Goa nightclub fire tragedy: 25 ಜನರ ಬಲಿ ಪಡೆದ ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತ ನಡೆದ ಕೆಲವೇ ಗಂಟೆಗಳಲ್ಲಿ ಕ್ಲಬ್‌ನ ಮಾಲೀಕರಾದ ಗೌರವ್ ಮತ್ತು ಸೌರಭ್ ಲುತ್ರಾ ದೇಶ ಬಿಟ್ಟು ಥೈಲ್ಯಾಂಡ್‌ಗೆ ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.

ಘಟನೆ ನಡೆದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕರು:

ಪಣಜಿ: 25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಕ್ಲಬ್‌ನ ಮಾಲೀಕರು ದೇಶ ಬಿಟ್ಟು ಥೈಲ್ಯಾಂಡ್‌ಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಶನಿವಾರ ರಾತ್ರಿ ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವನ್ನಪ್ಪಿದ್ದರು. ಇಷ್ಟೊಂದು ಜನರ ಸಾವಿನ ನಂತರ ಪೊಲೀಸರು ಕ್ಲಬ್‌ನ ಮಾಲೀಕರಿಗೆ ಹುಡುಕಾಟ ಆರಂಭಿಸಿದ್ದರು. ಆದರೆ ಅಷ್ಟರಲ್ಲೇ ಇಬ್ಬರು ಮಾಲೀಕರು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ನಡೆದ ಕೆಲ ಗಂಟೆಗಳ ಅಂತರದಲ್ಲಿ ಅವರು ಇಂಡಿಗೋ ಡಾನ್ ವಿಮಾನದ ಮೂಲಕ ಥೈಲ್ಯಾಂಡ್‌ನ ಪುಕೆಟ್‌ಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾದ ತಕ್ಷಣ, ಗೋವಾದ ಪೊಲೀಸ್ ತಂಡವು ದೆಹಲಿಯಲ್ಲಿ ಇಬ್ಬರು ಆರೋಪಿಗಳಾದ ಗೌರವ್ ಮತ್ತು ಸೌರಭ್ ಲುತ್ರಾ ಅವರನ್ನು ಹುಡುಕಲು ದೆಹಲಿಗೆ ಆಗಮಿಸಿತ್ತು.. ಆದರೆ, ಇಬ್ಬರೂ ಈ ವೇಳೆ ಮನೆಯಲ್ಲಿ ಇರಲಿಲ್ಲ, ಆದ್ದರಿಂದ ಪೊಲೀಸರು ಮನೆಗೆ ನೋಟಿಸ್ ಅಂಟಿಸಿ ಬಂದಿದ್ದರು. ಆದರೆ ನಂತರದಲ್ಲಿ ಅವರು ದೇಶವನ್ನೇ ಬಿಟ್ಟು ಹೋಗಿರುವುದು ತಿಳಿದು ಬಂದಿದೆ.

ಆರೋಪಿಗಳ ಪತ್ತೆಗೆ ಲುಕ್ಔಟ್ ನೊಟೀಸ್:

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಲಸೆ ವಿಭಾಗಕ್ಕೆ(Bureau of Immigration) ಮನವಿ ಮಾಡಿದ ನಂತರ ಲುಕ್ ಔಟ್ ಸುತ್ತೋಲೆಯನ್ನು(lookout circular) ಸಹ ಹೊರಡಿಸಲಾಗಿದೆ. ಲುಕ್‌ಔಟ್ ಸರ್ಕ್ಯುಲರ್ ಇದ್ದರೆ, ದೇಶದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ದೇಶಕ್ಕೆ ಬೇರೆಡೆಯಿಂದ ಪ್ರವೇಶಿಸುವ ಪ್ರತಿಯೊಂದು ಪ್ರವೇಶ ಮತ್ತು ನಿರ್ಗಮನ ಹಂತದಲ್ಲಿ ಅಧಿಕಾರಿಗಳಿಗೆ ನೋಟೀಸ್‌ನಲ್ಲಿ ಹೆಸರಿಸಲಾದವರನ್ನು ಹೊರಗೆ ಹೋಗದಂತೆ ತಡೆಯಲು ಈ ಲುಕ್ ಔಟ್ ಸುತ್ತೋಲೆಯು ಎಚ್ಚರಿಕೆ ನೀಡುತ್ತದೆ.

