100 ಮಹಿಳೆಯರ ಜೊತೆ ಗುರೂಜಿ ರಾಸಲೀಲೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಪತ್ನಿ ಕಲ್ಪನಾ ನಾಪತ್ತೆ, ಸ್ವಯಂ ಘೋಷಿತ ದೇವಮಾನವ ಅರೆಸ್ಟ್ ಆದ ಬೆನ್ನಲ್ಲೇ ಸಚಿವರಿಗೆ ಕರೆ ಮಾಡಿ ಬಿಡಿಸುವ ಪ್ರಯತ್ನ ಮಾಡಿದ್ದ ಪತ್ನಿ ಈಗ ತಲೆಮರೆಸಿಕೊಂಡಿದ್ದಾರೆ.

ನಾಸಿಕ್ (ಏ.02) ಸ್ವಯಂ ಘೋಷಿತ ದೇವಮಾನವ ನಾಸಿಕ್‌ನ ಅಶೋಕ್ ಖಾರಟ್ ಪ್ರಕರಣದ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಹೊರಬಂದಿದೆ. ಅಶೋಕ್ ಖಾರಟ್ ಅರೆಸ್ಟ್ ಬಳಿಕ ಈತನಿಂದ ವಶಪಡಿಸಿಕೊಂಡ ಹಾರ್ಡ್ ಡಿಸ್ಕ್, ಪೆನ್‌ಡ್ರೈವ್‌ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರನ್ನು ಈತ ಆಧ್ಯಾತ್ಮ, ಪೂಜೆ ಹೆಸರಿನಲ್ಲಿ ಬಳಸಿಕೊಂಡಿರುವುದು ಪತ್ತೆಯಾಗಿತ್ತು. ಆದರೆ ತನಿಖೆ ವೇಳೆ ಈ ಸಂಖ್ಯೆ 100ಕ್ಕೂ ಹೆಚ್ಚಾಗಿತ್ತು. ಗಂಡನ ಹೊರಗೆ ಕೂರಿಸಿ ಕಚೇರಿಯಲ್ಲೇ ಮಹಿಳೆಯ ಮೇಲೆ ಈ ಕಳ್ಳ ಗುರೂಜಿ ಪೂಜೆ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿದ್ದ. ಇದೀಗ ಅಶೋಕ್ ಖಾರಟ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಅಶೋಕ್ ಖಾರಟ್ ಪತ್ನಿ ಕಲ್ಪಾನ ತಲೆಮರೆಸಿಕೊಂಡಿದ್ದಾಳೆ.

ಕಲ್ಪನಾ ಅಲಿಯಾಸ್ ಸುನೀತಾ ಮಿಸ್ಸಿಂಗ್

ಸುನೀತಾ ಎಂದು ಗುರುತಿಸಿಕೊಂಡಿದ್ದ ಈಕೆ ಅಶೋಕ್ ಖಾರಟ್ ಮದುವೆಯಾದ ಬಳಿಕ ಕಲ್ಪನಾ ಆಗಿ ಹೆಸರು ಬದಲಾಯಿಸಿದ್ದಳು. ಅಶೋಕ್ ಖಾರಟ್ ಅಕ್ರಮಗಳಿಗೆ ಈಕೆಯೂ ಸಾಥ್ ನೀಡಿದ್ದಳು ಎಂಬ ಮಾತುಗಳಿವೆ. ಅಶೋಕ್ ಖಾರಟ್ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ ಪ್ರಾಥಮಿಕ ಸಾಕ್ಷ್ಯಗಳನ್ನು ಕಲೆ ಹಾಕಿದ್ದರು. ಬಳಿಕ ಅಶೋಕ್ ಖಾರಟ್ ಅರೆಸ್ಟ್ ಮಾಡಿದ್ದರು. ಅಶೋಕ್ ಖಾರಟ್ ಅರೆಸ್ಟ್ ಆಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಪತ್ನಿ ಕಲ್ಪನಾ ಅಶೋಕ್ ಖಾರಟ್ ನೇರವಾಗಿ ಸಚಿವರಿಗೆ ಕರೆ ಮಾಡಿ ಗಂಡನ ಬಿಡಿಸಲು ಪ್ರಯತ್ನ ಮಾಡಿದ್ದಳು. ಆದರೆ ಪ್ರಕರಣ ಗಂಭೀರವಾಗಿದ್ದ ಕಾರಣ ಸಚಿವ ಏನೂ ಮಾಡಲು ಸಾಧ್ಯವಾಗಲಿಲ್ಲ.

