Pahalgam Attack: 'ಧರ್ಮ ಕೇಳಿ ಕೊಲ್ಲಲಾಗಿದೆ..' ಹುರಿಯತ್ ಒಪ್ಪಿಕೊಂಡರೂ, ನಮ್ಮವರು ಒಪ್ಪಿಕೊಳ್ಳೋದಿಲ್ಲ!

Synopsis
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರವಾಸಿಗರ ಧರ್ಮ ಕೇಳಿ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ವಿವಾದ ಭುಗಿಲೆದ್ದಿದೆ. ಕೆಲವು ರಾಜಕೀಯ ನಾಯಕರು ಇದನ್ನು ಬಿಜೆಪಿ ಸೃಷ್ಟಿಸಿದ ಕಟ್ಟುಕಥೆ ಎಂದು ಹೇಳಿದರೆ, ಮಿರ್ವೈಜ್ ಉಮರ್ ಫಾರೂಕ್ ದಾಳಿಕೋರರು ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ನವದಹೆಲಿ (ಏ.25): ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ದಾಳಿಯಾಯಿತು. ಒಬ್ಬ ನೇಪಾಳಿ ಸೇರಿದಂತೆ 26 ಮಂದಿ ಪ್ರವಾಸಿಗರು ಉಗ್ರರು ಅತ್ಯಂತ ಪೈಶಾಚಿಕವಾಗಿ ಹತ್ಯೆ ಮಾಡಿದರು. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಇಡೀ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಹಾಗೂ ಆರಂಭಿಕವಾಗಿ ವೈರಲ್ ಆದ ವಿಡಿಯೋದಲ್ಲಿ ಧರ್ಮವನ್ನು ಕೇಳಿ ಉಗ್ರರು ಗುಂಡು ಹಾರಿಸಿದ್ದಾರೆ ಎನ್ನಲಾಗಿತ್ತು.
ಕೆಲವರಿಗೆ ಉಗ್ರರು ಕಲ್ಮಾ ಹೇಳುವಂತೆ ತಿಳಿಸಿದ್ದರೆ, ಇನ್ನೂ ಕೆಲವರ ಪ್ಯಾಂಟ್ ಬಿಚ್ಚಿಸಿ ಆತ ಹಿಂದುವೋ? ಮುಸ್ಲಿಮನೋ ಎನ್ನುವುದನ್ನು ಖಚಿತಪಡಿಸಿಕೊಂಡು ಗುಂಡಿಟ್ಟಿದ್ದಾರೆ. ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡ ಹಲವರು ಇದೇ ಮಾತನ್ನು ಹೇಳಿದ್ದಾರೆ. ಅಸ್ಸಾಂನ ಹಿಂದೂ ಪ್ರೊಫೆಸರ್ ಒಬ್ಬರು ಕಲ್ಮಾ ಪಠಿಸಿ ಉಗ್ರರ ಗುಂಡೇಟಿನಿಂದ ಬಚಾವ್ ಆಗಿದ್ದಾರೆ.
ಇಷ್ಟೆಲ್ಲಾ ಇದ್ದರೂ, ಕೆಲವರು ಮಾತ್ರ ಧರ್ಮ ಕೇಳಿ ಅಲ್ಲಿ ಗುಂಡು ಹೊಡೆದಿಲ್ಲ ಎನ್ನುತ್ತಿದ್ದಾರೆ. ನಮ್ಮಲ್ಲಿ ಸ್ವತಃ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಂ. ಬಾಲಕೃಷ್ಣ ಸೇರಿದಂತೆ ಇನ್ನಿತರ ರಾಜಕೀಯ ನಾಯಕರು ಧರ್ಮ ಕೇಳಿ ಗುಂಡು ಹೊಡೆದಿದ್ದೇ ಸುಳ್ಳು. ಇದೆಲ್ಲವೂ ಸಮಾಜದಲ್ಲಿ ಅಂತರ ಸೃಷ್ಟಿಸಲು ಬಿಜೆಪಿ ಸೃಷ್ಟಿಸಿದ ಕಟ್ಟುಕಥೆ ಎಂದಿದ್ದಾರೆ.
ಇದಕ್ಕೆ ವಿಭಿನ್ನ ಎನ್ನುವಂತೆ ಅಸಾದುದ್ದೀನ್ ಓವೈಸಿ, ಪಹಲ್ಗಾಮ್ನಲ್ಲಿ ನಡೆದ ದಾಳಿಯ ವೇಳೆ ಉಗ್ರರು ಧರ್ಮ ಕೇಳಿ ಗುಂಡು ಹೊಡೆದಿರುವುದು ತಪ್ಪು ಎಂದಿದ್ದಾರೆ. ಇದರ ನಡುವೆ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ನಾಲ್ಕು ವಾರಗಳ ಬಳಿಕ ಶುಕ್ರವಾರ ಜಾಮಿಯಾ ಮಸ್ಜಿದ್ನಲ್ಲಿ ಮಾಡಿದ ಭಾಷಣದಲ್ಲಿ ಉಗ್ರರು ಧರ್ಮ ಕೇಳಿ ಗುಂಡು ಹೊಡೆದಿರುವುದನ್ನು ಖಚಿತಪಡಿಸಿದ್ದಾರೆ.
