2019ರ ಪ್ರದರ್ಶನವನ್ನೇ ಬಿಜೆಪಿ ಈ ಬಾರಿಯೂ ಪುನರಾವರ್ತನೆ ಮಾಡಲಿದೆ ಎಂದು ಚುನಾವಣಾ ತಜ್ಞ ಪ್ರಶಾಂತ್‌ ಕಿಶೋರ್ ಹೇಳಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 300 ಸೀಟ್‌ ಗೆಲ್ಲುವ ಸಾಧ್ಯತೆ ಇದೆ ಎಂದಿದ್ದಾರೆ.

ನವದೆಹಲಿ (ಮೇ.21): ಐದು ಹಂತದ ಚುನಾವಣೆಯ ಬಳಿಕ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿರುವ ಸೀಟ್‌ಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸುಮಾರು 300 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಮಂಗಳವಾರ ಭವಿಷ್ಯ ನುಡಿದಿದ್ದಾರೆ. ಅದರೊಂದಿಗೆ ಪ್ರಧಾನಿ ಮೋದಿ ವಿರುದ್ಧ ದೇಶದ ಜನರಿಗೆ ಯಾವುದೇ ಕೋಪವಿಲ್ಲ ಎಂದೂ ತಿಳಿಸಿದ್ದಾರೆ. ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿರುವ ಪ್ರಶಾಂತ್‌ ಕಿಶೋರ್, ಬಿಜೆಪಿ ಸ್ವಂತವಾಗಿ 370 ಸ್ಥಾನಗಳನ್ನು ಪಡೆಯುವುದು ಅಸಾಧ್ಯ ಮತ್ತು ಪಕ್ಷವು ಎಲ್ಲೋ 300 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಚುನಾವಣೆಯ ಮೊದಲ ದಿನದಿಂದಲೂ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯೇ ಏಕಾಂಗಿಯಾಗಿ 370 ಸೀಟ್‌ಗಳನ್ನು ಗೆಲ್ಲಲಿದ್ದು, ಎನ್‌ಡಿಎ 400ಕ್ಕೂ ಅಧಿಕ ಸೀಟ್‌ ಗೆಲುವು ಸಾಧಿಸಲಿದೆ ಎಂದು ಹೇಳುತ್ತಿದ್ದಾರೆ. ನನ್ನ ಪ್ರಕಾರ ಇದು ಅಸಾಧ್ಯದ ಮಾತು ಎಂದು ಮೊದಲಿನಿಂದಲೂ ಹೇಳುತ್ತಲೇ ಇದ್ದೆ. ಇದು ಪಕ್ಷದ ಕಾರ್ಯಕರ್ತರಿಗೆ ಕೆಲಸ ಮಾಡಲು ಉತ್ತೇಜಿಸುವ ಘೋಷಣೆಯಷ್ಟೇ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಬಿಜೆಪಿ 370 ಸೀಟ್‌ಗಳನ್ನು ಗೆಲ್ಲುವುದು ಅಸಾಧ್ಯವಾದ ಮಾತು. ಅದೇ ರೀತಿ ಪಕ್ಷವೂ 270 ಸೀಟ್‌ಗಳಿಂದ ಕಡಿಮೆ ಸ್ಥಾನ ಗೆಲ್ಲುವುದು ಕೂಡ ಸಾಧ್ಯವಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳಷ್ಟೇ ಅಂದರೆ 303 ಸ್ಥಾನಗಳಲ್ಲಿ ಈ ಬಾರಿ ಗೆಲ್ಲಬಹುದು. ಇಲ್ಲದೇ ಇದಕ್ಕಿಂತ ಕೊಂಚ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ 300 ಸ್ಥಾನ ಗೆಲ್ಲುವ ಬಗ್ಗೆ ಖಚಿತವಾಗಿ ಹೇಳುತ್ತಿರುವ ಬಗ್ಗೆಯೂ ತಿಳಿಸಿದ ಅವರು, ಆಡಳಿತಾರೂಢ ಬಿಜೆಪಿ ಪಕ್ಷವು ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸೋದಿಲ್ಲ. ಆದರೆ, ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

