ನಾಸಿಕ್ನ ಟಿಸಿಎಸ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಿಗಳ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆ ಹಲವು ಸ್ಫೋಟಕ ವಿಚಾರಗಳನ್ನು ಬಯಲು ಮಾಡಿದೆ. ನಿದಾ ಖಾನ್, ಸಂತ್ರಸ್ತೆಯಮತಾಂತರಕ್ಕೆ ಯತ್ನಿಸಿ, ಮಲೇಷ್ಯಾಕ್ಕೆ ಕಳುಹಿಸಲು ಸಂಚು ರೂಪಿಸಿದ್ದಳು.
ಉದ್ಯೋಗಿ ಹೆಸರು ಬದಲಿಸಿ ಮಲೇಷ್ಯಾಕ್ಕೆ ಕಳುಹಿಸಲು ಸಂಚು ರೂಪಿಸಿದ್ದ ನಿದಾ ಖಾನ್
ಮುಂಬೈ: ದೇಶವನ್ನೇ ಬೆಚ್ಚಿ ಬೀಳಿಸಿದ ಐಟಿ ಸಂಸ್ಥೆ ಟಿಸಿಎಸ್ನ ನಾಸಿಕ್ ಬ್ರಾಂಚ್ನಲ್ಲಿ ನಡೆದ ಉದ್ಯೋಗಿಗಳ ಮತಾಂತರ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಬಯಲಿಗೆಳೆದಿದ್ದಾರೆ. ಇದರಲ್ಲಿ ಆರೋಪಿಯಾಗಿರುವ ಪ್ರಸ್ತುತ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿರುವ ನಿದಾ ಖಾನ್ ಸಂತ್ರಸ್ತ ಉದ್ಯೋಗಿಯೊಬ್ಬಳನ್ನು ಮತಾಂತರಕ್ಕೆ ಯತ್ನಿಸಿದ್ದಲ್ಲದೇ ಆಕೆಯ ಹೆಸರನ್ನು ಕೂಡ ಬದಲಿಸಲು ಮುಂದಾಗಿದ್ದಳು ಎಂದು ತಿಳಿದು ಬಂದಿದೆ. ಜೊತೆಗೆ ಉದ್ಯೋಗವಕಾಶದ ಹೆಸರಿನಲ್ಲಿ ಆಕೆಯನ್ನು ಮಲೇಷ್ಯಾಕ್ಕೆ ಕಳುಹಿಸಲು ಮುಂದಾಗಿದ್ದಲ್ಲದೇ ಇಮ್ರಾನ್ ಎಂಬಾತನಿಗಾಗಿ ಕೆಲಸ ಮಾಡುವುದಕ್ಕೆ ಕೇಳಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ನಿದಾ ಖಾನ್ ಟಿಸಿಎಸ್ನಲ್ಲಿ ಪ್ರೊಸೆಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆಯ ವಿರುದ್ಧ ಉದ್ಯೋಗಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದ ಜೊತೆಗೆ ಮತಾಂತರಕ್ಕೆ ಒತ್ತಾಯಿಸಿದ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಈಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯೂ ಕೇಸ್ ದಾಖಲಾಗಿದೆ.
