ಉಪರಾಷ್ಟ್ರಪತಿ ಅಭ್ಯರ್ಥಿ ಘೋಷಿಸಿದ ವಿಪಕ್ಷ ಮಾರ್ಗರೇಟ್ ಆಳ್ವ ಉಪರಾಷ್ಟ್ರಪತಿ ಅಭ್ಯರ್ಥಿ ಕಾಂಗ್ರೆಸ್ ನಾಯಕಿ, ಮಾಜಿ ರಾಜ್ಯಾಪಾಲೆ ಮಾರ್ಗರೇಟ್ ಅಳ್ವ  

ನವದೆಹಲಿ(ಜು.17): ಉಪ ರಾಷ್ಟ್ರಪತಿ ಚುನಾವಣೆ ಕಾವು ಜೋರಾಗಿದೆ. ಎನ್‌ಡಿಎ ಅಭ್ಯರ್ಥಿ ಘೋಷಿಸಿದ ಬೆನ್ನಲ್ಲೇ ಇದೀಗ ವಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ ನಾಯಕಿ, ಮಾಜಿ ರಾಜ್ಯಪಾಲ ಮಾರ್ಗರೇಟ್ ಆಳ್ವ ವಿಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕರ್ನಾಟಕದ ಮೂಲದ ಮಾರ್ಗರೇಟ್ ಆಳ್ವ ಯುಪಿಎ ಸರ್ಕಾರದಲ್ಲಿ ರಾಜಸ್ಥಾನ, ಉತ್ತರಖಂಡ ಹಾಗೂ ಗೋವಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಮೂಲದ ಮಾರ್ಗರೇಟ್ ಆಳ್ವ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದು ನಡದ ಮಹತ್ವದ ಸಭೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್, ಉಪರಾಷ್ಟ್ರಪತಿ ಅಭ್ಯರ್ಥಿ ಘೋಷಿಸಿದ್ದಾರೆ. ಶುಕ್ರವಾರ ಸಭೆ ಸೇರಿದ 17 ವಿಪಕ್ಷಗಳು ಒಮ್ಮತದಿಂದ ಮಾರ್ಗರೆಟ್ ಆಳ್ವ ಅವರನ್ನು ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್, ಎಲ್ಲರ ಅಭಿಪ್ರಾಯ ಪಡೆದು ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಮಂಗಳವಾರ(ಜು.19) ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶರದ್ ಪವಾರ್ ಹೇಳಿದ್ದಾರೆ. 

ಶರದ್ ಪವಾರ್ ನಿವಾಸದಲ್ಲಿ(Opposition Meet) ಸಭೆ ಸೇರಿದ ವಿಪಕ್ಷ ಭಾರಿ ಚರ್ಚೆ ಬಳಿಕ ಉಪರಾಷ್ಟ್ರಪತಿ ಅಭ್ಯರ್ಥಿ(Vice President) ಆಯ್ಕೆ ಮಾಡಿದೆ. ಈ ಸಭೆಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ ನಾಯಕ ಸಂಜಯ್ ರಾವತ್, ಟಿಆರ್‌ಎಸ್ ನಾಯಕ ಕೆ ಕೇಶವ ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಎನ್‌ಡಿಎ ಕೂಟ ಈಗಾಗಲೇ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ದಂಕರ್(jagdeep dhankhar) ಅವರನ್ನು ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ವಿಪಕ್ಷ ಮಾರ್ಗರೆಟ್(margaret alva) ಆಳ್ವರನ್ನು ಕಣಕ್ಕಿಳಿಸಿದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅದೇ ದಿನ ಮತ ಏಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಜುಲೈ 19 ಕೊನೆಯ ದಿನಾಂಕವಾಗಿದೆ. 

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ NDA ಉಪ ರಾಷ್ಟ್ರಪತಿ ಅಭ್ಯರ್ಥಿ

ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರವದಿ ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ. ಆಗಸ್ಟ್ 11ರಂದು ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ದಂಕರ್ ಹಾಗೂ ಮಾರ್ಗರೆಟ್ ಆಳ್ವ ಪೈಪೋಟಿ ನಡೆಸಲಿದ್ದಾರೆ. 

ಮಂಗಳೂರಿನಲ್ಲಿ ಜನಿಸಿದ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ, 1969ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಇಂದಿರಾ ಗಾಂಧಿ ಸರ್ಕಾರದಲ್ಲಿ ಕರ್ನಾಟಕ ಕಾಂಗ್ರೆಸ್‌ನ ಪ್ರಬಲ ನಾಯಕಿಯಾಗಿ ಬೆಳದ ಮಾರ್ಗರೆಟ್ , 1975 ರಿಂದ 1977ರ ವರೆಗೆ ಆಲ್ ಇಂಡಿಯಾ ನ್ಯಾಷನಲ್ ಕಾಂಗ್ರೆಸ್(AICC) ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 1978 ರಿಂದ 1980ರ ವರೆಗೆ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1974ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಆಳ್ವ, 1984 ರಿಂದ 85ರ ವರೆಗೆ ಕೇಂದ್ರದ ರಾಜ್ಯ ಖಾತ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಯುವಜನ, ಕ್ರೀಡೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ, ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವೆ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. 

ಉಪರಾಷ್ಟ್ರಪತಿ ಸ್ಥಾನಕ್ಕೆ ಬೆಂಗಳೂರಿನ ಹೊಸಮಠ ನಾಮಪತ್ರ

1999ರಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಗೆಲುವು ಸಾಧಿಸಿ ಲೋಕಸಭೆಗೆ ಪ್ರವೇಶಿಸಿದ ಮಾರ್ಗರೆಟ್ ಆಳ್ವ, ಕಾಂಗ್ರಸ್ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. 2009ರಲ್ಲಿ ಮಾರ್ಗರೆಟ್ ಆಳ್ವ ಉತ್ತರಖಂಡದ ರಾಜ್ಯಪಾಲೆಯಾಗಿ ನೇಮಕಗೊಂಡರು. ಉತ್ತರಖಂಡದ ಮೊದಲ ಮಹಿಳಾ ರಾಜ್ಯಪಾಲೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2012ರಲ್ಲಿ ರಾಜಸ್ಥಾನ ರಾಜ್ಯಪಾಲರಾಗಿ ನೇಮಕಗೊಂಡರು. ಬಳಿಕ ಗೋವಾ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದ್ದಾರೆ.