ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ 15 ಕಾಶ್ಮೀರಿಗಳನ್ನು ಎನ್ಐಕೆ ವಶಕ್ಕೆ ಪಡೆದು ವಿಚಾರಣೆ ನಡೆಸಿದು ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ನವದೆಹಲಿ: 26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್ ಹತ್ಯಾಕಾಂಡದಲ್ಲಿ ಭಾಗಿಯಾದವರಲ್ಲಿ ಒಬ್ಬನೆನಿಸಿದ ಪಾಕಿಸ್ತಾನಿ ಮೂಲದ ಉಗ್ರ ಹಾಶಿಮ್ ಮೂಸಾ ಪಾಕಿಸ್ತಾನ ಸೇನೆಯ ವಿಶೇಷ ಪಡೆಯ ಪ್ಯಾರಾ ಕಮಾಂಡೋ ಆಗಿ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಪಹಲ್ಗಾಮ್ ದಾಳಿಗೆ ಸಹಾಯ ಮಾಡಿದ್ದ ಶಂಕೆಯ ಮೇರೆಗೆ ಸ್ಲೀಪರ್ ಸೆಲ್ನಂತೆ ಕೆಲಸ ಮಾಡುತ್ತಿದ್ದ 15 ಜನರನ್ನು ತನಿಖಾ ಸಂಸ್ಥೆಗಳು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವಿಚಾರಣೆಯ ನಂತರ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
ದಾಳಿ ನಡೆದ ವೇಳೆಯೇ ಪ್ರವಾಸಿಗನೋರ್ವ ಅಲ್ಲಿ ಜಿಪ್ಲೈನ್ ಹೋಗುತ್ತಿದ್ದಾಗ ಆತ ಸೆರೆ ಹಿಡಿದ ವೀಡಿಯೋದಲ್ಲಿ ಭಯೋತ್ಪಾದಕ ಕೃತ್ಯಗಳು ಸೆರೆಯಾಗಿದ್ದವು. ಇದರ ಜೊತೆಗೆ ದಾಳಿ ಆರಂಭವಾದ ವೇಳೆಯೇ ಜಿಪ್ಲೈನ್ ನಿರ್ವಾಹಕ ಅಲ್ಲಾಹು ಅಕ್ಬರ್ ಎಂದಿದ್ದ, ಆದರೆ ಈ ಪ್ರವಾಸಿಗನ ಪತ್ನಿ ಮಕ್ಕಳು ಇದಕ್ಕೂ ಮೊದಲು ಜಿಪ್ಲೈನ್ ಹೋಗಿದ್ದು, ಆ ವೇಳೆ ಆತ ಅಲ್ಲಾಹು ಅಕ್ಬರ್ ಎಂದಿರಲಿಲ್ಲ, ದಾಳಿ ಆರಂಭವಾದ ನಂತರವೇ ಆತ ಅಲ್ಲಾಹು ಅಕ್ಬರ್ ಎಂದಿದ್ದ. ಹೀಗಾಗಿ ಆತನೂ ಸೇರಿದಂತೆ ಭಯೋತ್ಪಾದಕರಿಗೆ ಪರೋಕ್ಷವಾಗಿ ನೆರವಾದ 15 ಕಾಶ್ಮೀರಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ವೇಳೆ ಹಲವು ಅಂಶಗಳು ಬಯಲಾಗಿವೆ.
