ಮಿರ್ಜಾಪುರದ ಎಸ್‌ಪಿ ಅಪರ್ಣಾ ರಜತ್ ಕೌಶಿಕ್ ಅವರು ಯಶಸ್ವಿ ಕಾರ್ಯಾಚರಣೆಯ ಬಗ್ಗೆ ವಿಡಿಯೋ ಹಂಚಿಕೊಂಡಾಗ ಆನ್‌ಲೈನ್‌ನಲ್ಲಿ ತೀವ್ರ ಬಾಡಿ ಶೇಮಿಂಗ್‌ಗೆ ಒಳಗಾದರು. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಪೊಲೀಸ್ ಇಲಾಖೆ ಕಾಮೆಂಟ್ ವಿಭಾಗವನ್ನು ಆಫ್ ಮಾಡಿದ್ದು, ಇದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಟ-ನಟಿಯರು, ಕಾಲೇಜು ಯುವತಿಯರು, ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೆ ಕೆಟ್ಟ ಕಾಮೆಂಟ್‌ಗಳು ಬರುವುದು ಹೆಚ್ಚಾಗಿದೆ. ಇದೀಗ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ, ಅಪರಾಧಿಗಳಲ್ಲಿ ನಡುಕ ಹುಟ್ಟಿಸಬೇಕಾದ ಉನ್ನತ ಮಟ್ಟದ ಮಹಿಳಾ ಅಧಿಕಾರಿಯೊಬ್ಬರೇ ಈಗ ಆನ್‌ಲೈನ್ ಕಾಮುಕರ ಕೆಟ್ಟ ದೃಷ್ಟಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದ ಪೊಲೀಸ್ ವರಿಷ್ಠಾಧಿಕಾರಿ (SP) ಅಪರ್ಣಾ ರಜತ್ ಕೌಶಿಕ್ ಅವರಿಗೆ ಆನ್‌ಲೈನ್‌ನಲ್ಲಿ ತೀವ್ರವಾಗಿ ಬಾಡಿ ಶೇಮಿಂಗ್ ಮಾಡಲಾಗಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಘಟನೆಯಲ್ಲಿ ನಡೆದಿದ್ದೇನು?

ಬಹಳ ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಮಿರ್ಜಾಪುರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದರು. ಈ ಮಹತ್ವದ ಕಾರ್ಯಾಚರಣೆಯ ವಿವರಗಳನ್ನು ಎಸ್‌ಪಿ ಅಪರ್ಣಾ ರಜತ್ ಕೌಶಿಕ್ ಅವರು ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕರಿಗೆ ನೀಡಿದ್ದರು. ಆದರೆ, ಅಧಿಕಾರಿಯ ಕರ್ತವ್ಯ ನಿಷ್ಠೆಯನ್ನು ಮೆಚ್ಚುವ ಬದಲು, ಕಿಡಿಗೇಡಿಗಳು ಅವರ ದೈಹಿಕ ರೂಪದ ಬಗ್ಗೆ ಅಸಭ್ಯ ಕಾಮೆಂಟ್‌ಗಳನ್ನು ಮಾಡಲು ಶುರು ಮಾಡಿದರು. ಬಾಡಿ ಶೇಮಿಂಗ್ ಮಿತಿ ಮೀರಿದಾಗ ಸ್ವತಃ ಪೊಲೀಸ್ ಇಲಾಖೆಯೇ ದಾರಿ ಕಾಣದೆ ವಿಡಿಯೋದ ಕಾಮೆಂಟ್ ಬಾಕ್ಸ್ ಅನ್ನು ಬಂದ್ ಮಾಡಿದೆ.