ಅಶೋಕ್ ಖಾರಟ್ ಅರೆಸ್ಟ್ ಆದ ಬೆನ್ನಲ್ಲೇ ಪತ್ನಿ ಕಲ್ಪನಾ ಖಾರಟ್ ಪ್ರಕರಣದ ಗಂಭೀರತೆ ಅರಿತಿದ್ದರು. ಹೀಗಾಗಿ ಸಚಿವರಿಗೆ ಫೋನ್ ಮಾಡಿದ ಬೆನ್ನಲ್ಲೇ ಫೋನ್ ಸ್ವಿಚ್ ಆಫ್ ಮಾಡಿದ್ದರು. ಬಳಿಕ ಸಿಮ್ ಕಾರ್ಡ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾಳೆ. ಇಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಈಕೆ ತಲೆಮರೆಸಿಕೊಂಡಿದ್ದಾರೆ. ಪೊಲೀಸರ ತನಿಖೆ ಕುಟುಂಬಸ್ಥರು, ಅಶೋಕ್ ಖಾರಟ್ ಆಸ್ತಿ ಮೇಲೆ ತಿರುಗುವ ಮೊದಲೇ ಇದನ್ನು ಕಲ್ಪನಾ ಅರಿತಿದ್ದರು. ಹೀಗಾಗಿ ಗಂಡನ ಬಿಡಿಸುವ ಪ್ರಯತ್ನ ವಿಫಲವಾದ ಬೆನ್ನಲ್ಲೇ ಕಲ್ಪನಾ ಖಾರಟ್ ನಾಪತ್ತೆಯಾಗಿದ್ದಾಳೆ.

4 ಕೋಟಿ ಭೂಮಿ ಪ್ರಕರಣದಲ್ಲಿ ಕಲ್ಪನಾ ಪ್ರಮುಖ ಆರೋಪಿ

ಅಶೋಕ್ ಖಾರಟ್ ಹಾಗೂ ಪತ್ನಿ ಕಲ್ಪನಾ ವಂಚನೆ ಮಾಡಿ 4 ಏಕರೆ ಭೂಮಿ ಖರೀದಿಸಿದ್ದರು. ಈ ಪ್ರಕರಣದಲ್ಲಿ 4 ಕೋಟಿ ರೂಪಾಯಿ ವಂಚನೆ ನಡೆದಿದೆ. ಕಲ್ಪನಾ ಹೆಸರಿಗೆ ಈ ಭೂಮಿ ರಿಜಿಸ್ಟ್ರೇಶನ್ ಮಾಡಲಾಗಿದೆ. ಈ ಪ್ರಕರಣದ ತನಿಖೆಯೂ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕಲ್ಪನಾ ಹಾಗೂ ಅಶೋಕ್ ಖಾರತ್ ಆಪ್ತರಾದ ಅರವಿಂದ್ ಬವಾಕೆ ಹಾಗೂ ಕಿರಣ್ ಸೋನಾವೆ ಅರೆಸ್ಟ್ ಆಗಿದ್ದಾರೆ.

ಲ್ಯಾಂಡ್ ಕೇಸ್ ಹಾಗೂ ಅಶೋಕ್ ಖಾರಟ್ ಮಹಿಳೆಯರನ್ನು ಬಳಸಿಕೊಂಡ ಪ್ರಕರಣದಲ್ಲಿ ಕಲ್ಪನಾ ವಿಚಾರಣೆ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಪೋಲೀಸ್ ಕಸ್ಟಡಿಯಲ್ಲಿರುವ ಅಶೋಕ್ ಖಾರಟ್ ಯಾವ ಪ್ರಶ್ನೆಗೂ ಉತ್ತರ ನೀಡುತ್ತಿಲ್ಲ. ತನ್ನ ಅಧಿಕಾರ ಪ್ರಭಾವ ಬಳಸಿ ಹೊರಬರುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅಶೋಕ್ ಖಾರಟ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳು ಪ್ರಬಲವಾಗಿದೆ.