ಸತತ ನಾಲ್ಕು ಶುಕ್ರವಾರಗಳ ನಿರ್ಬಂಧಗಳ ನಂತರ, ಮಿರ್ವೈಜ್ ಉಮರ್ ಫಾರೂಕ್ ಅವರಿಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಜಾಮಿಯಾ ಮಸೀದಿಗೆ ಹೋಗಲು ಅಧಿಕಾರಿಗಳು ಅವಕಾಶ ನೀಡಿತ್ತು.
ಜಾಮಿಯಾ ಮಸೀದಿಯಲ್ಲಿ ಮಾಡಿದ ಭಾಷಣದಲ್ಲಿ, "ಈ ವಾರ ಒಂದು ಅತ್ಯಂತ ದುರಂತ ಘಟನೆ ನಡೆದಿದೆ, ಅದು ನಮ್ಮ ಹೃದಯಗಳನ್ನು ಬೆಚ್ಚಿಬೀಳಿಸಿದೆ. ಜನರನ್ನು ಗುರುತಿಸಿದ ರೀತಿ, ಅವರ ಧರ್ಮವನ್ನು ಕೇಳಿದ ರೀತಿ ಮತ್ತು 25 ಕ್ಕೂ ಹೆಚ್ಚು ಜನರನ್ನು ಅವರ ಕುಟುಂಬಗಳ ಮುಂದೆಯೇ ಕೊಲ್ಲಲಾದ ರೀತಿ. ನಾವು ಅದನ್ನು ಖಂಡಿಸುತ್ತೇವೆ..." ಎಂದು ಹೇಳಿದ್ದಾರೆ.
ಸ್ವತಃ ಕಾಶ್ಮೀರದ ನಾಯಕರು ಇದನ್ನು ಖಚಿತಪಡಿಸುತ್ತಿದ್ದರೂ, ವಿವಿಧ ರಾಜ್ಯಗಳ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ನಾಯಕರು ಪ್ರವಾಸಿಗರ ಧರ್ಮ ಕೇಳಿ ಗುಂಡು ಹೊಡೆದಿಲ್ಲ ಎಂದು ಸಮರ್ಥನೆಗೆ ಇಳಿದಿದ್ದಾರೆ. ಅದರಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಇದು ಬಿಜೆಪಿಯವರೇ ಹೇಳಿರುವ ಕಟ್ಟುಕಥೆ, ಮಾನವೀಯತೆಯೇ ಮೊದಲ ಧರ್ಮ ಎಂದು ಟ್ವೀಟ್ ಕುಟ್ಟಿದ್ದರು.
ಪಹಲ್ಗಾಮ್ ಬಗ್ಗೆ 'ಮಾನವೀಯತೆಯೇ ಮೊದಲ ಧರ್ಮ' ಎಂದ ಪ್ರಿಯಾಂಕ್ ಖರ್ಗೆ, ನಿಮಗಿಂತ ಓವೈಸಿಯೇ ಬೆಸ್ಟ್!
ಇನ್ನು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದಲ್ಲಿ ಮುಸ್ಲಿಮರು ತಾವು ದುರ್ಬಲರಾಗುತ್ತಿದ್ದಾರೆ ಅನ್ನೋ ಭಾವನೆ ಬರುತ್ತಿದೆ. ಅದಕ್ಕಾಗಿಯೇ ಇಂಥ ದಾಳಿಗಳು ಆಗುತ್ತಿದೆ. ಈ ದಾಳಿ ಮೋದಿಗೆ ಕೊಟ್ಟ ಸಂದೇಶ ಎಂದು ಹೇಳಿದ್ದರು. ಇನ್ನು ಕರ್ನಾಟಕದ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದೇ ಪಹಲ್ಗಾಮ್ ಘಟನೆಗೆ ಕಾರಣ ಎಂದು ತೀರ್ಮಾನ ಮಾಡಿಬಿಟ್ಟಿದ್ದರು.
ಬೆಚ್ಚಿ ಬಿದ್ದಿದೆ ಭಯೋತ್ಪಾದಕರ ಹೆಡ್ ಕ್ವಾರ್ಟರ್! ನೆತನ್ಯಾಹು ರೀತಿಯಲ್ಲೇ ನೆತ್ತರ ಸೀಳಿ ಉತ್ತರ ಕೊಡ್ತಾರಾ ಮೋದಿ?