ಭಾರತವು ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂದೂರ ನಡೆಸಿದ ಮಾರನೇ ದಿನವಾದ ಗುರುವಾರ ಹಗಲು-ರಾತ್ರಿ ಎರಡೂ ದೇಶಗಳ ನಡುವೆ ಅಧಿಕೃತವಾಗಿಯೇ ಕಂಡು ಕೇಳರಿಯದ ಯುದ್ಧ ಆರಂಭವಾಗಿದೆ.

ನವದೆಹಲಿ/ಇಸ್ಲಾಮಾಬಾದ್‌: ಭಾರತವು ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂದೂರ ನಡೆಸಿದ ಮಾರನೇ ದಿನವಾದ ಗುರುವಾರ ಹಗಲು-ರಾತ್ರಿ ಎರಡೂ ದೇಶಗಳ ನಡುವೆ ಅಧಿಕೃತವಾಗಿಯೇ ಕಂಡು ಕೇಳರಿಯದ ಯುದ್ಧ ಆರಂಭವಾಗಿದೆ. ಬೆಳಗ್ಗೆ ಹಾಗೂ ರಾತ್ರಿ ಪಾಕಿಸ್ತಾನ 2 ಸಲ ಭಾರತದ ಮೇಲೆ ದಾಳಿ ಮಾಡಿ ಮಾರುತ್ತರ ನೀಡಲು ಯತ್ನಿಸಿದೆ. ಇದಕ್ಕೆ ಭಾರತ ಕೂಡ ದಿಟ್ಟ ಉತ್ತರ ನೀಡಿ, ಎರಡೂ ಸಲ ತನ್ನ ಸ್ವಯಂರಕ್ಷಣೆ ಮಾಡಿಕೊಂಡು ಪ್ರತಿದಾಳಿ ನಡೆಸಿ ಪಾಕ್‌ಗೆ ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡಿದೆ. ಈ ಮೂಲಕ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಅಧಿಕೃತವಾಗಿಯೇ ಎರಡೂ ದೇಶಗಳ ನಡುವೆ ಯುದ್ಧ ಶುರುವಾಗಿದೆ.

Add Asianetnews Kannada as a Preferred SourcegooglePreferred

ವಿಶೇಷವೆಂದರೆ ಒಟ್ಟು 2 ಹಂತಗಳಲ್ಲಿ ಗುರುವಾರ ಹಗಲೂ ರಾತ್ರಿ ವಾಯು, ನೆಲ ಹಾಗೂ ನೌಕಾ ಸಂಘರ್ಷ ನಡೆದಿದೆ. ‘ಆಪರೇಶನ್‌ ಸಿಂದೂರ’ ಇನ್ನೂ ಮುಗಿದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಹೇಳಿದ್ದಾರೆ. ಅತ್ತ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಪಾಕ್ ಸೇನೆಗೆ ಪ್ರತೀಕಾರ ತೀರಿಸಿಕೊಳ್ಳುವ ಅಧಿಕಾರ ನೀಡಿದ್ದಾರೆ. ಹೀಗಾಗಿ ಸಮರ ಅಧಿಕೃತವಾಗಿಯೇ ಆರಂಭವಾದಂತಿದೆ.

ಇಸ್ಲಾಮಾಬಾದ್‌ಗೇ ನುಗ್ಗಿದ ಭಾರತ:

75 ವರ್ಷ ಬಳಿಕ ಇದೇ ಮೊದಲ ಬಾರಿ ಇಸ್ಲಾಮಾಬಾದ್‌ಗೆ ಇಸ್ಲಾಮಾಬಾದ್‌ ಮೇಲೆ ಭಾರತ ವಾಯುದಾಳಿ ನಡೆಸಿದೆ. ಇದರಿಂದ ಬೆಚ್ಚಿದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ ಬಂಕರ್‌ನಲ್ಲಿ ಅವಿತಿದ್ದಾರೆ. ಪಾಕ್‌ನ ಸಿಯಾಲ್‌ಕೋಟ್‌, ರಾವಲ್ಪಿಂಡಿ, ಕರಾಚಿ, ಇಸ್ಲಾಮಾಬಾದ್‌ ಸೇರಿ ಅನೇಕ ನಗರಗಳು ಭಾರತದ ಪ್ರತಿದಾಳಿಗೆ ತತ್ತರಿಸಿವೆ. ಭಾರತದ ದಾಳಿಯಿಂದ ಬಚಾವಾಗಲು ಪಾಕಿಸ್ತಾನದ ಬಹುತೇಕ ಕಡೆ ರಾತ್ರಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು.

