ಮಹಾರಾಷ್ಟ್ರ ಮೂಲದ 19 ವರ್ಷದ ಯುವ ವೇದ ಪಂಡಿತ ದೇವವ್ರತ ರೇಖೆ, ವಾರಾಣಸಿಯಲ್ಲಿ ಅತ್ಯಂತ ಕಠಿಣವಾದ ಶುಕ್ಲ ಯಜುರ್ವೇದದ ದಂಡಕ್ರಮ ಪಾರಾಯಣ 50 ದಿನಗಳಲ್ಲಿ ದೋಷರಹಿತವಾಗಿ ಪೂರ್ಣಗೊಳಿಸಿದ್ದಾರೆ. 200 ವರ್ಷಗಳ ನಂತರ ನಡೆದ ಈ ಐತಿಹಾಸಿಕ ಸಾಧನೆ ಶೃಂಗೇರಿ ಮಠ ಸಹಕಾರ, ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ವಾರಾಣಸಿ (ಡಿ.3): ಅತ್ಯಂತ ಕಠಿಣ ಎಂದು ಹೇಳಲಾಗುವ, ಶುಕ್ಲ ಯಜುರ್ವೇದದ ಮಧ್ಯಮಂಡಿನಿ ಶಾಖೆಯ 2000 ಮಂತ್ರಗಳ ದಂಡಕ್ರಮ ಪಾರಾಯಣ ಪಠಣವನ್ನು 50 ದಿನಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಮಹಾರಾಷ್ಟ್ರ ಮೂಲದ ಯುವ ವೇದ ಪಂಡಿತ ವೇದಮೂರ್ತಿ ದೇವವ್ರತ ರೇಖೆ ಪೂರ್ಣಗೊಳಿಸಿದ್ದಾರೆ.

ಶೃಂಗೇರಿ ಮಠ ಸಾಥ್‌

19 ವರ್ಷದ ರೇಖೆ, ವಾರಾಣಸಿಯಲ್ಲಿ ದೇವವ್ರತ ಅವರು, ವೇದ ಶ್ಲೋಕಗಳು ಮತ್ತು ಪವಿತ್ರ ಶ್ಲೋಕಗಳನ್ನು ಒಂದೇ ಒಂದು ತಪ್ಪಿಲ್ಲದೆ ಪಠಿಸಿದ್ದಾರೆ. ಈ ರೀತಿಯ ಯಶಸ್ವಿ ದಂಡಕ್ರಮ ಪಾರಾಯಣ ಪಠಣ ಇತಿಹಾಸದಲ್ಲೇ 3ನೇ ಸಲ. ಅಲ್ಲದೆ, 200 ವರ್ಷ ಬಳಿಕ ಈ ಸಾಧನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅವರ ಈ ಪ್ರಯತ್ನಕ್ಕೆ ಶೃಂಗೇರಿ ಮಠ ಸಹಕಾರ ನೀಡಿದೆ.

ಮೋದಿ ಅಭಿನಂದನೆ:

ಇದನ್ನು ವಾರಾಣಸಿ ಸಂಸದರೂ ಆಗಿರುವ ನರೇಂದ್ರ ಮೋದಿ ಶ್ಲಾಘಿಸಿದ್ದು, ‘ದೇವವ್ರತ ಮಹೇಶ್ ರೇಖೆ ಅವರನ್ನು ಮುಂದಿನ ಪೀಳಿಗೆಯವರು ಸ್ಮರಿಸುತ್ತಾರೆ. ಒಂದೇ ಒಂದು ತಪ್ಪಿಲ್ಲದೆ ಅವರು ಮಂತ್ರ ಪಠಿಸಿದ್ದಾರೆ. ಅವರು ನಮ್ಮ ಗುರು ಸಂಪ್ರದಾಯದ ಅತ್ಯುತ್ತಮ ಉದಾಹರಣೆ. ಕಾಶಿಯ ಸಂಸದನಾಗಿ, ಈ ಪವಿತ್ರ ನಗರದಲ್ಲಿ ಈ ಅಸಾಧಾರಣ ಸಾಧನೆ ನಡೆದಿರುವುದಕ್ಕೆ ನನಗೆ ಸಂತೋಷವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.