Family dispute over pet cat; ಮನೆಯಲ್ಲಿ ಬೆಕ್ಕು ಸಾಕೋದ್ ಬೇಡ ಮಗಳೇ ಎಂದಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನ ಅಲ್ಜಾಲ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು 23 ವರ್ಷದ ಶ್ರೇಷ್ಠಾ ಎಂದು ಗುರುತಿಸಲಾಗಿದೆ.

ಬೆಕ್ಕು ಸಾಕೋದು ಬೇಡ ಎಂದಿದ್ದಕ್ಕೆ ಸಾವಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

ಹೈದರಾಬಾದ್: ಮನೆಯಲ್ಲಿ ಬೆಕ್ಕು ಸಾಕೋದ್ ಬೇಡ ಮಗಳೇ ಎಂದಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನ ಅಲ್ಜಾಲ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು 23 ವರ್ಷದ ಟಿ ಪ್ರಿನ್ಸಿ ಆಲಿಯಾಸ್ ಶ್ರೇಷ್ಠಾ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಬೆಕ್ಕು ಸಾಕಬೇಕು ಎಂಬುದು ಶ್ರೇಷ್ಠಾಳ ಬಹುದಿನಗಳ ಆಸೆ ಆಗಿತ್ತು. ಆದರೆ ಮನೆಯವರಿಗೆ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು. ಮನೆಯವರು ಬೆಕ್ಕು ಸಾಕೋದು ಬೇಡ ಎಂದಿದ್ದರು. ಇದೇ ವಿಚಾರವಾಗಿ ಮನಸು ಕೆಡಿಸಿಕೊಂಡಿದ್ದ ಶ್ರೇಷ್ಠಾ ಜೀವನವನ್ನೇ ಕೊನೆಗೊಳಿಸುವಂತಹ ಆಘಾತಕಾರಿ ನಿರ್ಧಾರವನ್ನು ಕೈಗೊಂಡಿದ್ದಾಳೆ. ಮೃತ ಶ್ರೇಷ್ಠ ರಿಸಾಲಾ ಬಜಾರ್‌ನ ನಿವಾಸಿಯಾಗಿದ್ದಾಳೆ.

ಎಂಬಿಬಿಎಸ್ ಮುಗಿದು ಪಿಜಿ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದ ಯುವತಿ:

ಇತ್ತೀಚೆಗಷ್ಟೇ ಎಂಬಿಬಿಎಸ್ ಕೋರ್ಸ್ ಮುಗಿಸಿದ್ದ ಶ್ರೇಷ್ಠಾ ಅದರಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದಳು. ಈ ನಡುವೆ ಬೆಕ್ಕಿನ ವಿಚಾರವಾಗಿ ಮನೆಯವರು ಹಾಗೂ ಆಕೆಯ ಮಧ್ಯೆ ಮನಸ್ತಾಪ ಉಂಟಾಗಿದ್ದು, ಆಕೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.

ಕಳೆದ ಮೂರು ತಿಂಗಳಿನಿಂದ ವಿರೋಧದ ನಡುವೆಯೂ ಬೆಕ್ಕು ಸಾಕ್ತಿದ್ದಳು

ಅಲ್ವಾಲ್ ಎಸ್‌ಐ ಎನ್. ದೇವೇಂದರ್ ಅವರ ಪ್ರಕಾರ, ಶ್ರೇಷ್ಠಾ ಇತ್ತೀಚೆಗೆ ಬೆಕ್ಕೊಂದನ್ನು ಸಾಕುವುದಕ್ಕಾಗಿ ಮನೆಗೆ ತಂದಿದ್ದರು. ಕಳೆದ ಮೂರು ತಿಂಗಳಿನಿಂದ ಅವರು ಈ ಬೆಕ್ಕನ್ನು ಸಾಕುತ್ತಿದ್ದರು. ಇದು ಅವರ ಕುಟುಂಬ ಸದಸ್ಯರೊಂದಿಗೆ ಆಗಾಗ್ಗೆ ಜಗಳಗಳಿಗೆ ಕಾರಣವಾಯಿತು. ಬೆಕ್ಕಿನ ಒಡನಾಟವು ಅಲರ್ಜಿ ಉಂಟು ಮಾಡುತ್ತದೆ ಎಂದು ಮನೆಯವರು ಶ್ರೇಷ್ಠಾಗೆ ಹೇಳಿದ್ದರು. ಈ ವಿಷಯದಿಂದ ಬೇಸತ್ತ ಪ್ರಿನ್ಸಿ ಶುಕ್ರವಾರ ಮಧ್ಯಾಹ್ನ ತನ್ನ ಕುಟುಂಬ ಸದಸ್ಯರು ವೈಯಕ್ತಿಕ ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ತನ್ನ ಫ್ಲಾಟ್‌ನಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.

