ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಗೆ ತನಿಖಾ ಏಜೆನ್ಸಿಗಳ ಬಿಸಿ ಮುಟ್ಟಿದೆ. ಚುನಾವಣೆ ವೇಳೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿಎಂಸಿಯ ಮಾಜಿ ಶಾಸಕ ಶೌಕತ್ ಮೊಲ್ಲಾ ಅವರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದೆ.

ಕೋಲ್ಕತ್ತಾ (ಜೂ.4): ಪಶ್ಚಿಮ ಬಂಗಾಳ(West Bengal)ದಲ್ಲಿ ತೃಣಮೂಲ ಕಾಂಗ್ರೆಸ್ (TMC) ನಾಯಕರಿಗೆ ಸಂಕಷ್ಟಗಳು ಒಂದರ ಮೇಲೊಂದರಂತೆ ಬರುತ್ತಿವೆ, ಇತ್ತೀಚೆಗೆ ತನಿಖಾ ಏಜೆನ್ಸಿಗಳು ಟಿಎಂಸಿ ನಾಯಕರು ಅಪರಾಧ ಹಿನ್ನೆಲೆಗಳನ್ನ ಹಿಡಿದು ಬೆನ್ನು ಬಿಡದೆ ಕಾಡುತ್ತಿವೆ. ಇದೀಗ ಮಮತಾ ಬ್ಯಾನರ್ಜಿ(Mamata Banerje) ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಶೌಕತ್ ಮೊಲ್ಲಾ ಅವರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಗಾಳ ಚುನಾವಣೆ ವೇಳೆ ನಡೆದ ಬಾಂಬ್ ಪ್ರಕರಣದಲ್ಲಿ ಕೈವಾಡ

ಭಂಗರ್‌ನಲ್ಲಿರುವ ಸೌತ್ ಬಮುನಿಯಾದಲ್ಲಿನ ಶೌಕತ್ ಮೊಲ್ಲಾ ನಿವಾಸದ ಮೇಲೆ ಎನ್‌ಐಎ ತಂಡ ಈ ಪರಿಶೀಲನೆ ನಡೆಸಿದೆ. ಬಂಗಾಳ ಚುನಾವಣೆಗೆ ಕೆಲವೇ ದಿನಗಳ ಮೊದಲು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಈ ಪ್ರಕರಣದ ತನಿಖೆಯನ್ನು ಕೇಂದ್ರ ಏಜೆನ್ಸಿಗೆ ವಹಿಸಬೇಕೆಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ, ಎನ್‌ಐಎಗೆ ತನಿಖೆ ಹಸ್ತಾಂತರವಾಗಿತ್ತು. ಈಗಾಗಲೇ ತನಿಖೆ ಆರಂಭಿಸಿರುವ ಎನ್‌ಐಎ, ಟಿಎಂಸಿ ನಾಯಕ ವಹಿದುಲ್ ಇಸ್ಲಾಂ ಸೇರಿದಂತೆ ಹಲವರನ್ನು ಬಂಧಿಸಿದೆ.

ಇದರ ಭಾಗವಾಗಿ ವಿಶೇಷ ತನಿಖಾ ತಂಡವು ಶೌಕತ್ ಮೊಲ್ಲಾ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದೆ. ಈ ಸ್ಫೋಟದ ಹಿಂದೆ ಟಿಎಂಸಿ ಅಭ್ಯರ್ಥಿಗಳು ಮತ್ತು ನಾಯಕರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು.

ಅಭಿಷೇಕ್ ಬ್ಯಾನರ್ಜಿಗೂ ನೋಟಿಸ್ ಬಿಸಿ

ಇನ್ನೊಂದೆಡೆ, ನಕಲಿ ಸಹಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಿಐಡಿ ತಂಡ ನೋಟಿಸ್ ನೀಡಿದೆ. ಜೂನ್ 8 ರಂದು ಸಿಐಡಿ ಕೇಂದ್ರ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ. ಕಳೆದ ಸೋಮವಾರ ಸಿಐಡಿ ತಂಡ ಅಭಿಷೇಕ್ ಬ್ಯಾನರ್ಜಿ ನಿವಾಸಕ್ಕೆ ಭೇಟಿ ನೀಡಿತ್ತು. ಆಗ ಆರೋಗ್ಯದ ಕಾರಣ ನೀಡಿ ಎರಡು ವಾರಗಳ ಕಾಲಾವಕಾಶ ಕೋರಿದ್ದ ಅಭಿಷೇಕ್ ಬ್ಯಾನರ್ಜಿಗೆ, ಇದೀಗ ಸಿಐಡಿ ಮತ್ತೆ ನೋಟಿಸ್ ಜಾರಿ ಮಾಡಿದೆ. ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದೆ.

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಆರೋಪವೇನು?

ಟಿಎಂಸಿಯ ಹಿರಿಯ ನಾಯಕ ಸೋಬನ್‌ದೇವ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಗುರುತಿಸಬೇಕೆಂದು ಕೋರಿ ವಿಧಾನಸಭಾ ಸಚಿವಾಲಯಕ್ಕೆ ನೀಡಿದ್ದ ಪತ್ರದಲ್ಲಿ ಶಾಸಕರ ನಕಲಿ ಸಹಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮೇ 28 ರಂದು ಕೋಲ್ಕತ್ತಾ ಪೊಲೀಸರು ದಾಖಲಿಸಿದ್ದ ಈ ಪ್ರಕರಣವನ್ನು ನಂತರ ಸಿಐಡಿಗೆ ವರ್ಗಾಯಿಸಲಾಗಿತ್ತು. ಇಷ್ಟೇ ಅಲ್ಲದೆ, ಬಂಗಾಳದಲ್ಲಿ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಜೂನ್ 15 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವೂ (ಇಡಿ) ಅಭಿಷೇಕ್ ಬ್ಯಾನರ್ಜಿಗೆ ನೋಟಿಸ್ ನೀಡಿದೆ.

ಬಿಜೆಪಿ ಆಡಳಿತದ ಭಯ, ಪಡೆದ ಲಂಚ ಜನರಿಗೆ ವಾಪಸ್

ಕಳೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸುವೇಂದು ನೇತೃತ್ವದ ಬಿಜೆಪಿ ಅಧಿಕಾರಕ್ಕೇರುತ್ತಿದ್ದಂತೆ ಟಿಎಂಸಿ ನಾಯಕರ ಭಯ ಶುರುವಾಗಿದೆ. ಬಿಜೆಪಿ ಬೆಂಬಲಿಗರಿಗೆ ಧೈರ್ಯ ಬಂದಿದ್ದು, ನೇರ ಟಿಎಂಸಿ ನಾಯಕರ ಮನೆಗಳಿಗೆ ನುಗ್ಗಿ ಕಮಿಷನ್ ಪಡೆದ ಹಣ ವಾಪಸ್ ಕೊಡುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಕಳೆದೆರಡು ದಿನಗಳಿಂದ ಟಿಎಂಸಿ ನಾಯಕರ ಜನರಿಗೆ ಹಣ ಕೊಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಸ್ಮರಿಸಬಹುದು.