'ಪುತ್ರ ಶೋಕಂ ನಿರಂತರಂ..' ಗಂಗಾನದಿಯಲ್ಲಿ ಮಗನ ಅಸ್ಥಿ ವಿಸರ್ಜಿಸಿ ರೋಧಿಸಿದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅಪ್ಪ!

Synopsis
ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ನೌಕಾಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಸ್ಥಿಯನ್ನು ಹರ್ ಕಿ ಪೌರಿಯಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಭಾವನಾತ್ಮಕ ವಿದಾಯದಲ್ಲಿ ಕುಟುಂಬಸ್ಥರು ಮತ್ತು ನೂರಾರು ಜನರು ಭಾಗವಹಿಸಿದ್ದರು.
ಹರಿದ್ವಾರ (ಏ.25): ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಸ್ಥಿಯನ್ನು ಶುಕ್ರವಾರ ಸಾಂಪ್ರದಾಯಿಕ ಆಚರಣೆಗಳು ಮತ್ತು ಪ್ರಾರ್ಥನೆಗಳ ನಂತರ ಹರ್ ಕಿ ಪೌರಿಯಲ್ಲಿ ಗಂಗಾ ನದಿಯ ಪವಿತ್ರ ನೀರಿನಲ್ಲಿ ವಿಸರ್ಜಿಸಲಾಯಿತು.
ಹರಿಯಾಣದ ಕರ್ನಾಲ್ ಮೂಲದ ನರ್ವಾಲ್ ಅವರಿಗೆ ಭಾವನಾತ್ಮಕ ವಿದಾಯ ಹೇಳಲಾಯಿತು, ಅವರ ತಂದೆ ರಾಜೇಶ್ ನರ್ವಾಲ್ ಮತ್ತು ಮಾವ ಸೇರಿದಂತೆ ಅವರ ಕುಟುಂಬ ಸದಸ್ಯರು ನೂರಾರು ಜನರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಮಾಜಿ ಕ್ಯಾಬಿನೆಟ್ ಸಚಿವ ಮದನ್ ಕೌಶಿಕ್ ಮತ್ತು ಹಲವಾರು ಬಿಜೆಪಿ ಕಾರ್ಯಕರ್ತರು ಸಹ ಘಾಟ್ನಲ್ಲಿ ಗೌರವ ಸಲ್ಲಿಸಿದರು.
ಮಗನ ಚಿತಾಭಸ್ಮವನ್ನು ಹಿಡಿದು, ಗಂಗಾನದಿಯಲ್ಲಿ ಬಿಡುವಾಗ ರಾಜೇಶ್ ನರ್ವಾಲ್ ಅವರ ರೋದನ ಕಂಡು ಅಲ್ಲಿದ್ದ ಸ್ಥಳೀಯರು ಕೂಡ ಕಣ್ಣೀರಿಟ್ಟರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಶ್ ನರ್ವಾಲ್, "ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ್ದಾನೆ. ಬೇರೆ ಯಾವುದೇ ಕುಟುಂಬವು ಇದೇ ರೀತಿಯ ನೋವನ್ನು ಅನುಭವಿಸಬಾರದು ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿದರು. ಹರ್ ಕಿ ಪೌರಿಯ ವಾತಾವರಣವು ಭಾವುಕತೆಯಿಂದ ತುಂಬಿತ್ತು, ಅಸ್ಥಿ ವಿಸರ್ಜನಾ ಸಮಾರಂಭದ ಸಮಯದಲ್ಲಿ ಅನೇಕರು ಕಣ್ಣೀರು ಹಾಕಿದರು.
ಇದಕ್ಕೂ ಮೊದಲು, ನರ್ವಾಲ್ ಅವರ ತಂದೆ ಸರ್ಕಾರದ ಮೇಲೆ ನಂಬಿಕೆ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ನ್ಯಾಯ ಒದಗಿಸುತ್ತದೆ ಎಂದು ಹೇಳಿದ್ದರು, ನನಗೆ ಆಗಿರುವ ನಷ್ಟ ಎಂದೆಂದೂ ಭರಿಸಲಾಗದು ಎಂದು ಹೇಳಿದ್ದರು.