ಪೋಷಕರು ಹೊರಗೆ ಹೋಗಿದ್ದಾಗ ದುರಂತ

ಇತ್ತ ಹೊರಗೆ ಹೋದ ಆಕೆಯ ಪೋಷಕರು ಆಕೆ ಊಟ ಮಾಡಿದ್ದಾಳೋ ಇಲ್ಲವೋ ಎಂದು ವಿಚಾರಿಸಲು ಆಕೆಗೆ ಕರೆ ಮಾಡಿದ್ದಾರೆ. ಆದರೆ ಆಕೆ ಫೋನ್ ಕರೆಗೆ ಉತ್ತರಿಸದಿದ್ದಾಗ, ನೆರೆಮನೆಯವರ ಬಳಿ ವಿಚಾರಿಸಲು ಹೇಳಿದ್ದಾರೆ. ನೆರೆಮನೆಯವರು ಬಂದು ಬಾಗಿಲು ಬಡಿದಾಗ ಅದಕ್ಕೂ ಸ್ಪಂದನೆ ಬಂದಿಲ್ಲ, ನಂತರ ಅವರು ಕಿಟಕಿಯಲ್ಲಿ ನೋಡಿದಾಗ ಶ್ರೇಷ್ಠಾ ಹಾಲ್‌ನಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ. ನಂತರ ಅವರು ಪೊಲೀಸರಲ್ಲದೆ, 108 ಆಂಬ್ಯುಲೆನ್ಸ್ ಸಿಬ್ಬಂದಿಗೂ ಕರೆ ಮಾಡಿ ವಿಚಾರ ತಿಳಿಸಿದ್ದಾರೆ ಎಂದು ಎಸ್‌ಐ ದೇವೇಂದರ್ ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರದಲ್ಲಿ 8931 ದಿನಗಳು: ಮತ್ತೊಂದು ದಾಖಲೆ ಬರೆದು ಹಲವು ದಾಖಲೆಗಳ ಸರದಾರನೆನಿಸಿದ ನಮೋ

ಬೆಕ್ಕನ್ನು ಸಾಕಲು ಬಿಡದಿದ್ದಕ್ಕೆ ಪ್ರಿನ್ಸಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬ ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ಮನೆಯಲ್ಲಿ ಯಾವುದೇ ಆತ್ಮ*ಹತ್ಯೆ ಪತ್ರ ಪತ್ತೆಯಾಗಿಲ್ಲ. ಬಿಎನ್‌ಎಸ್‌ಎಸ್‌ನ ಸೆಕ್ಷನ್ 194 (ಅನುಮಾನಾಸ್ಪದ ಸಾವು) ಅಡಿಯಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ. ಗಾಂಧಿ ಆಸ್ಪತ್ರೆಯಲ್ಲಿ ಶವಪರೀಕ್ಷೆಯ ನಂತರ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಎಸ್‌ಐ ದೇವೇಂದರ್ ಮಾಹಿತಿ ನೀಡಿದರು.

ಇದನ್ನೂ ಓದಿ: ರಸ್ತೆ ಬದಿ ರೀಲ್ಸ್ ಮಾಡ್ತಿದ್ದ ತರುಣನ ಕತೆ ಫಿನಿಶ್: ಕ್ಯಾಮರಾದಲ್ಲಿ ಸೆರೆಯಾಯ್ತು ಕೊನೆಕ್ಷಣ