ನಿಗದಿತ ಸಮಯಕ್ಕಿಂತ 8 ತಿಂಗಳ ಮುಂಚೆ ಮುಕ್ತಾಯ ಕಂಡಿರುವ ಉತ್ತರ ಪ್ರದೇಶದ 296 ಕಿಲೋಮೀಟರ್‌ ಉದ್ದದ ಬುಂದೇಲ್‌ಖಂಡ ಎಕ್ಸ್‌ಪ್ರೆಸ್‌ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಜುಲೈ 16) ಉದ್ಘಾಟಿಸಲಿದ್ದಾರೆ. ಬರೋಬ್ಬರಿ 14, 850 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. 

ಲಕ್ನೋ (ಜುಲೈ 13): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ 296 ಕಿಲೋಮೀಟರ್‌ ಉದ್ದದ ಬುಂದೇಲ್‌ಖಂಡ ಎಕ್ಸ್‌ಪ್ರೆಸ್‌ ವೇಯನ್ನು ಶನಿವಾರ (ಜುಲೈ 16) ಲೋಕಾರ್ಪಣೆ ಮಾಡಲಿದ್ದಾರೆ. ಚಿತ್ರಕೂಟ ಮತ್ತು ಇಟಾವಾ ನಡುವಿನ ಎಕ್ಸ್‌ಪ್ರೆಸ್‌ವೇ ನಿಗದಿತ ಸಮಯಕ್ಕಿಂತ ಎಂಟು ತಿಂಗಳ ಮುಂಚಿತವಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ 2020 ರಲ್ಲಿ ಶಂಕುಸ್ಥಾಪನೆ ಮಾಡುವಾಗ, ಈ ಯೋಜನೆಯು "ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ದೊಡ್ಡ ನಗರಗಳಲ್ಲಿ ಲಭ್ಯವಿರುವ ಸೌಲಭ್ಯಗಳೊಂದಿಗೆ ಸಾಮಾನ್ಯ ಜನರನ್ನು ಸಂಪರ್ಕಿಸುತ್ತದೆ" ಎಂದು ಮೋದಿ ಹೇಳಿದ್ದರು. ಬರೋಬ್ಬರಿ 14,850 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಕ್ಸ್‌ಪ್ರೆಸ್‌ ವೇಯನ್ನು ನಿರ್ಮಾಣ ಮಾಡಲಾಗಿದೆ. ಜುಲೈ 16ರ ಬೆಳಗ್ಗೆ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, 11.30ರ ಸುಮಾರಿಗೆ ಜಲೌನ್ ಜಿಲ್ಲೆಯ ಒರೈ ತೆಹಸಿಲ್‌ನ ಕೈತೇರಿ ಗ್ರಾಮದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ. ದೇಶಾದ್ಯಂತ ಸಂಪರ್ಕವನ್ನು ಹೆಚ್ಚಿಸಲು ಸರ್ಕಾರವು ಬದ್ಧವಾಗಿದೆ, ಇದರ ಪ್ರಮುಖ ಲಕ್ಷಣವೆಂದರೆ ರಸ್ತೆ ಮೂಲಸೌಕರ್ಯದಲ್ಲಿ ಸುಧಾರಣೆಯ ಕೆಲಸ. 29 ಫೆಬ್ರವರಿ 2020 ರಂದು ಪ್ರಧಾನಮಂತ್ರಿಯವರು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಎಕ್ಸ್‌ಪ್ರೆಸ್‌ವೇಯ ಕೆಲಸವು ಕೇವಲ 28 ತಿಂಗಳೊಳಗೆ ಪೂರ್ಣಗೊಂಡಿದೆ ಎಂದು ಸರ್ಕಾರ ಹೇಳಿದೆ.