ಪೊಲೀಸರ ನಡೆಗೆ ಸಾರ್ವಜನಿಕರ ಟೀಕೆ:

ಅಸಭ್ಯ ಕಾಮೆಂಟ್‌ಗಳು ಹೆಚ್ಚಾದ ತಕ್ಷಣ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ ಮಿರ್ಜಾಪುರ ಪೊಲೀಸರ ಕ್ರಮಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. 'ಒಬ್ಬ ಐಪಿಎಸ್ ಅಧಿಕಾರಿಯನ್ನೇ ನಿಂದಿಸುವ ಧೈರ್ಯ ತೋರಿದವರನ್ನು ಪತ್ತೆ ಹಚ್ಚಿ ಜೈಲಿಗೆ ಹಾಕುವ ಬದಲು, ಕಾಮೆಂಟ್ ಬಾಕ್ಸ್ ಬಂದ್ ಮಾಡುವುದು ಹೇಡಿತನವಲ್ಲವೇ?' ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 'ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ)ಇಂತಹ ಸ್ಥಿತಿ ಬಂದರೆ, ಸಾಮಾನ್ಯ ಮಹಿಳೆಯರು ಸೈಬರ್ ಬುಲ್ಲಿಯಿಂಗ್ ಎದುರಿಸುವಾಗ ದೂರು ನೀಡಲು ಹೇಗೆ ಧೈರ್ಯ ಮಾಡುತ್ತಾರೆ?" ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ.

ಯಾರು ಈ ಅಪರ್ಣಾ ರಜತ್ ಕೌಶಿಕ್?

ಅಪರ್ಣಾ ಅವರು ಕೇವಲ ಅಧಿಕಾರಿಯಲ್ಲ, ಬದಲಾಗಿ ಅನೇಕ ಯುವತಿಯರಿಗೆ ಸ್ಫೂರ್ತಿಯಾಗಬಲ್ಲ ಸಾಧಕಿ. 2018ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು, ಅಲಹಾಬಾದ್‌ನ ಎನ್‌ಐಟಿಯಿಂದ (NIT) ಬಿ.ಟೆಕ್ ಪದವಿ ಪಡೆದಿದ್ದಾರೆ. ಐಪಿಎಸ್ ಆಗುವ ಮೊದಲು ಗುರುಗ್ರಾಮದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಬಿಸಿನೆಸ್ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆಗಲೇ ಅವರಿಗೆ ವಾರ್ಷಿಕ 18 ಲಕ್ಷ ರೂಪಾಯಿ ಸಂಬಳವಿತ್ತು. ಆದರೆ, ಆರಾಮದಾಯಕ ಜೀವನ ಬಿಟ್ಟು ಜನಸೇವೆ ಮಾಡಬೇಕೆಂಬ ಹಂಬಲದಿಂದ ಅವರು ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು.

ಈ ಹಿಂದೆ ಲಕ್ನೋದ ಡೆಪ್ಯೂಟಿ ಕಮಿಷನರ್ ಆಗಿ, ಅಮೇಥಿ, ಕಾಸಗಂಜ್ ಮತ್ತು ಔರೈಯಾದಲ್ಲಿ ಹಲವು ಕಠಿಣ ಕಾರ್ಯಾಚರಣೆಗಳನ್ನು ನಡೆಸಿ ಸೈ ಎನಿಸಿಕೊಂಡಿದ್ದರು. ಅಂತಹ ದಕ್ಷ ಅಧಿಕಾರಿಗೆ ಈ ರೀತಿಯ ಬಾಡಿ ಶೇಮಿಂಗ್ ನಡೆದಿರುವುದು ಸಮಾಜದ ಕೀಳು ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಈ ಘಟನೆಯು ಸೈಬರ್ ಲೋಕದಲ್ಲಿ ಮಹಿಳೆಯರ ಸುರಕ್ಷತೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸಿದೆ. ಸಾರ್ವಜನಿಕ ಸೇವೆಯಲ್ಲಿರುವ ಮಹಿಳೆಯರು ತಮ್ಮ ಕೆಲಸದ ಮೂಲಕ ಗುರುತಿಸಿಕೊಳ್ಳಬೇಕೇ ಹೊರತು, ದೈಹಿಕ ರೂಪದ ವಿಮರ್ಶೆಗಲ್ಲ ಎಂಬ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.