ತಮಿಳುನಾಡು ಚುನಾವಣೆಗೆ ಮುನ್ನ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಸ್ಥಗಿತಗೊಂಡಿದೆ. ಡಿಎಂಕೆ 25 ಸ್ಥಾನಗಳ ಆಫರ್ ನೀಡಿದ್ದು, ಕಾಂಗ್ರೆಸ್ 41 ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ. ಡಿಎಂಕೆ ತನ್ನ ಆಫರ್ ಒಪ್ಪಿಕೊಳ್ಳಲು ಡೆಡ್ಲೈನ್ ನೀಡಿದೆ.
ಚೆನ್ನೈ (ಮಾ.3): ತಮಿಳುನಾಡು ಚುನಾವಣೆಗೆ ಮುನ್ನ ಅಧಿಕಾರರೂಡ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಗಳು ಸ್ಥಗಿತಗೊಂಡಿದೆ. ಡಿಎಂಕೆ 25 ಸ್ಥಾನಗಳು ಮತ್ತು ರಾಜ್ಯಸಭಾ ಸ್ಥಾನವನ್ನು ಆಫರ್ ಮಾಡಿದೆ. 25 ಸೀಟ್ ಹಾಗೂ 1 ರಾಜ್ಯಸಭಾ ಸ್ಥಾನ ತೆಗೆದುಕೊಳ್ಳಿ, ಇಲ್ದೆ ಇದ್ರೆ ಹೊರಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಮುಖಕ್ಕೆ ಹೊಡೆದ ಹಾಗೆ ಸ್ಟ್ಯಾಲಿನ್ ಹೇಳಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಚುನಾವಣೆಗೆ 41 ವಿಧಾನಸಭಾ ಸ್ಥಾನಗಳು ಮತ್ತು ಎರಡು ರಾಜ್ಯಸಭಾ ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು. ಮೈತ್ರಿಕೂಟದ ನಾಯಕನ ಆಫರ್ ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇನ್ನು ತನ್ನ ಆಫರ್ಅನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ಗೆ ಮಾ.3ರವರೆಗೆ ಡೆಡ್ಲೈನ್ ನೀಡಿದೆ.
ಡಿಎಂಕೆ ಸಂಘಟನಾ ಕಾರ್ಯದರ್ಶಿ ಮತ್ತು ಸೀಟು ಹಂಚಿಕೆ ಸಮಿತಿ ಸದಸ್ಯ ಆರ್ ಎಸ್ ಭಾರತಿ ಅವರು ಕಾಂಗ್ರೆಸ್ ಪ್ರತಿನಿಧಿಗಳೊಂದಿಗಿನ ಮಾತುಕತೆಯ ಸಮಯದಲ್ಲಿ ಪಕ್ಷದ ಆಫರ್ಅನ್ನು "ಸ್ಪಷ್ಟವಾಗಿ ತಿಳಿಸಲಾಗಿದೆ" ಎಂದು ಹೇಳಿದ್ದಾರೆ. "ಈಗ ಅವರು ಅದನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು" ಇದರ ಹೊರತಾಗಿ ಅವರಿಗೆ ಯಾವುದೇ ಆಯ್ಕೆ ಇಲ್ಲ. "ನಮ್ಮ ಆಫರ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ." ಆದರೆ, ತಮ್ಮ ಪಕ್ಷವು ಯಾವುದೇ ಗಡುವನ್ನು ನಿಗದಿಪಡಿಸಿಲ್ಲ ಎಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ವರದಿ ಸಲ್ಲಿಸಿದ ಸಂಧಾನ ಸಮಿತಿ
ಸಂಧಾನ ಸಮಿತಿಯು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿಯನ್ನು ಸಲ್ಲಿಸಿದ್ದು, ಡಿಎಂಕೆ ತಮ್ಮ ಬೇಡಿಕೆಗೆ ಒಪ್ಪಿಲ್ಲ ಎಂದು ತಿಳಿಸಿದೆ ಎಂದು ಎಐಸಿಸಿ ನಾಯಕ ಗಿರೀಶ್ ಚೋಡಂಕರ್ ತಿಳಿಸಿದ್ದಾರೆ. ಅಧಿಕಾರ ಹಂಚಿಕೆ ಮತ್ತು ಹೆಚ್ಚಿನ ಸ್ಥಾನಗಳ ಬೇಡಿಕೆಗೆ ಡಿಎಂಕೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಮಾತುಕತೆ ಸ್ಥಗಿತಗೊಂಡಿದೆ ಎಂದು ಚೋಡಂಕರ್ ನಾಯಕತ್ವಕ್ಕೆ ವರದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿಕೂಟದಲ್ಲಿ ಯಾವುದೇ ಗೊಂದಲ ಅಥವಾ ಬಿಕ್ಕಟ್ಟು ಇಲ್ಲ ಎಂದು ಟಿಎನ್ಸಿಸಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಸಮಾಧಾನಕರ ಹೇಳಿಕೆ ನೀಡಿದ್ದಾರೆ. "ಪ್ರತಿ ಚುನಾವಣೆಯಲ್ಲೂ ಮಾತುಕತೆಗಳು ನಡೆಯುತ್ತವೆ. ಪ್ರತಿಯೊಂದು ಪಕ್ಷವೂ ಹೆಚ್ಚಿನ ಸ್ಥಾನಗಳನ್ನು ಕೇಳುತ್ತದೆ ಮತ್ತು ಅಂತಿಮವಾಗಿ ಒಂದು ಇತ್ಯರ್ಥಕ್ಕೆ ಬರುತ್ತದೆ. ಇಲ್ಲಿಯೂ ಅದೇ ಆಗುತ್ತದೆ. ನಾವು ಇನ್ನೂ ಕೆಲವು ಸ್ಥಾನಗಳನ್ನು ಕೇಳುತ್ತಿದ್ದೇವೆ ಮತ್ತು ಮಾತುಕತೆಗಳು ಮುಂದುವರೆದಿವೆ" ಎಂದು ಅವರು ಹೇಳಿದರು.
ಟಿವಿಕೆ ಜೊತೆ ಕಾಂಗ್ರೆಸ್ ಮಾತುಕತೆ ಇಲ್ಲ
ಸೆಲ್ವಪೆರುಂಥಗೈ ಅವರು ಟಿವಿಕೆ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಅಥವಾ ಪರ್ಯಾಯ ಮೈತ್ರಿಗಳನ್ನು ಅನ್ವೇಷಿಸಲು ಹೈಕಮಾಂಡ್ನಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ನಿರಾಕರಿಸಿದರು. "ಹಿಂಬಾಗಿಲಿನ ರಾಜಕೀಯವಿಲ್ಲ" ಎಂದು ಅವರು ಹೇಳಿದರು. ಟಿವಿಕೆ ಪದಾಧಿಕಾರಿಗಳು ತಮ್ಮ ಪಕ್ಷ ಮತ್ತು ಎಐಸಿಸಿ ನಾಯಕರ ನಡುವೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಹೇಳಿದರು.
ಟಿವಿಕೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಹುದೇ ಎಂಬ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಟಿವಿಕೆ ಜಂಟಿ ಪ್ರಧಾನ ಕಾರ್ಯದರ್ಶಿ ಸಿ ಟಿ ಆರ್ ನಿರ್ಮಲ್ ಕುಮಾರ್, ಕೊನೆಯ ಕ್ಷಣದಲ್ಲಿಯೂ ಮೈತ್ರಿಗಳು ಬದಲಾಗಬಹುದು ಎಂದಿದ್ದಾರೆ.