ಅದರಲ್ಲೊಂದು ಪಹಲ್ಗಾಮ್ ದಾಳಿಕೋರನಲ್ಲಿ ಒಬ್ಬನಾದ ಹಾಸೀಂ ಮೂಸಾ ಪಾಕಿಸ್ತಾನ ಸೇನೆಯ ವಿಶೇಷ ಪಡೆಯ ಪ್ಯಾರಾ ಕಮಾಂಡೋ ಆಗಿ ಕೆಲಸ ಮಾಡುತ್ತಿದ್ದ ಎಂಬುದು. ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೈಬಾ (ಎಲ್ಇಟಿ) ದೊಂದಿಗೆ ಕೆಲಸ ಮಾಡುತ್ತಿರುವ ಕಟ್ಟಾ ಭಯೋತ್ಪಾದಕ ಮೂಸಾನನ್ನು ಎಲ್ಇಟಿ ಮಾಸ್ಟರ್ಮೈಂಡ್ಗಳು ಕಾಶ್ಮೀರಕ್ಕೆ ಕಳುಹಿಸಿದ್ದರು. ಈತನನ್ನು ಇಲ್ಲಿ ಸ್ಥಳೀಯರಲ್ಲದವರ ಮೇಲೆ ಹಾಗೂ ಭಾರತದ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವಂತಹ ನಿರ್ದಿಷ್ಟ ಕಾರ್ಯಾಚರಣೆಗಾಗಿ ಕಳುಹಿಸಿದ್ದರು. ಪಾಕಿಸ್ತಾನದ ವಿಶೇಷ ಸೇವಾ ಗುಂಪು (ಎಸ್ಎಸ್ಜಿ) ಆತನನ್ನು ಎಲ್ಇಟಿಗೆ ತಮ್ಮ ಗುರಿ ಸಾಧನೆಗಾಗಿ ಎರವಲು ನೀಡಿರಬಹುದು ಎಂದು ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಸಮರ್ಥಕರಿಗೆ ಖಡಕ್ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್
ಪಾಕಿಸ್ತಾನದ ಎಸ್ಎಸ್ಜಿಯ ಪ್ಯಾರಾ ಕಮಾಂಡೋಗಳು ನೇರಾನೇರವಲ್ಲದ ಅಸಾಂಪ್ರದಾಯಿಕ ಯುದ್ಧದಲ್ಲಿ ಹೆಚ್ಚು ತರಬೇತಿ ಪಡೆದಿದ್ದಾರೆ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಹೆಚ್ಚು ಪರಿಣತಿ ಹೊಂದಿದ್ದಾರೆ. ಅವರ ತೀವ್ರ ಮತ್ತು ಕಠಿಣ ತರಬೇತಿ ವಿಧಾನವೂ, ಕಾರ್ಯತಂತ್ರದ ಚಿಂತನೆಯ ಜೊತೆಗೆ ದೈಹಿಕ ಸ್ಥಿತಿ ಮತ್ತು ಮಾನಸಿಕ ಸದೃಢತೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಎಸ್ಎಸ್ಜಿ ಕಮಾಂಡೋಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ಹಾಗೂ ಕೈ ಕೈ ಮಿಲಾಯಿಸಿ ಹೋರಾಡುವಲ್ಲಿಯೂ ಪ್ರವೀಣರಾಗಿದ್ದಾರೆ ಮತ್ತು ಹೆಚ್ಚಿನ ಸಂಚಾರ ಮತ್ತು ಬದುಕುಳಿಯುವ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ಪಹಲ್ಗಾಮ್ ದಾಳಿಯ ತನಿಖೆ ವೇಳೆ ಬಂಧಿತರಾಗಿರುವ 15 ಸ್ಥಳೀಯರ ಕಾಶ್ಮೀರಿಗರ (Kashmir overground workers)ವಿಚಾರಣೆ ನಡೆಸಿದ ವೇಳೆ ಈ ಪಾಕಿಸ್ತಾನಿ ಭಯೋತ್ಪಾದಕ ಮೂಸಾ ಹಾಸಿಂ ಮೂಸಾ ಹಿನ್ನೆಲೆ ಧೃಡಪಟ್ಟಿದೆ. ಈ ಕಾಶ್ಮೀರಿಗರು, ಪಾಕಿಸ್ತಾನಿ ಮೂಲದ ಈ ಭಯೋತ್ಪಾದಕರು ಸೇನೆಯ ