20 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ದೇಹದಲ್ಲಿ ಇಲ್ಲಿವರೆಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.
ನವದೆಹಲಿ: 20 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ದೇಹದಲ್ಲಿ ಇಲ್ಲಿವರೆಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಇಸ್ರೋ, ‘ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ಆಗಮಿಸಿದ ಬಳಿಕ ಅವರಿಗೆ ಪ್ರಾಥಮಿಕ ಆರೋಗ್ಯ ಪರೀಕ್ಷೆ ನಡೆಸಲಾಯಿತು. ಮೈಕ್ರೋಗ್ರಾವಿಟಿಯ ಅಡ್ಡ ಪರಿಣಾಮಗಳ ಬಗ್ಗೆ ಹೃದಯರಕ್ತನಾಳ ಪರೀಕ್ಷೆ, ಸ್ನಾಯು ಮತ್ತು ಮೂಳೆ ಪರೀಕ್ಷೆ ಮತ್ತು ಮನೋಪರೀಕ್ಷೆಗಳನ್ನು ನಡೆಸಲಾಯಿತು. ಈ ವೇಳೆ ಯಾವುದೇ ತೊಂದರೆಗಳು ಕಾಣಿಸಿಕೊಳ್ಳಲಿಲ್ಲ. ಎಲ್ಲ ಗಗನಯಾತ್ರಿಗಳನ್ನು 1 ವಾರದ ಪುನಶ್ಚೇತನಕ್ಕೆ ಕಳುಹಿಸಲಾಗಿದೆ ಎಂದು ಹೇಳಿತು.
ಗಗನಯಾನಿಗಳು ಬಾಹ್ಯಾಕಾಶದಲ್ಲಿ 135.18 ಲಕ್ಷ ಕಿ.ಮೀ. ಸಂಚರಿಸಿ ಭೂಮಿಗೆ 320 ಬಾರಿ ಪ್ರದಕ್ಷಿಣೆ ಹಾಕಿದ್ದಾರೆ.
ಕೆಲವು ದಿನ ಸವಾಲಿನ ಸ್ಥಿತಿ
ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ. ನಿರ್ವಾತ ಪ್ರದೇಶ ವಾಸದಿಂದ ಗುರುತ್ವಾಕರ್ಷಣೆಯಿರುವ ಮಾತೃಗ್ರಹಕ್ಕೆ ಬಂದಿರುವ ಶುಭಾಂಶು, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಯಾತ್ರಿಕರಿಗೆ 1 ವಾರ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಅವರು ಶಿಬಿರದಿಂದ ಹೊರಬಂದು ಸಾರ್ವಜನಿಕರ ಜತೆ ಬೆರೆಯಲಿದ್ದಾರೆ.
ಸಮಸ್ಯೆಗಳು ಏನು? :
ಗಗನಯಾನದಿಂದ ಬಂದ ನಂತರ ಯಾತ್ರಿಕರು ತಲೆ ಸುತ್ತುವಿಕೆ, ವಾಕರಿಕೆ, ಅಸ್ಥಿರ ನಡಿಗೆ, ತೊದಲುವಿಕೆಯಂತಹ ಸಮಸ್ಯೆಗಳನ್ನು ಎದುರಿಸುವ ಅಪಾಯವಿರುತ್ತದೆ.
ಮೂಳೆ ಸಾಂದ್ರತೆ ಇಳಿಕೆ:
ಗಗನಯಾನಿಗಳ ಸ್ನಾಯುಗಳಲ್ಲಿ ಜೀವಕೋಶಗಳ ನಷ್ಟವಾಗುತ್ತದೆ. ಅಂತೆಯೇ, ಬೆನ್ನು, ಸೊಂಟ, ತೊಡೆ ಎಲುಬುಗಳ ಶೇ.1ರಷ್ಟು ಸಾಂದ್ರತೆ ಕಡಿಮೆಯಾಗುತ್ತದೆ. ಗುರುತ್ವಾಕರ್ಷಣೆ ಕೊರತೆಯಿಂದ ದೇಹದ ದ್ರವಗಳು ಗಗನಯಾತ್ರಿಗಳ ತಲೆ ಭಾಗದಲ್ಲಿ ಶೇಖರಣೆಯಾಗಿ ಅದು ಊದಿಕೊಂಡಿರುವ ಸಾಧ್ಯತೆ ಇರುತ್ತದೆ. ದೇಹದ ಕೆಳಭಾಗದಲ್ಲಿ ದ್ರವಗಳ ಕೊರತೆಯಿಂದಾಗಿ ಕಾಲುಗಳು ಕೃಶ ಮತ್ತು ಬಲಹೀನವಾಗಿರುತ್ತವೆ. ಜೊತೆಗೆ, ಪಾದದ ಚರ್ಮದ ಪದರ ಕಿತ್ತುಹೋಗಿ, ಅದು ತೆಳ್ಳಗೆ ಹಾಗೂ ಮೃದುವಾಗುತ್ತದೆ. ಪರಿಣಾಮವಾಗಿ ಭೂಮಿಗೆ ಮರಳುತ್ತಿ ದ್ದಂತೆ ಗಗನಯಾತ್ರಿಗಳು ನಡೆಯಲು ಕಷ್ಟಪಡುವಂತಾಗುತ್ತದೆ.
ಎತ್ತರದಲ್ಲಿ ಹೆಚ್ಚಳ:
ಬಾಹ್ಯಾಕಾಶದಲ್ಲಿ ಯಾನಿಗಳ ಬೆನ್ನುಮೂಳೆ ಕೆಲ ಇಂಚು ಬೆಳವಣಿಗೆ ಕಾಣುವ ಕಾರಣ ದೇಹದ ಎತ್ತರ ದಲ್ಲೂ ಹೆಚ್ಚಳವಾಗಿರುತ್ತದೆ. ಆದರೆ ಭೂ ಮಿಗೆ ಮರಳುತ್ತಿದ್ದಂತೆ ಅದು ಮೊದಲಿನಷ್ಟಾಗುವುದು. ಆಗ ತೀವ್ರ ಬೆನ್ನು ನೋವಿನಂತಹ ಸಮಸ್ಯೆ ಎದುರಾಗುವುದು.
ಹೃದಯದ ಮೇಲೂ ಪರಿಣಾಮ:
ಆಗಸದಲ್ಲಿ ಗುರುತ್ವಾಕರ್ಷಣೆ ಬಲ ಇರದ ಕಾರಣ ರಕ್ತ ಪರಿಚಲನೆಯಲ್ಲೂ ಸಮಸ್ಯೆ ಆಗಿರುತ್ತದೆ. ಇದರಿಂದ ಹೃದಯದ ಸಾಮರ್ಥ್ಯ ಕ್ಷೀಣಿಸಿ, ರಕ್ತನಾಳದ ಸಮಸ್ಯೆಯೂ ಕಂಡುಬರುತ್ತದೆ.
ದೀರ್ಘಾವಧಿ ಸವಾಲುಗಳೇನು?:
