ಉಕ್ರೇನ್‌ ಯೋಧನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಪ್ಪ ಅಮ್ಮ ಐ ಲವ್‌ ಯೂ ಎಂದ ಯೋಧ ರಷ್ಯಾ ದಾಳಿಯಿಂದ ನಲುಗುತ್ತಿರುವ ಉಕ್ರೇನ್‌

ರಷ್ಯಾ ಆಕ್ರಮಣದಿಂದಾಗಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಭಾರಿ ಸಾವು ನೋವು ಉಂಟಾಗಿದೆ. ಸ್ಥಳೀಯ ನಿವಾಸಿಗಳು ಜೀವ ರಕ್ಷಣೆಗಾಗಿ ದೇಶ ಬಿಟ್ಟು ಓಡಿ ಹೋಗುತ್ತಿದ್ದರೆ, ಈ ಮಧ್ಯೆ ಉಕ್ರೇನ್‌ ಯೋಧನನೋರ್ವನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಸೈನಿಕ ಅಪ್ಪ ಅಮ್ಮ ಐ ಲವ್‌ ಯೂ ಎನ್ನುತ್ತಾನೆ. ನಿನ್ನೆ ಬೆಳಗ್ಗಿನಿಂದಲೂ ಉಕ್ರೇನ್‌ ಮೇಲೆ ಮೂರು ಕಡೆಯಿಂದಲೂ ರಷ್ಯಾ ಸೈನಿಕರು ದೊಡ್ಡ ಸಂಖ್ಯೆಯಲ್ಲಿ ದಾಳಿ ಮಾಡುತ್ತಿದ್ದಾರೆ.

ಪ್ರಸ್ತುತ ಉಕ್ರೇನ್‌ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಜೊತೆಗೆ ಸಾವು ನೋವುಗಳು ಹೆಚ್ಚಾಗುತ್ತಿದ್ದಂತೆ ಉಕ್ರೇನ್‌ ಸೈನಿಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅಪರಿಚಿತ ಯೋಧನೋರ್ವ ಆತನ ದೇಶದ ಮೇಲೆ ದಾಳಿ ನಡೆದಿದೆ ಎನ್ನುತ್ತಿದ್ದಾನೆ. ಈ ಸಂದರ್ಭದಲ್ಲಿ ಆತನಿಗೂ ಮುಂದೇನಾಗುವುದೋ ಎಂಬುದರ ಅರಿವಿಲ್ಲ. ಅಳವಾದ ಉಸಿರು ತೆಗೆದುಕೊಳ್ಳುವ ಆತ ಅಮ್ಮ ಅಪ್ಪ ಐ ಲವ್‌ಯೂ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳುತ್ತಾನೆ. 

Scroll to load tweet…

ರಷ್ಯಾದ (Russia) ಕ್ಷಿಪಣಿ ದಾಳಿಗೆ ಉಕ್ರೇನ್ (Ukraine ) ಜನತೆ ಬೆದರಿದ್ದು, ಮೆಟ್ರೋ ಸುರಂಗ , ರೈಲ್ವೆ ಸುರಂಗಗಳಲ್ಲಿ ಮಕ್ಕಳು , ಮಹಿಳೆಯರು ಸೇರಿದಂತೆ ನೂರಾರು ಮಂದಿ ಜನರು ಆಶ್ರಯ ಪಡೆಯುತ್ತಿದ್ದಾರೆ. ಇದೀಗ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಹೊಸ ಪ್ಲಾನ್ ಮಾಡಲಾಗಿದೆ. ಉಕ್ರೇನ್‌ನ 4 ಗಡಿಭಾಗದ ದೇಶಗಳ ಮೂಲಕ ಭಾರತೀಯರ ರಕ್ಷಣೆಗೆ ಯೋಜನೆ ಹಾಕಲಾಗಿದೆ. ಪೋಲ್ಯಾಂಡ್, ರೊಮಾನಿಯಾ, ಸ್ಲೊವಾಕಿಯಾ ಮತ್ತು ಹಂಗೇರಿ ಮೂಲಕ ಭಾರತೀಯರನ್ನು ಏರ್‌ ಲಿಪ್ಟ್ ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರ 4 ತಂಡಗಳನ್ನು ರಚಿಸಿದೆ.