ಇದನ್ನೂ ಓದಿ:ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ

ಮುಂಬೈ ವಿಮಾನ ನಿಲ್ದಾಣದ ವಲಸೆ ಬ್ಯೂರೋಗೆ ಬಂದಿರುವ ಮಾಹಿತಿಯ ಪ್ರಕಾರ, ಭಾನುವಾರ ಬೆಳಗ್ಗೆ 5.30 ಕ್ಕೆ ಇಬ್ಬರು ಆರೋಪಿಗಳು ಥೈಲ್ಯಾಂಡ್‌ನ ಫುಕೆಟ್‌ಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ, ಇದು ಮಾರಕ ಬೆಂಕಿಯ ಘಟನೆ ಸಂಬಂವಿಸಿದ ಕೆಲವೇ ಗಂಟೆಗಳ ನಂತರದ ಸಮಯವಾಗಿದೆ. ಉತ್ತರ ಗೋವಾದ ರೋಮಿಯೋ ಲೇನ್‌ನಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್‌ನಲ್ಲಿರುವ ಅವರ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದರ ಮಾಲೀಕರಾದ ಇಬ್ಬರು ಸಹೋದರರಾದ ಗೌರವ್ ಮತ್ತು ಸೌರಭ್ ಲುತ್ರಾ ದೆಹಲಿಯಲ್ಲಿದ್ದರು.

ಇಂಡಿಗೋ ವಿಮಾನದಲ್ಲಿ ಇಬ್ಬರು ಥೈಲ್ಯಾಂಡ್‌ಗೆ ಪಲಾಯನ

ಈ ಇಬ್ಬರು ಥೈಲ್ಯಾಂಡ್‌ಗೆ ಪಲಾಯನ ಮಾಡಲು ಇಂಡಿಗೋ ವಿಮಾನ 6E 1073 ಅನ್ನು ಏರಿದ್ದಾರೆ. ಪೈಲಟ್ ರೋಸ್ಟರಿಂಗ್ ಸಮಸ್ಯೆಗಳಿಂದ ಭಾರತದಲ್ಲಿ ಇಂಡಿಗೋ ದೇಶೀಯ ಕಾರ್ಯಾಚರಣೆಗಳಲ್ಲಿ ಭಾರಿ ಅಡ್ಡಿ ಉಂಟು ಮಾಡಿದೆ. ಆದರೆ ಭಾರತದ ಹೊರಗಿನ ಸ್ಥಳಗಳಿಗೆ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಯಾವುದೇ ಪರಿಣಾಮ ಆಗಿಲ್ಲ. ಇಬ್ಬರು ದೇಶ ಬಿಟ್ಟು ಪರಾರಿಯಾಗಿರುವುದರಿಂದ ಇಬ್ಬರೂ ಸ್ಪಷ್ಟವಾಗಿ, ಪೊಲೀಸ್ ತನಿಖೆಯನ್ನು ತಪ್ಪಿಸಲು ಬಯಸಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದ ಇಬ್ಬರು ಆರೋಪಿಗಳನ್ನು ಸಾಧ್ಯವಾದಷ್ಟು ಬೇಗ ಬಂಧಿಸುವ ಕಾರ್ಯಾಚರಣೆಗೆ ಸಮನ್ವಯ ಸಾಧಿಸಲು ಗೋವಾ ಪೊಲೀಸರು ಕೇಂದ್ರ ತನಿಖಾ ದಳದ (ಸಿಬಿಐ) ಇಂಟರ್‌ಪೋಲ್ ವಿಭಾಗವನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ದೆಹಲಿಯಲ್ಲಿ ಬಂಧಿಸಲ್ಪಟ್ಟ ಮೂರನೇ ಆರೋಪಿ ಭರತ್ ಕೊಹ್ಲಿಯನ್ನು ವಿಚಾರಣೆಗಾಗಿ ಗೋವಾಕ್ಕೆ ಕರೆತರಲಾಗಿದೆ.

ಇದನ್ನೂ ಓದಿ: ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?

ಘಟನೆಗೆ ಸಂಬಂಧಿಸಿದಂತೆ ಲೈಸೆನ್ಸ್ ನೀಡಿದ ಹಾಗೂ ಅನುಮತಿ ನೀಡುವಲ್ಲಿ ತೊಡಗಿರುವ ಹಲವಾರು ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಕ್ಲಬ್ ನಿರ್ಮಾಣದ ವೇಳೆ ಸಂಭಾವ್ಯ ಅನುಸರಣೆ ಲೋಪಗಳು ಮತ್ತು ಕಾರ್ಯವಿಧಾನದ ಉಲ್ಲಂಘನೆಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ಕರೆಸಲಾಗಿದೆ. ತನಿಖೆಯನ್ನು ಆದ್ಯತೆಯ ಮೇಲೆ ನಡೆಸಲಾಗುತ್ತಿದ್ದು, ಅದರ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಗೋವಾ ಅಧಿಕಾರಿಗಳು, ಮೀನುಗಾರಿಕೆ ನಿರ್ದೇಶಕಿ ಮತ್ತು ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯೆ ಕಾರ್ಯದರ್ಶಿ ಶಮಿಲಾ ಮೊಂತೆರೊ ಅವರನ್ನು ನಿಯಂತ್ರಕ ದೋಷಗಳ ಕಾರಣ ನೀಡಿ ಅಮಾನತುಗೊಳಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.