ಕೊಯಮತ್ತೂರು ಗ್ರಾಮೀಣ ಪೊಲೀಸರು ತಮಿಳುನಾಡು-ಕೇರಳ ಗಡಿಯಲ್ಲಿ 57 ಲಕ್ಷ ರೂ. ಶಂಕಿತ ಹವಾಲಾ ಹಣದೊಂದಿಗೆ ಕೇರಳದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆಭರಣ ವ್ಯಾಪಾರಿಯಾದ ಈತ, ಬೈಕ್‌ನ ಸೀಟಿನ ಕೆಳಗೆ ಮತ್ತು ಪೆಟ್ರೋಲ್ ಟ್ಯಾಂಕ್ ಬಳಿ ದಾಖಲೆಗಳಿಲ್ಲದೆ ಹಣವನ್ನು ಬಚ್ಚಿಟ್ಟು ಸಾಗಿಸುತ್ತಿದ್ದ.

ಕೊಯಮತ್ತೂರು (ಡಿ.25): ತಮಿಳುನಾಡು-ಕೇರಳ ಗಡಿಯಲ್ಲಿರುವ ವೇಲಂತವಲಂನಲ್ಲಿ 57 ಲಕ್ಷ ರೂ.ಗಳ ಶಂಕಿತ ಹವಾಲಾ ಹಣದೊಂದಿಗೆ ಕೇರಳದ 38 ವರ್ಷದ ವ್ಯಕ್ತಿಯನ್ನು ಕೊಯಮತ್ತೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಲಪ್ಪುರಂ ಮೂಲದ ಶಬೀಕ್ (38) ಸರಿಯಾದ ದಾಖಲೆಗಳಿಲ್ಲದೆ ಸೀಟಿನ ಕೆಳಗೆ ಬಚ್ಚಿಟ್ಟು ಹಣವನ್ನು ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಿಯಮಿತ ವಾಹನ ತಪಾಸಣೆಯ ಸಮಯದಲ್ಲಿ, ಕೇರಳಕ್ಕೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಇದ್ದಕ್ಕಿದ್ದಂತೆ ತನ್ನ ಬೈಕನ್ನು ತಿರುಗಿಸಿ ವಿರುದ್ಧ ದಿಕ್ಕಿನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿರುವುದನ್ನು ಪೊಲೀಸರು ಗಮನಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನುಮಾನದ ಮೇಲೆ, ಪೊಲೀಸರು ಕೇರಳದ ಆಭರಣ ವ್ಯಾಪಾರಿ ಶಬೀಕ್ ಅವರನ್ನು ಬೆನ್ನಟ್ಟಿ ತಡೆದರು. ಪರಾರಿಯಾಗಲು ಯತ್ನಿಸಿದ್ದಕ್ಕೆ ಸರಿಯಾದ ವಿವರಣೆ ನೀಡದ ಕಾರಣ, ಪೊಲೀಸರು ಅವರ ವಾಹನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು.

ಬೈಕ್‌ ಸೀಟ್‌ ಬಡಿದಾಗ ಗೊತ್ತಾಯ್ತು ರಹಸ್ಯ

ಪೊಲೀಸರಿಗೆ ಆರಂಭದಲ್ಲಿ ಅನುಮಾನಾಸ್ಪದವಾಗಿ ಏನೂ ಸಿಗದಿದ್ದರೂ, ಬೈಕ್‌ ಸೀಟ್‌ಅನ್ನು ಬಡಿದಾಗ ಅದರಿಂದ ಡಿಫರೆಂಟ್‌ ಆದ ಶಬ್ದ ಕೇಳಿ ಬಂದಿತ್ತು. ಇದರಿಂದಾಗಿ ಸೀಟ್‌ಅನ್ನು ಕತ್ತರಿಸಿ ನೋಡಿದಾಗ ಅದರಲ್ಲಿ ಬಚ್ಚಿಟ್ಟಿದ್ದ ಹಣದ ಬಂಡಲ್‌ಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದಾದ ಬಳಿಕ ಬೈಕ್‌ಅನ್ನು ಪೊಲೀಸರು ಇನ್ನಷ್ಟು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪ್ರಟ್ರೋಲ್‌ ಟ್ಯಾಂಕ್‌ನ ಭಾಗದಲ್ಲೂ ಇದೇ ರೀತಿಯಾಗಿ ಹಣ ಬಚ್ಚಿಟ್ಟುಕೊಂಡಿದ್ದು ಕಂಡು ಬಂದಿದೆ.

ಕೊಯಮತ್ತೂರಿನಲ್ಲಿ ಆಭರಣ ಮಾರಾಟದಿಂದ ಬಂದ ಹಣ ಇದು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಯಾವುದೇ ದಾಖಲೆಗಳನ್ನು ನೀಡಲು ಸಾಧ್ಯವಾಗದ ಕಾರಣ, ಪೊಲೀಸರು ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ ಮತ್ತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.