Russia Ukraine War: ಯುದ್ಧ ಬಿಟ್ಟು ನಾನು ಓಡಿ ಹೋಗಲ್ಲ: ಉಕ್ರೇನ್ ಅಧ್ಯಕ್ಷ ಸ್ಪಷ್ಟನೆ

ಕನ್ನಡಿಗರೂ ಸೇರಿ ಉಕ್ರೇನ್‌ನಲ್ಲಿ ಒಟ್ಟು 18 ಸಾವಿರಕ್ಕೂ ಹೆಚ್ದು ಮಂದಿ ಭಾರತೀಯರು ಸಿಲುಕಿದ್ದಾರೆ ಎನ್ನಲಾಗಿದೆ. ಯುದ್ದಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ವಿದೇಶಾಂಗ ಸಚಿವ ಜೈ ಶಂಕರ್ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಬೆಂಗಳೂರಿನ 28 ಸೇರಿದಂತೆ ಕರ್ನಾಟಕದ ಒಟ್ಟು 91 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ.

Russia Ukraine War: ಸಬ್‌ವೇ ಆಶ್ರಯ ಪಡೆದ ನೂರಾರು ಮಹಿಳೆಯರು, ಮಕ್ಕಳು

ಇತ್ತ ರಷ್ಯಾ ಉಕ್ರೇನ್‌ ರಾಜಧಾನಿ ಕೀವ್‌ಗೆ ನುಗ್ಗಿದೆ. ಉಕ್ರೇನ್‌ ಅಧ್ಯಕ್ಷ ವೋಲೋಡಿಮಿರ್‌ ಝೆಲೆನ್ಸಿ ಓಡಿ ಹೋಗುತ್ತಿದ್ದರೆಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯುದ್ಧ ಬಿಟ್ಟು ನಾನು ಓಡಿ ಹೋಗಲ್ಲ, ನಾನು ಓಡಿ ಹೋಗುವೆನೆಂದು ವದಂತಿ ಹಬ್ಬಿದೆ. ನಾನು ಕೀವ್‌ನಲ್ಲೇ ಇದ್ದೇನೆ. ಈ ಯುದ್ಧದಲ್ಲಿ ನಾನೇ ಟಾರ್ಗೆಟ್. ನನ್ನನ್ನು ಕೊಂದು ಉಕ್ರೇನ್‌ನನ್ನು ರಾಜಕೀಯವಾಗಿ ಮುಗಿಸುವುದೇ ರಷ್ಯಾದ ಉದ್ದೇಶ ಎಂದು ಹೇಳಿದ್ದಾರೆ. ತನ್ನ ದೇಶದ ಮೇಲೆ ಬಲಾಢ್ಯ ರಷ್ಯಾ ಯುದ್ಧ ಸಾರಿದ ಕೆಲವೇ ತಾಸುಗಳಲ್ಲಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಉಕ್ರೇನ್‌ ಮನವಿ ಮಾಡಿತ್ತು.

ರಷ್ಯಾ ಜತೆ ಭಾರತಕ್ಕೆ ವಿಶೇಷ ಸಂಬಂಧ ಇದೆ. ಪರಿಸ್ಥಿತಿ ನಿಯಂತ್ರಿಸಲು ಭಾರತ ಮತ್ತಷ್ಟು ಸಕ್ರಿಯ ಪಾತ್ರವನ್ನು ನಿರ್ವಹಿಸಬಹುದು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಉಕ್ರೇನ್‌ ಅಧ್ಯಕ್ಷ ವೋಲೋಡಿಮಿರ್‌ ಝೆಲೆನ್ಸಿ ಅವರ ಜತೆ ಮಾತನಾಡಬೇಕು. ಬಿಕ್ಕಟ್ಟನ್ನು ಬಗೆಹರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಭಾರತದಲ್ಲಿನ ಉಕ್ರೇನ್‌ ರಾಯಭಾರಿ ಇಗೋರ್‌ ಪೊಲೀಖಾ ಅವರು ಮನವಿ ಮಾಡಿದ್ದರು.