ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಬಂದಿದ್ದ ಪಾಕಿಸ್ತಾನಿ ಲಷ್ಕರ್ ಉಗ್ರನೊಬ್ಬ, ತನ್ನ ಕಾರ್ಯಾಚರಣೆ ಬದಿಗಿಟ್ಟು ಕೂದಲು ಕಸಿ ಮಾಡಿಸಿಕೊಂಡಿದ್ದಾನೆ. ತೀವ್ರ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಈತ, ಕಾಶ್ಮೀರದಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವೆಂದು ತಿಳಿದು ಈ ನಿರ್ಧಾರ ಕೈಗೊಂಡಿದ್ದು, ಎನ್ಐಎ ವಿಚಾರಣೆ ವೇಳೆ ಈ ಸತ್ಯ ಬಯಲಾಗಿದೆ.
ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಭಯೋತ್ಪಾದನೆಗಾಗಿ ಒಳನುಗ್ಗಿದ್ದ ಪಾಕಿಸ್ತಾನಿ ಲಷ್ಕರ್ ಉಗ್ರನೊಬ್ಬ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿ ಕೂದಲು ಕಸಿ ಮಾಡಿಸಿಕೊಂಡ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ.

ಲಾಹೋರ್ನ ಮುಹಮ್ಮದ್ ಉಸ್ಮಾನ್ ಜಟ್ ಅಲಿಯಾಸ್ ಚೈನೀಸ್ನನ್ನು ಎನ್ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ ಇಂಥದ್ದೊಂದು ವಿಚಿತ್ರ ಘಟನೆಯನ್ನು ಉಗ್ರ ಬಾಯಿಬಿಟ್ಟಿದ್ದಾನೆ.
ನಕಾರಾತ್ಮಕ ಭಾವನೆ ದೂರವಾಯಿತು
ಅಲ್ಲದೆ, ಉಗ್ರವಾದದ ತರಬೇತಿ ಪಡೆಯುತ್ತಿರುವಾಗ ಕಾಶ್ಮೀರದ ಬಗ್ಗೆ ಬೇರೆ ಕಲ್ಪನೆ ಇತ್ತು. ಕಾಶ್ಮೀರಕ್ಕೆ ಬಂದೊಡನೆ ಆ ನಕಾರಾತ್ಮಕ ಭಾವನೆ ದೂರವಾಯಿತು ಎಂದೂ ಆತ ಹೇಳಿದ್ದಾನೆ ಎಂದು ಗೊತ್ತಾಗಿದೆ.
‘ಈತ ಉಗ್ರಕೃತ್ಯ ನಡೆಸಲು ಜಮ್ಮು-ಕಾಶ್ಮೀರದ ಒಳನುಸುಳಿದ್ದ. ಹಲವು ವರ್ಷಗಳಿಂದಲೂ ತೀವ್ರ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ. ಇದು ಆತನ ಆತ್ಮವಿಶ್ವಾಸ ಕುಗ್ಗಿಸಿತ್ತು. ಶ್ರೀನಗರದ ಗುಡ್ಡ ಪ್ರದೇಶದಲ್ಲಿ ತಂಗಿದ್ದಾಗ ಇನ್ನೊಬ್ಬ ಲಷ್ಕರ್ ಉಗ್ರ ಜರ್ಗಾಮ್ ಈತನನ್ನು ಒಂದು ಅಂಗಡಿಗೆ ಕರೆದುಕೊಂಡು ಹೋದ. ಆ ಅಂಗಡಿ ಮಾಲೀಕ ಕೂದಲು ಕಸಿ ಮಾಡಿಸಿಕೊಂಡಿರುವುದು ತಿಳಿದು ಜಟ್ಗೆ ಆಸಕ್ತಿ ಹುಟ್ಟಿತು. ಕೂದಲು ಕಸಿ ಪಾಶ್ಚಿಮಾತ್ಯರು ಮಾಡಿಸಿಕೊಳ್ಳುವ ಐಷಾರಾಮಿ ಕೆಲಸ ಎಂದು ಭಾವಿಸಿದ್ದ ಈತನಿಗೆ, ಕಾಶ್ಮೀರದಲ್ಲಿ ಕಡಿಮೆ ವೆಚ್ಚಕ್ಕೆ ಮಾಡಿಸಿಕೊಳ್ಳಬಹುದು ಎಂದು ತಿಳಿಯಿತು. ಅಂತಿಮವಾಗಿ ಮಾಲೀಕನ ಮಾರ್ಗದರ್ಶನದಂತೆ ತಾನೂ ಕೂದಲು ಕಸಿ ಮಾಡಿಸಿಕೊಂಡ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


