ ಮೇಲೆದ್ದು ಪ್ರಾಂಶುಪಾಲರತ್ತ ನುಗ್ಗಿ ಹೊಡೆಯಲು ಶುರು ಮಾಡಿದ್ದಾರೆ. ಈ ವೇಳೆ ಪ್ರಿನ್ಸಿಪಾಲ್ ದೂರ ಹೋದರು ಬಿಡದ ಪ್ರಾಧ್ಯಾಪಕ ಅವರನ್ನು ಗೋಡೆಗೆ ಒರಗಿಸಿ ಸರಿಯಾಗಿ ಹೊಡೆಯುತ್ತಾನೆ. ಅಲ್ಲದೇ ಟೇಬಲ್ ಮೇಲಿದ್ದ ವಸ್ತುವನ್ನು ಪ್ರಿನ್ಸಿಪಾಲ್ ಮೇಲೆ ಬಿಸಾಕುತ್ತಾನೆ.
Political Fight: ಮುಖ್ಯಮಂತ್ರಿ ಎದುರೇ ಹೊಡೆದಾಟಕ್ಕೆ ಮುಂದಾದ ಸಂಸದ-ಮಿನಿಸ್ಟರ್
ಈ ಗಲಾಟೆ ಕೇಳಿ ಅಲ್ಲಿಗೆ ಬಂದ ನಾಲ್ಕು ಐದು ಜನ ಪ್ರಾಂಶುಪಾಲರ ಕೊಠಡಿಗೆ ನುಗ್ಗಿ ಜಗಳ ನಿಲ್ಲಿಸಿದರು. ಆದರೆ ಪ್ರೊಫೆಸರ್ ಮಾತ್ರ ಇನ್ನೂ ಕೋಪೋದ್ರಿಕ್ತನಾಗಿದ್ದು, ಪ್ರಿನ್ಸಿಪಾಲ್ ಮೇಲೆ ಕೂಗುತ್ತಲೇ ಇದ್ದ ಇತ್ತ ಹಠಾತ್ ದಾಳಿಯಿಂದ ಚೇತರಿಸಿಕೊಂಡ ಪ್ರಾಂಶುಪಾಲರು ಪ್ರೊಫೆಸರ್ಗೆ ಸನ್ನೆ ಮಾಡಿ, ಕೊಠಡಿಯಿಂದ ಹೊರ ಹೋಗುವಂತೆ ಹೇಳುತ್ತಾರೆ. ಆದರೆ ಆತ ಹೋಗಲು ನಿರಾಕರಿಸಿ ಅಲ್ಲಿಯೇ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ.