ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿಗಳ ಕಚೇರಿಯನ್ನು (ಪಿಎಂಒ) 'ಸೇವಾ ತೀರ್ಥ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಹೊಸ ಕಟ್ಟಡಕ್ಕೆ ಈ ಹೆಸರು ಅನ್ವಯವಾಗಲಿದ್ದು, ಅಧಿಕಾರದಿಂದ ಸೇವೆಯೆಡೆಗಿನ ಬದಲಾವಣೆಯನ್ನು ಇದು ಸಂಕೇತಿಸುತ್ತದೆ.
ಪಿಟಿಐ ನವದೆಹಲಿ (ಡಿ.3): ಇತ್ತೀಚೆಗಷ್ಟೇ ರಾಜ್ಯಪಾಲರ ನಿವಾಸವಾದ ‘ರಾಜಭವನ’ವನ್ನು ‘ಲೋಕಭವನ’ವಾಗಿ ಮರುನಾಮಕರಣ ಮಾಡುವಂತೆ ಆದೇಶಿಸಿದ್ದ ಕೇಂದ್ರ ಸರ್ಕಾರ, ಇದೀಗ ಪ್ರಧಾನ ಮಂತ್ರಿಗಳ ಕಚೇರಿಯನ್ನು (ಪಿಎಂಒ) ‘ಸೇವಾ ತೀರ್ಥ’ ಎಂದು ಹೆಸರಿಸಲು ನಿರ್ಧರಿಸಿದೆ. ಇದುವರೆಗೆ ಪಿಎಂಒವನ್ನು ‘ಎಕ್ಸಿಕ್ಯುಟಿವ್ ಎನ್ಕ್ಲೇವ್’ ಎಂದು ಕರೆಯಲಾಗುತ್ತಿತ್ತು.
ಪಿಎಂ ಕಚೇರಿ ಸೇವಾ ತೀರ್ಥ ಎಂದು ಮರುನಾಮಕರಣ
ಸೆಂಟ್ರಲ್ ವಿಸ್ತಾ ಪುನರಭಿವೃದ್ಧಿ ಯೋಜನೆಯ ಅಡಿಯಲ್ಲಿ ಹೊಸ ಕಟ್ಟಡ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಪಿಎಂಒ, ಸಂಪುಟ ಸಚಿವಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಭಾರತ ಸದನದ ಕಚೇರಿಗಳನ್ನು ಇದೇ ಸಂಕೀರ್ಣಕ್ಕೆ ವರ್ಗಾಯಿಸಲಾಗುತ್ತಿದೆ. ಇವು ಸರ್ಕಾರದ ಮಹತ್ವದ ಕಾರ್ಯಸ್ಥಳಗಳಾಗಿರುವುದರಿಂದ ಜನತೆಯನ್ನೇ ಕೇಂದ್ರವಾಗಿಸಿಕೊಂಡು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ.
‘ಸತ್ತೆಯಿಂದ (ಅಧಿಕಾರ) ಸೇವೆಯೆಡೆಗೆ, ಆಡಳಿತದಿಂದ ಜವಾಬ್ದಾರಿಯೆಡೆಗೆ ಮುನ್ನಡೆಯುವುದು ಸರ್ಕಾರದ ಉದ್ದೇಶ. ಹಾಗಾಗಿ ಆಡಳಿತಾತ್ಮಕವಾಗಿ ಮಾತ್ರವಲ್ಲದೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಿಎಂಒಗೆ ಸೇವಾ ತೀರ್ಥವೆಂದು ಹೆಸರು ಬದಲಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಸರು ಬದಲಾವಣೆ ಪರ್ವ
- ಈ ಮೊದಲು ರಾಜಪಥವನ್ನು ಕರ್ತವ್ಯಪಥ ಬದಲಾಯಿಸಿದ್ದ ಸರ್ಕಾರ
- ಇತ್ತೀಚೆಗೆ ರಾಜ್ಯಪಾಲರ ಕಚೇರಿ ಹೆಸರು ಲೋಕಭವನ ಎಂದು ಬದಲು
- ಅದರ ಬೆನ್ನಲ್ಲೇ ಇದೀಗ ಪ್ರಧಾನಿ ಕಚೇರಿ ಹೆಸರು ಬದಲಾವಣೆ ನಿರ್ಧಾರ
- ಹೊಸದಾಗಿ ನಿರ್ಮಾಣವಾಗುತ್ತಿರುವ ಪಿಎಂಒ ಕಟ್ಟಡಕ್ಕೆ ಈ ಹೊಸ ಹೆಸರು
- ಎಕ್ಸಿಕ್ಯುಟಿವ್ ಎನ್ಕ್ಲೇವ್ ಬದಲಾಗಿ ಇನ್ನು ಸೇವಾ ತೀರ್ಥ ಎಂದು ಬದಲು
- ಆಡಳಿತ ಜತೆ ಸಂಸ್ಕೃತಿ, ಮೌಲ್ಯ ಗಮನದಲ್ಲಿಟ್ಟುಕೊಂಡು ಬದಲಾವಣೆ
- ಈ ಹಿಂದೆ ರಾಜಪಥವನ್ನು ಕರ್ತವ್ಯಪಥ ಎಂದು, ಕೇಂದ್ರ ಸಚಿವಾಲಯವನ್ನು ಕರ್ತವ್ಯ ಭವನ ಎಂದು ಹೆಸರಿಸಲಾಗಿತ್ತು.