ಸಂತ್ರಸ್ತರಿಗೆ ಬುರ್ಖಾ ಹಾಗೂ ಇಸ್ಲಾಮಿಕ್ ಪುಸ್ತಕಗಳು
ಸಂತ್ರಸ್ತೆಯನ್ನು ಇಸ್ಲಾಂಗೆ ಮತಾಂತರ ಮಾಡುವ ಉದ್ದೇಶದಿಂದ ನಿದಾ ಖಾನ್ ಸಂತ್ರಸ್ತೆಗೆ ಇಸ್ಲಾಮಿಕ್ ಪುಸ್ತಕಗಳನ್ನು ಹಾಗೂ ಕೆಲವು ಬುರ್ಖಾಗಳನ್ನು ನೀಡಿದ್ದಳು. ಅಂತಹ ವಸ್ತುಗಳನ್ನು ನಂತರ ವಿಚಾರಣೆ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ಪುಸ್ತಕಗಳನ್ನು ಹಾಗೂ ಬುರ್ಖಾಗಳನ್ನು ಯಾವ ಮೂಲದಿಂದ ತಂದಿದ್ದಾಳೆ ಎಂಬ ಬಗ್ಗೆ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಬರೀ ಇಷ್ಟೇ ಅಲ್ಲದೇ ನಿದಾ ಖಾನ್ ಸಂತ್ರಸ್ತೆಯ ಮೊಬೈಲ್ ಫೋನ್ನಲ್ಲಿ ಇಸ್ಲಾಮಿಕ್ ಅಪ್ಲಿಕೇಷನ್ ಒಂದನ್ನು ಇನ್ಸ್ಟಾಲ್ ಮಾಡಿದ್ದಳು. ಹಾಗೂ ಆಕೆಯ ಮೇಲೆ ಇಸ್ಲಾಂ ಧರ್ಮದ ಪ್ರಭಾವ ಬೀರುವ ಉದ್ದೇಶದಿಂದ ಆಕೆಗೆ ದಿನವೂ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದ ಯುಟ್ಯೂಬ್ ಹಾಗೂ ಇನಸ್ಟಾಗ್ರಾಮ್ ವೀಡಿಯೋಗಳ ಲಿಂಕ್ಗಳನ್ನು ಕಳುಹಿಸುತ್ತಿದ್ದಳು. ಸಂತ್ರಸ್ತೆಯ ಶಿಕ್ಷಣದ ದಾಖಲೆಯನ್ನು ಒತ್ತಾಯಪೂರ್ವಕವಾಗಿ ಕಸಿದುಕೊಂಡಿದ್ದ ನಿದಾ ಖಾನ್ ಆಕೆಯ ಹೆಸರನ್ನು ಹನಿಯಾ ಎಂದು ಬದಲಿಸುವಂತೆ ಒತ್ತಾಯಿಸಿದ್ದಳು. ಈ ಪ್ರಕ್ರಿಯೆಯನ್ನು ಮುಂದುವರೆಸುವುದಕ್ಕೆ ಆಕೆ ಮುಂಬೈನ ಮಲೆಗಾಂವ್ ಸಮೀಪದ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಂಧನಕ್ಕೆ ತಡೆ ಕೋರಿದ್ದ ನಿದಾ ಖಾನ್
ಕಳೆದ ವಾರ ನಿದಾ ಖಾನ್ ತಾನು ಗರ್ಭಿಣಿ ಹೀಗಾಗಿ ತನ್ನ ಬಂಧನಕ್ಕೆ ತಡೆ ಕೋರಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಕೋರ್ಟ್ ಆಕೆಯ ಮನವಿಯನ್ನು ತಿರಸ್ಕರಿಸಿದೆ. ಘಟನೆ ಬೆಳಕಿಗೆ ಬಂದಾಗಿನಿಂದಲೂ ನಿದಾ ಖಾನ್ ಪರಾರಿಯಾಗಿದ್ದು ಪೊಲೀಸರ ಕೈಗೆ ಸಿಕ್ಕಿಲ್ಲ. ಪೊಲೀಸ್ ಮೂಲಗಳ ಪ್ರಕಾರ ಆಕೆಯ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡುವುದು ಪ್ರಕರಣದಲ್ಲಿ ಮಹತ್ವದ್ದಾಗಿದೆ. ಏಕೆಂದರೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಡಿಜಿಟಲ್ ಸಾಕ್ಷ್ಯಗಳು ಅದರಲ್ಲಿ ಇರಬಹುದು. ಹಾಗೂ ಈ ರೀತಿ ಮಾಡುವುದಕ್ಕೆ ಆಕೆಗೆ ಯಾರಾದರೂ ಹಣ ನೀಡುತ್ತಿದ್ದರೆ ಹಾಗೂ ಯಾರು ಆಕೆಗೆ ಆಶ್ರಯ ನೀಡುತ್ತಿದ್ದರು ಎಂಬುದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇದು ಅಗತ್ಯವಾಗಿದೆ.
