ನವೀಕೃತ ಸೆಂಟ್ರಲ್‌ ವಿಸ್ತಾ ಬಹುತೇಕ ಸಿದ್ಧವಾಗಿದ್ದು, ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ಭಾಗ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ 

ನವದೆಹಲಿ(ಸೆ.08):  ನವೀಕೃತ ಸೆಂಟ್ರಲ್‌ ವಿಸ್ತಾದ ಕೆಲವು ಭಾಗ, ‘ಕರ್ತವ್ಯಪಥ‘ (ರಾಜಪಥ) ಹಾಗೂ ಇಂಡಿಯಾ ಗೇಟ್‌ ಸನಿಹ ಪ್ರತಿಷ್ಠಾಪಿಸಲಾಗಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಾರ್ಪಣೆ ಮಾಡಲಿದ್ದಾರೆ.

Add Asianetnews Kannada as a Preferred SourcegooglePreferred

ನವೀಕೃತ ಸೆಂಟ್ರಲ್‌ ವಿಸ್ತಾ ಬಹುತೇಕ ಸಿದ್ಧವಾಗಿದ್ದು, ನರೇಂದ್ರ ಮೋದಿ ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ಭಾಗ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯವಾರು ಆಹಾರದ ಮಳಿಗೆಗಳು, ಕೆಂಪು ಗ್ರಾನೈಟ್‌ ಪಾದಚಾರಿ ಮಾರ್ಗಗಳು, ಸುತ್ತಲೂ ಹಸಿರು ಉದ್ಯಾನವನಗಳು ಪ್ರಮುಖ ಆಕರ್ಷಣೆಗಳಾಗಿವೆ. ಉದ್ಘಾಟನಾ ನಂತರದ ದಿನವಾದ ಶುಕ್ರವಾರದಂದು ನವೀಕೃತ ಭಾಗಕ್ಕೆ ಸಾರ್ವಜನಿಕರು ಮುಕ್ತವಾಗಿ ಭೇಟಿ ನೀಡಬಹುದಾಗಿದೆ. 20 ತಿಂಗಳ ಹಿಂದೆ ನವೀಕರಣ ಕಾಮಗಾರಿ ಆರಂಭವಾಗಿತ್ತು. ಗಣರಾಜ್ಯ ಪರೇಡ್‌ ನಡೆಯುವ ಇಂಡಿಯಾ ಗೇಟ್‌ ಎದುರಿನ ಪಥದ ಹೆಸರನ್ನು ರಾಜಪಥದಿಂದ ಕರ್ತವ್ಯಪಥ ಎಂದು ಬದಲಿಸುವ ನಿರ್ಧಾರವನ್ನು ಬುಧವಾರ ನವದೆಹಲಿ ಮಹಾನಗರ ಪಾಲಿಕೆ ತೆಗೆದುಕೊಂಡಿತ್ತು.

ಸೆಂಟ್ರಲ್‌ ವಿಸ್ತಾ ಯೋಜನೆಯಿಂದ ಕರ್ತವ್ಯ ಪಥದಲ್ಲಿ ಆಗಿರುವ ಬದಲಾವಣೆಯ ನೋಟ!

ನೇತಾಜಿ ಪ್ರತಿಮೆ:

ಈ ಹಿಂದೆ ಬ್ರಿಟನ್‌ ರಾಜ ಜಾಜ್‌ರ್‍-5 ಪ್ರತಿಮೆ ಇದ್ದ ರಾಜಪಥ ಸನಿಹದ ಪ್ರಮುಖ ಜಾಗದಲ್ಲಿ ಈಗ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪುತ್ಥಳಿ ನಿರ್ಮಿಸಲಾಗಿದೆ. ಜ.23ರಂದು ಈ ಸ್ಥಳದಲ್ಲಿ ಬೋಸ್‌ ಅವರ ಹಾಲೋಗ್ರಾಂ ಪ್ರತಿಮೆಯನ್ನು ಮೋದಿ ಅನಾವರಣ ಮಾಡಿದ್ದರು. ಈಗ 28 ಅಡಿಯ ಗ್ರಾನೈಟ್‌ ಪುತ್ಥಳಿ ನಿರ್ಮಾಣ ಪೂರ್ತಿಯಾಗಿದ್ದು, ಕರ್ತವ್ಯಪಥದ ಜತೆ ಇದೂ ಅನಾವರಣಗೊಳ್ಳಲಿದೆ.

ನೇತಾಜಿ ಪ್ರತಿಮೆ ನಿರ್ಮಿಸಿದ್ದು ಮೈಸೂರು ಶಿಲ್ಪಿ:

ಶ್ರೀಕ್ಷೇತ್ರ ಕೇದಾರನಾಥದಲ್ಲಿ ಮೋದಿ ಉದ್ಘಾಟಿಸಿದ್ದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸಿದ್ದ ಮೈಸೂರು ಶಿಲ್ಪಿ ಅರುಣ್‌ ಯೋಗರಾಜ್‌ ಅವರು ನೇತಾಜಿ ಪ್ರತಿಮೆಯ ಶಿಲ್ಪಿ ಕೂಡ. 28 ಅಡಿಯ ಕಪ್ಪು ಗ್ರಾನೈಟ್‌ ಕಲ್ಲು ಬಳಸಿ ಅರುಣ್‌ ಅವರು ನೇತಾಜಿ ಪ್ರತಿಮೆ ನಿರ್ಮಿಸಿದ್ದಾರೆ. ದಿಲ್ಲಿಯಲ್ಲೇ ಇದನ್ನು 2 ತಿಂಗಳ ಅವಧಿಯಲ್ಲಿ ಅವರು ಕೆತ್ತಿದ್ದಾರೆ.