ಭಾರತ ತಿರುಗಿ ಬೀಳಲು ಕಾರಣವೂ ಇದೆ. ಗುರುವಾರ ರಾತ್ರಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬ್‌, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ನೂರಾರು ಕ್ಷಿಪಣಿ, ಡ್ರೋನ್‌ ಹಾಗೂ ರಾಕೆಟ್‌ ಮೂಲಕ ದಾಳಿ ಮಾಡಿದೆ. ಹೀಗಾಗಿ ಭಾರತ ತಿರುಗಿಬಿದ್ದಿದೆ. ನೌಕಾಪಡೆ ಕೂಡ ಅಖಾಡಕ್ಕೆ ಇಳಿದಿದ್ದು, ಕರಾಚಿ ಬಂದರು ಭಾರತದ ಐಎನ್‌ಎಎಸ್ ವಿಕ್ರಾಂತ್‌ ದಾಳಿಯಿಂದ ನಾಶವಾಗಿದೆ ಎನ್ನಲಾಗಿದೆ.

ಪಾಕ್‌ಗೆ ಭಾರತ ತಿರುಗೇಟು:

ಗುರುವಾರ ರಾತ್ರಿ ಜಮ್ಮು ವಿಮಾನ ನಿಲ್ದಾಣ, ಕೆಲವು ಮಿಲಿಟರಿ ನೆಲೆಗಳು ಸೇರಿದಂತೆ ಜಮ್ಮುವಿನ ಹಲವಾರು ಸ್ಥಳಗಳು ಹಾಗೂ ರಾಜಸ್ಥಾನ ಮತ್ತು ಪಂಜಾಬ್‌ನ ಕೆಲವು ಭಾಗಗಳ ಮೇಲೆ ರಾಕೆಟ್, ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಭಾರತವು ಈ ಮೂರೂ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತಗೊಳಿಸಿದೆ ಹಾಗೂ ಎಸ್‌-400 ವಾಯುರಕ್ಷಣಾ ವ್ಯವಸ್ಥೆ 8 ಪಾಕ್‌ ಕ್ಷಿಪಣಿ ಹಾಗೂ 2 ಡ್ರೋನ್‌ ನಾಶ ಮಾಡಿದೆ. ಈ ಮೂಲಕ ಹಾನಿಯನ್ನು ತಡೆದಿದೆ.

ಆದರೆ ಭಾರತ ಇಷ್ಟಕ್ಕೇ ಸುಮ್ಮನಾಗದೇ ಗುರುವಾರ ರಾತ್ರಿ ಕೂಡ ಲಾಹೋರ್ ಹಾಗೂ ಸಿಯಾಲ್‌ಕೋಟ್‌ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಜೊತೆಗೆ ಮೊದಲ ಬಾರಿಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ಮತ್ತು ಪಾಕಿಸ್ತಾನದ ಪಂಜಾಬ್‌ ವಾಯುನೆಲೆಗಳ ಮೇಲೂ ಭಾರತದ ಸೇನೆ ದಾಳಿ ನಡೆಸಿದೆ.

ಐಎನ್‌ಎಸ್‌ ವಿಕ್ರಾಂತ್ ಹಡಗಿನ ದಾಳಿಯಿಂದ ಕರಾಚಿ ಬಂದರಿನಲ್ಲಿ ಹಲವಾರು ಭಾರಿ ಸ್ಫೋಟಗಳು ಸಂಭವಿಸಿವೆ. 8-12 ದೊಡ್ಡ ಸ್ಫೋಟಗಳ ಸುದ್ದಿ ಇದೆ. ಕರಾಚಿಯಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಮೊಬೈಲ್ ಸಿಗ್ನಲ್ ಕೂಡ ಅಸ್ತವ್ಯಸ್ತವಾಗಿದೆ.

ಬೆಳಗ್ಗೆ ಒಂದು ಹಂತದ ದಾಳಿ-ಪ್ರತಿದಾಳಿ:

ಗುರುವಾರ ಬೆಳಗ್ಗೆ ಭಾರತವು ಪಾಕಿಸ್ತಾನದಿಂದ ತನ್ನ 15 ನಗರಗಳತ್ತ ಬಂದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ತನ್ನ ಎಸ್‌-400 (ಸುದರ್ಶನ ಚಕ್ರ) ವಾಯುರಕ್ಷಣಾ ವ್ಯವಸ್ಥೆ ಬಳಸಿ ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಲಾಹೋರ್ ಸೇರಿದಂತೆ 3 ಪಾಕ್‌ ನಗರಗಳ ವಾಯುರಕ್ಷಣಾ ವ್ಯವಸ್ಥೆಯನ್ನು ಶಕ್ತಿಶಾಲಿ ಹಾರ್ಪಿ ಡ್ರೋನ್‌ ಪ್ರಯೋಗಿಸಿ ನಾಶ ಮಾಡಿದೆ.