ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹದ ಆರೋಪದ ಮೇಲೆ ಒಡಿಶಾದ ಕಿಯೋಂಜಾರ್ ಕೆಂಡು ಲೀಫ್ ವಿಭಾಗದ ಅರಣ್ಯಾಧಿಕಾರಿ (ಡಿಎಫ್ಒ) ನಿತ್ಯಾನಂದ ನಾಯಕ್ ಅವರ ನಿವಾಸಗಳ ಮೇಲೆ ವಿಚಕ್ಷಣ ದಳದ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ.
ಭುವನೇಶ್ವರ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹದ ಆರೋಪದ ಮೇಲೆ ಒಡಿಶಾದ ಕಿಯೋಂಜಾರ್ ಕೆಂಡು ಲೀಫ್ ವಿಭಾಗದ ಅರಣ್ಯಾಧಿಕಾರಿ (ಡಿಎಫ್ಒ) ನಿತ್ಯಾನಂದ ನಾಯಕ್ ಅವರ ನಿವಾಸಗಳ ಮೇಲೆ ವಿಚಕ್ಷಣ ದಳದ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ.
ಈ ವೇಳೆ 115 ದುಬಾರಿ ಬೆಲೆಯ ನಿವೇಶನಗಳು, ಸಣ್ಣ ಶಸ್ತ್ರಾಗಾರ, 1.55 ಲಕ್ಷ ರು. ಹಣ, 200 ಗ್ರಾಂ ಚಿನ್ನ, ತೇಗದ ಕಲಾಕೃತಿಗಳ ಸಂಗ್ರಹ, 2 ವಾಹನಗಳು ಹಾಗೂ 10 ಕೋಟಿ ರು.ಗೂ ಅಧಿಕ ಮೌಲ್ಯದ ವಿವಿಧ ಆಸ್ತಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಅಂಗುಲ್ನ ಮದನಮೋಹನ ಪಟ್ನಾದಲ್ಲಿರುವ ನಾಯಕ್ರ ಪೋಷಕರ ನಿವಾಸ, ಕಿಯೋಂಜಾರ್ನಲ್ಲಿನ ಸರ್ಕಾರಿ ಕ್ವಾರ್ಟರ್ಸ್ ಮತ್ತು ನಯಾಗಢದ ಕೊಮಾಂಡದಲ್ಲಿರುವ ಅವರ ಮಗನ ಮನೆ ಸೇರಿ 7 ಸ್ಥಳಗಳಲ್ಲಿ ದಾಳಿ ನಡೆದಿದೆ. ಈ ದಾಳಿಯಲ್ಲಿ 115 ನಿವೇಶನಗಳು ಪತ್ತೆಯಾಗಿವೆ.
ಇವುಗಳಲ್ಲಿ 53 ನಾಯಕ್ರ ಹೆಸರಿನಲ್ಲಿ, 42 ಅವರ ಪತ್ನಿ ಹೆಸರಲ್ಲಿ, 16 ಇಬ್ಬರು ಗಂಡುಮಕ್ಕಳ ಹೆಸರಲ್ಲಿ ಹಾಗೂ 4 ಮಗಳ ಹೆಸರಿನಲ್ಲಿವೆ. ಪ್ರತಿ ಪ್ಲಾಟ್ಗಳ ಮಾರುಕಟ್ಟೆ ಮೌಲ್ಯ 10 ಕೋಟಿ ರು.ಗಿಂತಲೂ ಅಧಿಕ ಎನ್ನಲಾಗಿದೆ. ಸಣ್ಣ ಶಸ್ತ್ರಾಗಾರದಲ್ಲಿ 1 ರೈಫಲ್, ಕತ್ತಿಗಳು, ಈಟಿ ಮೊದಲಾದ ಆಯುಧಗಳು ದೊರೆತಿವೆ. ನಾಯಕ್ರ ಬ್ಯಾಂಕ್ ಖಾತೆ, ವಿಮೆ, ಅಂಚೆ ಮತ್ತು ಇತರೆ ಠೇವಣಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮತ್ತಷ್ಟು ಆಸ್ತಿಗಳು ಪತ್ತೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಇಂಜಿನಿಯರ್ ಒಬ್ಬರಿಗೆ ಸೇರಿದ 105 ಅಕ್ರಮ ನಿವೇಶನಗಳ ಪತ್ತೆಯಾಗಿತ್ತು.
ಪ್ರಕಾಶ್ ರಾಜ್, ದೇವರಕೊಂಡ ಸೇರಿ 4 ಜನಕ್ಕೆ ಇ.ಡಿ. ಸಮನ್ಸ್
ಹೈದರಾಬಾದ್: ಆ್ಯಪ್ಗಳ ಮೂಲಕ ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟರಾದ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಲಕ್ಷ್ಮಿ ಮಂಚು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ನೂರಾರು ಕೋಟಿ ಅಕ್ರಮ ಹಣ ವ್ಯವಹಾರದಲ್ಲಿ ತೊಡಗಿರುವ ಆರೋಪ ಹೊತ್ತಿರುವ ಜಂಗ್ಲಿ, ರಮ್ಮಿ, ಜೀತ್ವಿನ್ಗಳಂತಹ ಆನ್ಲೈನ್ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡಿರುವ ಕಾರಣ ಒಟ್ಟು 21 ಜನರ ವಿರುದ್ಧ ಇತ್ತೀಚೆಗೆ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿತ್ತು. ಅದರ ಬೆನ್ನಲ್ಲೇ ನಾಲ್ವರಿಗೂ ಬೇರೆಬೇರೆ ದಿನದಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಆ ವೇಳೆ, ನಟರ ಹೇಳಿಕೆಗಳನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ದಾಖಲಿಸಲಾಗುವುದು. 5 ರಾಜ್ಯಗಳ ಪೊಲೀಸರು ಅಕ್ರಮ ಬೆಟ್ಟಿಂಗ್ ಹಗರಣ ಸಂಬಂಧ ದಾಖಲಿಸಿರುವ ಎಫ್ಐಆರ್ ಆಧಾರದಲ್ಲಿ ಇ.ಡಿ. ತಾನು ಕೂಡಾ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.