ಇದನ್ನೂ ಓದಿ: ಧಾರವಾಡ: ಗಾಂಜಾ ಕೇಸ್ಲ್ಲಿ ನೆಗೆಟಿವ್ ಬಂದರೂ ಪೊಲೀಸರಿಂದ ವಸೂಲಿ, ಬೆದರಿಕೆ: ಮರ್ಯಾದೆಗಂಜಿ ವಿದ್ಯಾರ್ಥಿ ಸಾವಿಗೆ ಶರಣು
ನಿದಾ ಖಾನ್ ಸೋದರ ಡ್ಯಾನಿಶ್ ಶೇಖ್ ಕೂಡ ಈ ಪ್ರಕರಣದಲ್ಲಿ ಬಂಧಿತನಾಗಿರುವ 7 ಜನ ಶಂಕಿತರಲ್ಲಿ ಒಬ್ಬನಾಗಿದ್ದು, ಈತನ ವಿರುದ್ಧ ಸಂತ್ರಸ್ತೆಗೆ ಮದುವೆಯಾಗುವ ಭರವಸೆ ನೀಡಿ ಲೈಂಗಿಕವಾಗಿ ದೌರ್ಜನ್ಯವೆಸಗಿದ ಆರೋಪವಿದೆ. ಈ ಕೃತ್ಯವೆಸಗುವ ವೇಳೆ ಈ ಡ್ಯಾನಿಶ್ ಶೇಖ್ಗೆ ಆಗಲೇ ಮದುವೆಯಾಗಿತ್ತು. ಈ ವಿಚಾರ ಸಂತ್ರಸ್ತೆಗೆ ಗೊತ್ತಾದಾಗ ಆಕೆಗೆ ನಿದಾ ಖಾನ್ ಮಲೇಷಿಯಾದ ಆಸೆ ತೋರಿಸಿದ್ದಳು.
ಹಾಗೆಯೇ ಮತ್ತೊಬ್ಬರ ಆರೋಪಿ ತೌಸಿಫ್ ಬಿಲಾಲ್ ಅತ್ತರ್ ವಿರುದ್ಧವೂ ಸಂತ್ರಸ್ತೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬೆದರಿಕೆಯೊಡ್ಡಿದ ಆರೋಪವಿದೆ. ಸಂತ್ರಸ್ತೆಯರನ್ನು ಲೈಂಗಿಕತೆಗೆ ಒತ್ತಾಯಿಸಿ ಬಳಿಕ ಅವರ ಕುಟುಂಬದವರ ವೈಯಕ್ತಿಕ ವಿಚಾರವನ್ನು ಬಹಿರಂಗಪಡಿಸುವುದಾಗಿ ಆರೋಪಿ ಬೆದರಿಸಿದ್ದ.
ಇದನ್ನೂ ಓದಿ: ಮೃತ ಅಕ್ಕನ ಖಾತೆಯಲ್ಲಿದ್ದ ಹಣ ಬಿಡಿಸಲು ಆಕೆಯ ಅಸ್ಥಿಪಂಜರವನ್ನೇ ಬ್ಯಾಂಕ್ಗೆ ಹೊತ್ತು ತಂದ ತಮ್ಮ
ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಹಿಳೆಯರು ಹಾಗೂ ಓರ್ವ ಪುರುಷ ದೂರು ನೀಡುವುದಕ್ಕೆ ಮುಂದೆ ಬಂದಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು 8 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಿಂದ ದೌರ್ಜನ್ಯಕ್ಕೊಳಗಾದ ಮತ್ತಷ್ಟು ಸಂತ್ರಸ್ತರು ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ನಿದಾ ಖಾನ್ ಎಸ್ಕೇಪ್ ಆಗಿದ್ದಾರೆ. ಉಳಿದ 7 ಜನರ ಬಂಧನವಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಆರೋಪಿಗಳನ್ನು ಟಿಸಿಎಸ್ ಕೆಲಸದಿಂವ ವಜಾ ಮಾಡಿದೆ.