Scroll to load tweet…

ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಡಿಯಲ್ಲಿ ಸುಮಾರು ರೂ 14,850 ಕೋಟಿ ವೆಚ್ಚದಲ್ಲಿ 296 ಕಿಮೀ, ನಾಲ್ಕು-ಪಥದ ಎಕ್ಸ್‌ಪ್ರೆಸ್‌ವೇಯನ್ನು (Bundelkhand Expressway) ನಿರ್ಮಿಸಲಾಗಿದೆ. ಈ ಎಕ್ಸ್‌ಪ್ರೆಸ್‌ ವೇಯನ್ನು ಆರು ಪಥಗಳಿಗೆ (Six Lane) ವಿಸ್ತರಣೆ ಮಾಡುವ ಅವಕಾಶವೂ ಇದೆ. ಇದು ಚಿತ್ರಕೂಟ್ ಜಿಲ್ಲೆಯ ಭರತ್‌ಕೂಪ್ ಬಳಿಯ ಗೊಂಡಾ ಹಳ್ಳಿಯಲ್ಲಿ NH-35 ನಿಂದ ವಿಸ್ತರಣೆಯಾಗಲಿದ್ದು, ಇಟಾವಾ ಜಿಲ್ಲೆಯ ಕುದುರೆಲ್ ಗ್ರಾಮದಲ್ಲಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯೊಂದಿಗೆ (Agra-Lucknow expressway ) ವಿಲೀನಗೊಳ್ಳುತ್ತದೆ. ಚಿತ್ರಕೂಟ, ಬಂದಾ, ಮಹೋಬ, ಹಮೀರ್‌ಪುರ್, ಜಲೌನ್, ಔರೈಯಾ ಮತ್ತು ಇಟಾವಾ ಸೇರಿದಂತೆ 7 ಜಿಲ್ಲೆಗಳ ನಡುವೆ ಈ ಎಕ್ಸ್‌ಪ್ರೆಸ್ ವೇ ಹಾದು ಹೋಗಲಿದೆ.

ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ, ಇದರ ಪರಿಣಾಮವಾಗಿ ಸ್ಥಳೀಯ ಜನರಿಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಎಕ್ಸ್ ಪ್ರೆಸ್ ವೇ ಪಕ್ಕದಲ್ಲಿ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( Uttar Pradesh chief minister Yogi Adityanath) ಅವರು ಜುಲೈ 11 ರಂದು ಜಲೌನ್ ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್‌ವೇ ಉದ್ಘಾಟನಾ ಸ್ಥಳದಲ್ಲಿ ಭೌತಿಕ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಉತ್ತರ ಪ್ರದೇಶದ 6ನೇ ಎಕ್ಸ್‌ಪ್ರೆಸ್‌ ವೇ ಬಗ್ಗೆ ಇನ್ನಷ್ಟು ಮಾಹಿತಿ!

ಈ ಯೋಜನೆಯು ಯುಪಿಯಲ್ಲಿ ಸಂಪರ್ಕವನ್ನು ತುಂಬಲು ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು ನಿರೀಕ್ಷಿಸಲಾಗಿದೆ. "ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಬುಂದೇಲ್‌ಖಂಡ್, ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ರಾಷ್ಟ್ರ ರಾಜಧಾನಿಗೆ ನೇರವಾಗಿ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ" ಎಂದು ಆದಿತ್ಯನಾಥ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಬುದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ದೆಹಲಿ (Delhi) ಮತ್ತು ಚಿತ್ರಕೂಟ (Chitrakoot) ನಡುವಿನ ಪ್ರಯಾಣದ ಸಮಯವನ್ನು ಹಿಂದಿನ 9-10 ಗಂಟೆಗಳಿಂದ ಕೇವಲ ಆರು ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು- ಮೈಸೂರು ಹೆದ್ದಾರಿ ಕ್ರೆಡಿಟ್‌ ವಾರ್, ಪ್ರತಾಪ್‌ ಸಿಂಹಗೆ ಸುಮಲತಾ ಪರೋಕ್ಷ ಪಂಚ್!

ಸದ್ಯ ಉತ್ತರ ಪ್ರದೇಶದಲ್ಲಿ ಈಗ 1225 ಕಿಲೋಮೀಟರ್‌ ವಿಸ್ತೀರ್ಣದ 6 ಎಕ್ಸ್‌ಪ್ರೆಸ್‌ ವೇಗಳು ಈಗಾಗಲೇ ನಿರ್ಮಾಣವಾಗಿದ್ದರೆ, 1974 ಕಿಲೋಮೀಟರ್‌ ವಿಸ್ತಿರ್ಣದ 7 ಎಕ್ಸ್‌ಪ್ರೆಸ್‌ ವೇಗಳು ಇನ್ನೂ ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ಗಂಗಾ ಎಕ್ಸ್‌ಪ್ರೆಸ್‌ ವೇ 594 ಕಿಲೋಮೀಟರ್‌ ಹಾಗೂ ಗೋರಖ್‌ಪುರ ಹಾಗೂ ಸಿಲಿಗುರಿ ನಡುವಿನ 519 ಕಿಲೋಮೀಟರ್‌ ಎಕ್ಸ್‌ಪ್ರೆಸ್‌ ಅತ್ಯಂತ ದೊಡ್ಡದಾಗಿರುವುದಾಗಿದೆ.