ಸೆಂಟ್ರಲ್‌ ವಿಸ್ತಾ ವಿಶೇಷತೆ:

ನವೀಕೃತ ಭಾಗದ 3.90 ಲಕ್ಷ ಚ. ಮೀ. ಪ್ರದೇಶದಲ್ಲಿ ಹಸಿರು ಹುಲ್ಲುಗಾವಲು ಹಾಗೂ ಮೊದಲಿದ್ದ ಮಣ್ಣಿನ ಹಾದಿಯ ಬದಲಾಗಿ 15.5 ಕಿ.ಮೀ. ಕೆಂಪು ಗ್ರೆನೈಟ್‌ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. 1125 ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಯಿದ್ದು, ಇಂಡಿಯಾ ಗೇಟ್‌ ಬಳಿ 35 ಬಸ್‌ ಕೂಡಾ ನಿಯೋಜಿಸಲಾಗಿದೆ. 900 ಹೊಸ ಬೆಳಕಿನ ಕಂಬಗಳನ್ನು ಕೂಡಾ ನಿರ್ಮಾಣ ಮಾಡಲಾಗಿದ್ದು, ಐತಿಹಾಸಿಕ 74 ಬೆಳಕಿನ ಕಂಬಗಳನ್ನು ಸರಿಪಡಿಸಲಾಗಿದೆ. 19 ಎಕರೆ ಕಾಲುವೆ ಪ್ರದೇಶವನ್ನೂ ನವೀಕರಿಸಲಾಗಿದ್ದು, ಆ ಭಾಗದಲ್ಲಿ 16 ಸೇತುವೆಗಳಿವೆ. ಕಾಲುವೆಗಳಲ್ಲಿ ಬೋಟಿಂಗ್‌ಗೆ ಅವಕಾಶ ನೀಡಲಾಗಿದೆ.

ದಿಲ್ಲಿ Central Vista Avenue ಇನ್ನು ಎರಡು ವಾರಗಳಲ್ಲಿ ಪೂರ್ಣ

ಸೆಂಟ್ರಲ್‌ ವಿಸ್ತಾದಲ್ಲಿ 5 ಮಾರಾಟದ ವಲಯಗಳನ್ನು ಗುರುತಿಸಿದ್ದು, ಪ್ರತಿ ವಲಯದಲ್ಲೂ 40 ಮಾರಾಟಗಾರರಿಗೆ ಮಾತ್ರ ಅನುಮತಿ ನೀಡಲಾಗಿದೆ. ಮೊದಲಿದ್ದಂತೆ ಇನ್ನು ರಸ್ತೆ ಬದಿಯಲ್ಲಿ ಸರಕು ಅಥವಾ ಆಹಾರವನ್ನು ಮಾರುವಂತಿಲ್ಲ. ಉದ್ಯಾನವನದ ಭಾಗದಲ್ಲಿ ಪ್ರವಾಸಿಗರಿಗೆ ಸರಕು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಇಂಡಿಯಾ ಗೇಟ್‌ ಬಳಿ ಆಹಾರದ ಸ್ಟಾಲ್‌ಗಳಿಗಾಗಿಯೇ 2 ವಲಯಗಳಿದ್ದು, ಪ್ರತಿ ವಲಯದಲ್ಲೂ ರಾಜ್ಯವಾರು ಆಹಾರ ಮಳಿಗೆಗಳಿವೆ.
ಸೆಂಟ್ರಲ್‌ ವಿಸ್ತಾದಲ್ಲಿರುವ ನೂತನ ಸಂಸತ್‌ ಭವನ ಕೂಡಾ ಬಹುತೇಕ ಸಿದ್ಧವಾಗಿದ್ದು, ಈ ವರ್ಷದ ಚಳಿಗಾಲದ ಅಧಿವೇಶನ ಹೊಸ ಕಟ್ಟಡದಲ್ಲೇ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಡಿ. 10, 2020ರಲ್ಲಿ ಪ್ರಧಾನಿ ಮೋದಿ ಸೆಂಟ್ರಲ್‌ ವಿಸ್ತಾ ಅಡಿಯ ನೂತನ ಸಂಸತ್‌ ಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಸೆಂಟ್ರಲ್‌ ವಿಸ್ತಾ ವೈಭವ

- 3.9 ಲಕ್ಷ ಚ.ಮೀ. ಹಸಿರು ಲಾನ್‌
- 15.5 ಕಿ.ಮೀ. ಗ್ರಾನೈಟ್‌ ಫುಟ್‌ಪಾತ್‌
- 1125 ವಾಹನಗಳಿಗೆ ಪಾರ್ಕಿಂಗ್‌
- 900 ಹೊಸ ಬೆಳಕಿನ ಕಂಬಗಳು
- 19 ಎಕರೆ ಕಾಲುವೆ ಪ್ರದೇಶ ಅಭಿವೃದ್ಧಿ