ಆತ್ಮಹತ್ಯೆಗೆ ಯತ್ನಿಸಿದ ಬಾಬಾ ಕಾ ಡಾಬಾ ಕಾಂತ ಪ್ರಸಾದ್ ಆಸ್ಪತ್ರೆ ದಾಖಲು!
- ಮತ್ತೆ ಸಂಕಷ್ಟದಲ್ಲಿ ಬಾಬಾ ಕಾ ಡಾ ಮಾಲೀಕ ಕಾಂತ ಪ್ರಸಾದ್
- ಆತ್ಮಹತ್ಯೆಗೆ ಯತ್ನಿಸಿದ ಬಾಬಾ ಕಾ ಡಾಬಾ ಕಾಂತ ಪ್ರಸಾದ್
- ಸಾಮಾಜಿಕ ಜಾಲತಾಣದ ಮೂಲಕ ಸ್ಟಾರ್ ಆಗಿದ್ದ ಬಾಬಾ ಕಾ ಡಾಬಾ
ದೆಹಲಿ(ಜೂ.18): ಬಾಬಾ ಕಾ ಡಾಬಾ ರೆಸ್ಟೋರೆಂಟ್ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿರುವ ಭಾರತೀಯರವರೆಗೂ ಜನಪ್ರಿಯ. ಸಣ್ಣ ಪೆಟ್ಟಿಗೆ ಅಂಗಡಿ ಹೋಟೆಲ್ನಿಂದ ದೊಡ್ಡ ರೆಸ್ಟೋರೆಂಟ್ ತೆರೆದ ಬಾಬಾ ಕಾ ಡಾಬಾ ಕಾಂತ ಪ್ರಸಾದ್ ಹಾದಿ ಕುರಿತು ಎಲ್ಲರಿಗೂ ತಿಳಿದಿದೆ. ಯುಟ್ಯೂಬರ್ ಮೂಲಕ ಪ್ರಸಿದ್ದಿಯಾದ ಕಾಂತ ಪ್ರಸಾದ್, ಹೊಸ ರೆಸ್ಟೋರೆಂಟ್ ತೆರೆದಿದ್ದು ಇತಿಹಾಸ. ಬಳಿಕ ಅದೆ ಯ್ಯೂಟೂಬರ್ ಮೇಲೆ ಕೇಸ್ ಹಾಕಿ, ಲಾಕ್ಡೌನ್ ಕಾರಣ ರೆಸ್ಟೋರೆಂಟ್ ಕ್ಲೋಸ್ ಮಾಡಿ ಮತ್ತೆ ಪೆಟ್ಟಿಗೆ ಅಂಗಡಿಗೆ ಮರಳಿದ ಕಾಂತ ಪ್ರಸಾದ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ಆತ್ಯಹತ್ಯೆ ಯತ್ನಿಸಿದ್ದಾರೆ.
