-ಮೇ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ-ಏ.29ರಂದು ಜಾಮೀನು ಅರ್ಜಿ ವಿಚಾರಣೆ- ಜೈಲಿನಲ್ಲೇ 101 ಬಾರಿ ಚಾಲೀಸಾ ಪಠಣ

ಮುಂಬೈ(ಏ.25): ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮನೆ ಎದುರು ಹನುಮಾನ್‌ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಪಕ್ಷೇತರ ಸಂಸದೆ ನವನೀತ್‌ ರಾಣಾ ಹಾಗೂ ಅವರ ಪತಿ, ಪಕ್ಷೇತರ ಶಾಸಕ ರವಿ ರಾಣಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

Add Asianetnews Kannada as a Preferred SourcegooglePreferred

ಈ ನಡುವೆ, ವಿಚಾರಣೆ ಉದ್ದೇಶಕ್ಕೆ ತಮ್ಮ ವಶಕ್ಕೆ ದಂಪತಿಯನ್ನು ನೀಡಿ ಎಂಬ ಪೊಲೀಸರ ಕೋರಿಕೆಯನ್ನು ಮುಂಬೈ ಕೋರ್ಚ್‌ ತಿರಸ್ಕರಿಸಿದೆ ಹಾಗೂ ಮೇ 6ರವರೆಗೆ ದಂಪತಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಜಾಮೀನು ಅರ್ಜಿಯನ್ನು ಏ.29ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ದಂಪತಿ ವಿವಾದಾತ್ಮಕ ಹೇಳಿಕೆ ನೀಡಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆಯನ್ನು ಹುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಅಲ್ಲದೇ ರಾಜ್ಯದ ಆಡಳಿತ ವ್ಯವಸ್ಥೆಗೆ ಸವಾಲು ಹಾಕಿದ್ದಾರೆ ಎಂಬ ಆರೋಪದಡಿಯಲ್ಲಿ ಶನಿವಾರ ಬಂಧಿಸಲಾಗಿತ್ತು.

Hanuman Chalisa Row ಹನುಮಾನ್‌ ಚಾಲೀಸಾ ಜಪಿಸುವೆ ಎಂದ ಸಂಸದೆ, ಶಾಸಕ ಅರೆಸ್ಟ್‌!

ಜೈಲಿನಲ್ಲೇ 101 ಬಾರಿ ಚಾಲೀಸಾ!:
ಶನಿವಾರ ಸಾಂಟಾ ಕ್ರೂಸ್‌ ಜೈಲಿನಲ್ಲಿದ್ದ ರಾಣಾ ದಂಪತಿ, ‘ಉದ್ಧವ್‌ ಠಾಕ್ರೆಯ ಒತ್ತಡದಿಂದಾಗಿ ಸುಳ್ಳು ಪ್ರಕರಣದಲ್ಲಿ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ. ನಾವು ಜೈಲಿನಲ್ಲಿಯೂ 101 ಬಾರಿ ಹನುಮಾನ್‌ ಚಾಲೀಸಾ ಜಪಿಸಿದ್ದೇವೆ’ ಎಂದು ಮರಾಠಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ನಾಯಕನ ಮೇಲೆ ಶಿವಸೈನಿಕರ ದಾಳಿ:
ಈ ನಡುವೆ ರಾಣಾ ದಂಪತಿಯನ್ನು ಜೈಲಿನಲ್ಲಿ ಭೇಟಿ ಮಾಡಲು ಹೋಗಿದ್ದ ಮಾಜಿ ಸಂಸದ ಕಿರೀಟ್‌ ಸೋಮಯ್ಯ ಅವರ ವಾಹನದ ಮೇಲೆ ಶಿವಸೇನೆಯ ಕಾರ್ಯಕರ್ತರು ಚಪ್ಪಲಿ ಹಾಗೂ ನೀರಿನ ಬಾಟಲಿಯನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ‘ಝಡ್‌’ ಶ್ರೇಣಿಯ ಭದ್ರತೆ ಪಡೆದಿದ್ದ ಸೋಮಯ್ಯರನ್ನು ಶಿವಸೇನಾ ಕಾರ್ಯಕರ್ತರ ದಾಳಿಯಿಂದ ರಕ್ಷಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಆಗಬೇಕು ಎಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಕಿಡಿಕಾರಿದ್ದಾರೆ.

ಮಹಾ ಸರ್ಕಾರ ಪ್ರಶ್ನಿಸಿದ ನವನೀತ್ ರಾಣಾಗೆ ಶಿವಸೇನಾ ಸಂಸದನ ಧಮ್ಕಿ; ರಕ್ಷಣೆ ಕೋರಿ ಪತ್ರ!

ಹನುಮಾನ್‌ ಚಾಲೀಸಾ ಜಪಿಸುವೆ ಎಂದ ಸಂಸದೆ, ಶಾಸಕ ಅರೆಸ್ಟ್‌!
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಮನೆ ಮುಂದೆ ಹನುಮಾನ್‌ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಬಿಜೆಪಿ ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ, ಶಾಸಕ ನವನೀತ್‌ ಅವರನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ.

ಸಿಎಂ ನಿವಾಸ ಮಾತ್ರೋಶ್ರೀ ಎದುರು ಭಾನುವಾರ ಹನುಮಾನ್‌ ಚಾಲೀಸಾ ಪಠಿಸುವುದಾಗಿ ದಂಪತಿ ಹೇಳಿದ್ದ ಹಿನ್ನೆಲೆಯಲ್ಲಿ, ಶಿವಸೇನೆ ಕಾರ್ಯಕರ್ತರು ಶನಿವಾರ ಭಾರೀ ಪ್ರಮಾಣದಲ್ಲಿ ದಂಪತಿ ನಿವಾಸದ ಎದುರು ಜಮಾಯಿಸಿದ್ದರು. ಹೇಳಿಕೆ ಹಿಂಪಡೆಯದೇ ಇದ್ದಲ್ಲಿ ಮನೆಗೆ ನುಗ್ಗುವ ಎಚ್ಚರಿಕೆ ನೀಡಿದ್ದರು. ಆದರೆ ಭಾನುವಾರ ಮುಂಬೈನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹನುಮಾನ್‌ ಚಾಲೀಸಾ ಪಠಣ ಕೈಬಿಟ್ಟಿದ್ದಾಗಿ ದಂಪತಿ ಹೇಳಿದ್ದರು. ಇದರ ಹೊರತಾಗಿಯೂ ಪೊಲೀಸರು, ದಂಪತಿ ಮನೆಗೆ ಆಗಮಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ‘ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಇಂಥ ಪ್ರಕರಣವನ್ನು ನಿಭಾಯಿಸುವ ರೀತಿಯೇ ಬಾಲಿಶವಾಗಿದೆ ಎಂದು ಕಿಡಿಕಾರಿದ್ದಾರೆ.