2019ರಲ್ಲಿ ಬಿಜೆಪಿ ಗೆದ್ದ 303 ಕ್ಷೇತ್ರಗಳಲ್ಲೇ ತೆಗೆದುಕೊಳ್ಳಿ. ಈ 303 ಸೀಟ್‌ಗಳ ಪೈಕಿ 250 ಸೀಟ್‌ಗಳು ಉತ್ತರ ಹಾಗೂ ಪಶ್ಚಿಮ ಭಾರತದಿಂದ ಬಂದವುಗಳಾಗಿವೆ. ಈ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಹಿನ್ನಡೆ ಕಂಡು 50 ಅಥವಾ ಅದಕ್ಕಿಂತ ಹೆಚ್ಚಿನ ಸೀಟ್‌ಗಳನ್ನು ಕಳೆದುಕೊಳ್ಳಬಹುದು ಎನ್ನುವುದು ಎಲ್ಲರ ಪ್ರಶ್ನೆ. ಆದರೆ, ಪೂರ್ವ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿ ಕನಿಷ್ಠ 50 ಸೀಟ್‌ಗಳನ್ನು ಗೆದ್ದಿತ್ತು. ಈ ವಲಯದಲ್ಲಿ ಈ ಬಾರಿ ಬಿಜೆಪಿಯ ವೋಟ್‌ ಶೇರ್‌ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಬಿಜೆಪಿಯ ಸೀಟ್‌ ಶೇರ್‌ ಪೂರ್ವ ಹಾಗೂ ದಕ್ಷಿಣ ಭಾರತದಲ್ಲಿ ಏರಿಕೆ ಕಂದು 15-20 ಸೀಟ್‌ ಏರಿಕೆ ಕಾರಣಲಿದೆ. ಇನ್ನು ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಬಿಜೆಪಿಗೆ ದೊಡ್ಡದಾದ ಬೆದರಿಕೆ ಕಾಣುತ್ತಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಇದಲ್ಲದೆ, ದೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ಯಾವುದೇ ವ್ಯಾಪಕ ಕೋಪವಿಲ್ಲ ಎಂದು ಗಮನಸೆಳೆದಿದ್ದಾರೆ, ಅವರ ಕಾರ್ಯಕ್ಷಮತೆಯಿಂದ ನಿರಾಶೆಗೊಂಡ ಸಮಾಜದ ಒಂದು ವರ್ಗವನ್ನು ಹೊರತುಪಡಿಸಿ ಮತ್ಯಾರಿಗೂ ಅವರ ಮೇಲೆ ಸಿಟ್ಟಿದ್ದಂತೆ ಕಾಣುತ್ತಿಲ್ಲ ಎಂದಿದ್ದಾರೆ.

ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?

ಸಂಖ್ಯೆಗಳ ವಿಚಾರ ಬಿಡೋಣ, ಸರ್ಕಾರ ಯಾವಾಗ ಸೋಲುತ್ತದೆ ಅನ್ನೋದರ ಬಗ್ಗೆ ಮಾತನಾಡೋಣ.ಒಂದು ಪಕ್ಷ ಅಥವಾ ಅದರ ನಾಯಕನ ವಿರುದ್ಧ ಜನರಲ್ಲಿ ಗಮನಾರ್ಹ ಕೋಪ ಬಂದಾಗ ಅದು ಸಂಭವಿಸುತ್ತದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರ್ 10ವರ್ಷದ ಆಡಳಿಯದ ಬಗ್ಗೆ ಖಂಡಿತವಾಗಿಯೂ ಬೇಸರಪಟ್ಟುಕೊಂಡ ದೊಡ್ಡ ವರ್ಗವಿದೆ. ಆದರೆ, ವಿರೋಧ ಪಕ್ಷಗಳಿಂದಾಗಲಿ, ಅಥವಾ ಇದೇ ವರ್ಗದಿಂದಾಗಲಿ ಪ್ರಧಾನಿ ಮೋದಿ ವಿರುದ್ಧ ವ್ಯಾಪಕ ಆಕ್ರೋಶವನ್ನೂ ನಾವು ಕೇಳಿಲ್ಲ ಅನ್ನೋದನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್, ಯಾರಿಗೆ ವರ? ಯಾರಿಗೆ ಪಾಠ?