"ಸರ್ಕಾರ ತನ್ನ ಕೆಲಸ ಮಾಡುತ್ತಿದೆ ಮತ್ತು ನಾವು ಸರ್ಕಾರವನ್ನು ನಂಬುತ್ತೇವೆ.ಅವರು ನ್ಯಾಯ ಒದಗಿಸುತ್ತಾರೆ. ವಿನಯ್ ತುಂಬಾ ಒಳ್ಳೆಯ ಮಗ. ಅವನು ಒಬ್ಬ ಧೈರ್ಯಶಾಲಿ ಸೈನಿಕನಂತೆ ಸಾವು ಕಂಡಿದ್ದಾನೆ. ದೇಶ ನನ್ನೊಂದಿಗಿದೆ. ದೇವರು ನನ್ನ ಕುಟುಂಬಕ್ಕೆ ಈ ಅಸಹನೀಯ ನೋವು ಮತ್ತು ಭರಿಸಲಾಗದ ನಷ್ಟವನ್ನು ಎದುರಿಸಲು ಶಕ್ತಿ ನೀಡಲಿ. ಅವರು (ನನ್ನ ಸೊಸೆ) ಹೆಚ್ಚು ಅನುಭವಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಭೇಟಿಯನ್ನು ಮೊಟಕುಗೊಳಿಸಿ ಹಿಂತಿರುಗಿದ್ದಾರೆ, ಮತ್ತು ಇದು ಕೂಡ ಒಂದು ದೊಡ್ಡ ಹೆಜ್ಜೆಯಾಗಿದೆ" ಎಂದು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ತಂದೆ ಕರ್ನಾಲ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತನ್ನ ಮಗನನ್ನು ಹೊಗಳಿದ ಅವರ, ಅವನು ಯಾವಾಗಲೂ ಶಾಲೆಯಲ್ಲಿ ಬರುವ ಅದ್ಭುತ ವಿದ್ಯಾರ್ಥಿ ಎಂದು ಹೇಳಿದನು. 'ಅವನಿಗೆ ಭಾರತೀಯ ವಾಯುಸೇನೆಯಲ್ಲಿ ಫೈಟರ್ ಪೈಲಟ್ ಆಗಬೇಕೆಂದು ಆಸೆ ಇತ್ತು. ಆದರೆ, ಎತ್ತರದ ಕಾರಣದಿಂದಾಗಿ ಆಯ್ಕೆಯಾಗಲು ವಿಫಲವಾಗಿದ್ದ.ಅಂತಿಮವಾಗಿ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆ ಮಾಡಿಕೊಂಡಿದ್ದ. ನಮಗೆ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ಸರ್ಕಾರವು ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.
ಬುಧವಾರ ಮುಂಜಾನೆ, ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರಿಗೆ ಔಪಚಾರಿಕ ಮೆರವಣಿಗೆ ಮತ್ತು ರೈಫಲ್ ಸೆಲ್ಯೂಟ್ ಸೇರಿದಂತೆ ಅಂತಿಮ ನಮನ ಸಲ್ಲಿಸಲಾಯಿತು, ನಂತರ ಕರ್ನಾಲ್ನಲ್ಲಿರುವ ದಿವಂಗತ ಸೈನಿಕನ ಹುಟ್ಟೂರಿನಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನೌಕಾ ಅಧಿಕಾರಿ ಸಾವು ಕಂಡಿದ್ದ. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಅವರ ವಿವಾಹ ಆರತಕ್ಷತೆ ಕೆಲವು ದಿನಗಳ ಹಿಂದೆ ನಡೆದಿತ್ತು. ಕೊಚ್ಚಿಯಲ್ಲಿ ನಿಯೋಜಿತರಾಗಿದ್ದ ಲೆಫ್ಟಿನೆಂಟ್ ನರ್ವಾಲ್ ಹನಿಮೂನ್ಗಾಗಿ ಪತ್ನಿ ಹಿಮಾಂಶಿ ಜೊತೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು.
Pahalgam Attack: 'ಧರ್ಮ ಕೇಳಿ ಕೊಲ್ಲಲಾಗಿದೆ..' ಹುರಿಯತ್ ಒಪ್ಪಿಕೊಂಡರೂ, ನಮ್ಮವರು ಒಪ್ಪಿಕೊಳ್ಳೋದಿಲ್ಲ!
ಕಣ್ಣೀರಿಡುತ್ತಲೇ ಮಾತನಾಡಿದ್ದ ಹಿಮಾಂಶಿ, "ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಭಾವಿಸುತ್ತೇನೆ. ಅವರು ಉತ್ತಮ ಜೀವನವನ್ನು ನಡೆಸಿದರು. ಅವರು ನಮ್ಮನ್ನು ಹೆಮ್ಮೆಪಡುವಂತೆ ಮಾಡಿದರು, ಮತ್ತು ನಾವು ಈ ಹೆಮ್ಮೆಯನ್ನು ಎಲ್ಲ ರೀತಿಯಲ್ಲೂ ಉಳಿಸಿಕೊಳ್ಳಬೇಕು" ಹೇಳಿದ್ದರು. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು.
ಪಿಒಕೆಗೆ ಹಮಾಸ್ ಭೇಟಿ: ಪಾಕ್ನ ಲಷ್ಕರ್ ಜೊತೆ ಸಂಪರ್ಕ: ಇಸ್ರೇಲ್ ರಾಯಭಾರಿ ನೀಡಿದ ಹಲವು ಸ್ಫೋಟಕ ಸುಳಿವು