Min read

ಬದುಕಿನ ಭರವಸೆ ಇಲ್ಲ; ಜೈಲಲ್ಲಿ ಸಾಯೋದೇ ಲೇಸು: ಕೋರ್ಟ್‌ನಲ್ಲೇ ಗಳ ಗಳನೇ ಕಣ್ಣೀರಿಟ್ಟ ಜೆಟ್‌ ಏರ್‌ವೇಸ್‌ ಸಂಸ್ಥಾಪಕ

no hope better to die in jail jet airways founder breaks down in court ash

Synopsis

ಬ್ಯಾಂಕ್‌ ವಂಚನೆ ಕೇಸ್‌ಗೆ ಸಂಬಂಧಿಸಿದಂತೆ ಇಡಿ ಕಳೆದ ವರ್ಷ ಸೆಪ್ಟೆಂಬರ್ 1 ರಂದು ನರೇಶ್‌ ಗೋಯಲ್ ರನ್ನು ಬಂಧಿಸಿತ್ತು. ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮುಂಬೈ (ಜನವರಿ 7, 2024): ಕೆನರಾ ಬ್ಯಾಂಕ್‌ಗೆ 538 ಕೋಟಿ ವಂಚನೆ ಕೇಸ್‌ನಲ್ಲಿ ಆರೋಪಿಯಾಗಿರೋ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಕೋರ್ಟ್‌ನಲ್ಲಿ ಕಣ್ಣೀರಿಟ್ಟಿದ್ದಾರೆ. ಬದುಕಿನ ಎಲ್ಲ ಭರವಸೆಯನ್ನೂ ಕಳೆದುಕೊಂಡಿದ್ದೇನೆ’ ಎಂದು ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಕೈ ಮುಗಿದು ಹೇಳಿದ್ದಾರೆ. ಅಲ್ಲದೆ, ಈಗಿನ ಸ್ಥಿತಿಯಲ್ಲಿ ಬದುಕುವುದಕ್ಕಿಂತ ಜೈಲಿನಲ್ಲಿ ಸತ್ತರೆ ಒಳ್ಳೆಯದು ಎಂದೂ ಹೇಳಿದ್ದಾರೆ.

ಅಲ್ಲದೆ, ತನ್ನ ಪತ್ನಿ ಅನಿತಾಳನ್ನು ತಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆಗೆ ಕ್ಯಾನ್ಸರ್‌ ಅಡ್ವಾನ್ಸ್‌ ಹಂತದಲ್ಲಿದೆ ಎಂದು ನ್ಯಾಯಾಲಯದಲ್ಲಿ ಕಣ್ಣೀರು ಸುರಿಸಿದ್ದಾರೆ ಎಂದು ಕೋರ್ಟ್‌ ದಾಖಲೆಗಳು ಹೇಳಿದೆ. ಬ್ಯಾಂಕ್‌ ವಂಚನೆ ಕೇಸ್‌ಗೆ ಸಂಬಂಧಿಸಿದಂತೆ ಇಡಿ ಕಳೆದ ವರ್ಷ ಸೆಪ್ಟೆಂಬರ್ 1 ರಂದು ನರೇಶ್‌ ಗೋಯಲ್ ರನ್ನು ಬಂಧಿಸಿತ್ತು. ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನು ಓದಿ: ಬ್ಯಾಂಕ್‌ ವಂಚನೆ, ಅಕ್ರಮ ಹಣ ವರ್ಗಾವಣೆ ಕೇಸ್‌: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಬಂಧಿಸಿದ ಇ.ಡಿ

ವಿಶೇಷ ನ್ಯಾಯಾಧೀಶ ಎಂ. ಜಿ. ದೇಶಪಾಂಡೆ ಅವರ ಎದುರು ನರೇಶ್‌ ಗೋಯಲ್‌ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಮಾತನಾಡಿದ ನರೇಶ್‌ ಗೋಯಲ್‌, ತನ್ನ ಆರೋಗ್ಯವು ತುಂಬಾ ಕೆಟ್ಟದಾಗಿದೆ ಮತ್ತು ಅನಿಶ್ಚಿತವಾಗಿದೆ ಎಂದರು. ಹಾಗೂ, ಪತ್ನಿ ಹಾಸಿಗೆ ಹಿಡಿದಿದ್ದು, ಒಬ್ಬಳೇ ಮಗಳೂ ಅಸ್ವಸ್ಥಳಾಗಿದ್ದಾಳೆ ಎಂದು ಉದ್ಯಮಿ ತಿಳಿಸಿದ್ದಾರೆ. 

ಬಳಿಕ ತನ್ನ ಮೊಣಕಾಲುಗಳನ್ನು ತೋರಿಸಿ, ಅವು ಊದಿಕೊಂಡಿವೆ ಮತ್ತು ನೋಯುತ್ತಿದೆ. ತನ್ನ ಕಾಲುಗಳನ್ನು ಮಡಚಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಮೂತ್ರ ವಿಸರ್ಜಿಸುವಾಗ ತೀವ್ರವಾದ ನೋವು ಮತ್ತು ಕೆಲವೊಮ್ಮೆ ಮೂತ್ರದ ಮೂಲಕ ರಕ್ತ ಬರುತ್ತಿದೆ. ಜೈಲಿನ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಹೇಳಿದ್ದಾರೆ.

 

Jet Airways:ಕಳೆದ ತ್ರೈಮಾಸಿಕದಲ್ಲಿ ಜೆಟ್ ಏರ್ ವೈಸ್ ಗೆ 233.63 ಕೋಟಿ ರೂ. ನಿವ್ವಳ ನಷ್ಟ

ಈ ಹಿನ್ನೆಲೆ ಆಸ್ಪತ್ರೆಗೆ ಸೇರಿಸೋದು ಬೇಡ. ಜೈಲಿನಲ್ಲೇ ಸಾಯಲು ಬಿಡಿ. ಜೀವನದ ಎಲ್ಲ ಭರವಸೆ ಕಳೆಎದುಕೊಂಡಿದ್ದೇನೆ. ಅಂತಹ ಪರಿಸ್ಥಿತಿಯಲ್ಲಿ ಜೀವಂತವಾಗಿರುವುದಕ್ಕಿಂತ ಸಾಯುವುದು ಉತ್ತಮ. ತಾನು 75ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಭವಿಸ್ಯದ ಬಗ್ಗೆ ಭರವಸೆ ಇಲ್ಲ ಎಂದೂ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವಲತ್ತುಕೊಂಡಿದ್ದಾರೆ.

ಅಲ್ಲದೆ, ಆರೋಗ್ಯದ ಸಮಸ್ಯೆಯಿಂದ ಖುದ್ದಾಗಿ ಹಾಜರಾಗಲು ಸಹ ಆಗುತ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆ ಅವರ ಆರೋಗ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ. ಅವರ ಜಾಮೀನು ಅರ್ಜಿಗೆ ಇಡಿ ಪ್ರತಿಕ್ರಿಯೆ ಸಲ್ಲಿಸಿದ್ದು, ಜನವರಿ 16 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್‌ಗೆ ಕೆನರಾ ಬ್ಯಾಂಕ್‌ 848.86 ಕೋಟಿ ರೂ. ಮೊತ್ತದ ಸಾಲ ಮಂಜೂರು ಮಾಡಿದ್ದು, ಅದರಲ್ಲಿ 538.62 ಕೋಟಿ ರೂ. ಬಾಕಿ ಇದೆ ಎಂಬ ಬ್ಯಾಂಕ್‌ನ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

Latest Videos