ಹೊಸ ಹೋಟೆಲ್ಗೆ ಬೀಗ ಹಾಕಿ ಬೀದಿ ಬದಿಗೆ ಬಂದ ಬಾಬಾ ಕಾ ಡಾಬಾ
ಮಾಳವೀಯ ನಗರ ಠಾಣೆ ಪೊಲೀಸರಿಗೆ ರಾತ್ರಿ ಕರೆಯೊಂದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವೃದ್ಧನೋರ್ವನನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಕರೆ ಬಂದಿದೆ. ಆಸ್ಪತ್ರೆಗೆ ಆಗಮಿಸಿದ ಪೊಲೀಸರಿಗೆ ಆತ್ಯಹತ್ಯೆಗೆ ಯತ್ನಿಸಿದ ವ್ಯಕ್ತಿ ಬಾಬಾ ಕಾ ಡಾಬ ಕಾಂತ ಪ್ರಸಾದ್ ಅನ್ನೋದು ಸ್ಪಷ್ಟವಾಗಿದೆ. ಸದ್ಯ ಕಾಂತ ಪ್ರಸಾದ್ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸದಾಗಿ ಆರಂಭಿಸಿದ ರೆಸ್ಟೋರೆಂಟ್ ಮುಚ್ಚಿದ ಬಳಿಕ ಕಾಂತ ಪ್ರಸಾದ್ ಕಳೆದೊಂದು ವಾರದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಜೊತೆಗೆ ರೆಸ್ಟೋರೆಂಟ್ ಸಾಲದ ಬಾಧೆ ಕೂಡ ಹೊರೆಯಾಗುತ್ತಿದೆ. ಹೀಗಾಗಿ ಆತ್ಯಹತ್ಯೆಗೆ ಯತ್ನಿಸಿದ್ದಾರೆ ಎಂದು ಕಾಂತ ಪ್ರಸಾದ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಫೇಮಸ್ ಮಾಡಿದ ಯೂಟ್ಯೂಬರ್ ವಿರುದ್ಧವೇ ಬಾಬಾ ಕಾ ಡಾಬಾ ಮಾಲೀಕನಿಂದ ದೂರು!
ಸಾಮಾಜಿಕ ಜಾಲತಾಣದಲ್ಲಿನ ಸಹೃದಯರು, ದೆಹಲಿ ನಿವಾಸಿಗಳು ಸೇರಿದಂತೆ ಭಾರತಾದ್ಯಂತ ಬಾಬಾ ಕಾ ಡಾಬಾ ಕಾಂತ ಪ್ರಸಾದ್ಗೆ ನೆರವು ನೀಡಿದ್ದರು. 5 ಲಕ್ಷ ರೂಪಾಯಿ ಬಂಡವಾಳ ಹಾಕಿ ಹೊಸ ರೆಸ್ಟೋರೆಂಟ್ ಆರಂಭಿಸಿದ ಕಾಂತ ಪ್ರಸಾದ್ ಇನ್ನೇನು ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸಬೇಕು ಅನ್ನುವಷ್ಟರಲ್ಲಿ ಮತ್ತೆ ಲಾಕ್ಡೌನ್. ತಿಂಗಳಿಗೆ 1 ಲಕ್ಷ ರೂಪಾಯಿ ಖರ್ಚು, ಆದಾಯ ಕೇವಲ 30,000 ರೂಪಾಯಿ. ಹೀಗಾಗಿ ನಷ್ಟದಲ್ಲಿದ್ದ ಬಾಬಾ ಕಾ ಡಾಬ ಮತ್ತೆ ಹಳೆ ಪೆಟ್ಟಿಗೆ ಅಂಗಡಿ ಹೋಟೆಲ್ಗೆ ಮರಳಿದರು. ಇತ್ತ ಯ್ಯೂಟಬರ್ ಮೇಲಿನ ಪ್ರಕರಣ ಕೂಡ ಸುಖಾಂತ್ಯಗೊಂಡಿತು.
ಅತ್ಯಲ್ಪ ಸಮಯದಲ್ಲಿ ಬದುಕಿನ ಉತ್ತುಂಗಕ್ಕೇರಿ, ದಿಢೀರ್ ಕುಸಿದ ಕಾಂತ ಪ್ರಸಾದ್ ಖಿನ್ನತೆಗೆ ಒಳಗಾಗಿದ್ದಾರೆ. ಜೊತೆಗೆ ಸಾಲದ ಭಾದೆ ಕೂಡ ತಾಳಲಾಗುತ್ತಿಲ್ಲ. ಹೀಗಾಗಿ ಬದುಕನ್ನೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದೃಷ್ಟವಶಾತ್ ಸ್ಥಳೀಯರ ನೆರವಿನಿಂದ ಬಾಬಾ ಕಾ ಡಾಬ ಕಾಂತ ಪ್ರಸಾದ್ ಆಸ್ಪತ್ರೆಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ.