ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ, ಅರ್ಪೋರಾದಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಕನ್ನಡಿಗನೂ ಬಲಿಯಾಗಿದ್ದಾರೆ.
ಗೋವಾ (ಡಿ.07) ಉತ್ತರ ಗೋವಾದ ಅರ್ಪೋರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಶನಿವಾರ (ಡಿ.06) ರಾತ್ರಿ ಬಾಗಾ ಬಳಿ ಇರುವ ಬಿರ್ಚಿ ಬೈ ರೊಮಿಯೋ ಲೈನ್ ನೈಟ್ಕ್ಲಬ್ನಲ್ಲಿ ಈ ದುರಂತ ಸಂಭವಿಸಿದೆ. ನೈಟ್ಕ್ಲಬ್ನ ಅಡುಗೆ ಕೋಣೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಡೀ ನೈಟ್ ಕ್ಲಬ್ ಹೊತ್ತಿ ಉರಿದಿತ್ತು. ಕ್ಲಬ್ ಕೆಳಮಹಡಿಯಲ್ಲಿ ಸ್ಫೋಟ ಸಂಭವಿಸಿ ಇಡೀ ನೈಟ್ ಕ್ಲಬ್ಗೆ ವ್ಯಾಪಿಸಿತ್ತು. ಈ ದುರಂತದಲ್ಲಿ ಕ್ಲಬ್ ಸಿಬ್ಬಂದಿ ಸೇರಿದಂತೆ 25 ಮಂದಿ ಮೃತರಾಗಿದ್ದಾರೆ. ಈ ಪೈಕಿ ಕನ್ನಡಿಗನೂ ಸೇರಿದ್ದಾನೆ.
ಬೆಂಗಳೂರು ನಿವಾಸಿ ಇಶಾಕ್ ಗೋವಾ ಅಗ್ನಿ ದುರಂತದಲ್ಲಿ ಮೃತ
ಬೆಂಗಳೂರಿನ ಥಣಿಸಂದ್ರ ನಿವಾಸಿ 25 ವರ್ಷದ ಇಶಾಕ್ ಗೋವಾದ ನೈಟ್ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಗೆಳೆಯರ ಜೊತೆ ಗೋವಾ ಟ್ರಿಪ್ ಹೋಗಿದ್ದ ಇಶಾಕ್ ನೈಟ್ ಕ್ಲಬ್ಗೆ ತೆರಳಿ ಎಂಜಾಯ್ ಮಾಡಿದ್ದರು. ಆದರೆ ಅಗ್ನಿ ದುರಂತದಲ್ಲಿ ಇಶಾಕ್ ಹೊರಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್ ಬಳಿ ವಾಸ ಇದ್ದ ಇಶಾಕ್, ಐವರು ಗೆಳೆಯರ ಜೊತೆ ಗೋವಾ ಟ್ರಿಪ್ ಹೋಗಿದ್ದರು. ಈ ಪೈಕಿ ಇಶಾಕ್ ಮೃತಪಟ್ಟರೆ, ಇನ್ನುಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ಮಧ್ಯಾಹ್ನ ಗೋವಾ ತಲುಪಿದ್ದ ಇಶಾಕ್ ಹಾಗೂ ನಾಲ್ವರು ಸ್ನೇಹಿತರು ಗೋವಾ ಬೀಚ್ ಸೇರಿದಂತೆ ಹಲೆವೆಡೆ ಸುತ್ತಾಡಿದ್ದಾರೆ.ಬಳಿಕ ಬಿರ್ಚಿ ನೈಟ್ ಕ್ಲಬ್ಗೆ ತೆರಳಿದ್ದಾರೆ.
ಇಶಾಕ್ ಮೃತದೇಹ ಬೆಂಗಳೂರಿಗೆ ತರಲು ಹರಹಾಸ
ದೇಶಾದ್ಯಂತ ವಿಮಾನ ಸಮಸ್ಯೆ ಎದುರಾಗಿರುವ ಕಾರಣ ಇಶಾಕ್ ಮೃತದೇಹ ಬೆಂಗಳೂರಿಗೆ ತರಲು ಕುಟುಂಬಸ್ಥರು ಪ್ರಯ್ನಿಸುತ್ತಿದ್ದಾರೆ. ಸದ್ಯ ಗೋವಾದಲ್ಲಿ ಮೃತದೇಹದ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ರಾತ್ರಿನೇ ಮೃತದೇಹ ಬೆಂಗಳೂರಿಗೆ ತರಲು ಕುಟುಂಬಸ್ಥರು ಶತ ಪ್ರಯತ್ನ ಮಾಡುತ್ತಿದ್ದಾರೆ.
ಪರಿಹಾರ ಘೋಷಿಸಿದ ಪ್ರಧಾನಿ
ಗೋವಾದ ಅರ್ಪೋರಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿಮೃತಪಟ್ಟವರು ಹಾಗೂ ಗಾಯಾಳುಗಳಿಗೆ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಘೋಷಿಸಿದ್ದಾರೆ. ಮೃತರಿಗೆ 2 ಲಕ್ಷ ಪರಿಹಾರ, ಗಾಯಾಳುಗಳಿಗೆ 50,000 ಘೋಷಣೆ ಮಾಡಿದ್ದಾರೆ.
ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ
ಘಟನಾ ಸ್ಥಳಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಸುರಕ್ಷತಾ ಕ್ರಮಗಳ ವೈಫಲ್ಯ ಘಟನೆ ಕಾರಣ ಎಂಬ ಮಾಹಿತಿಗಳು ಬರುತ್ತಿದೆ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ದುರಂತ ಘಟನೆಯಿಂದ ತೀವ್ರ ನೋವಾಗಿದೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ.


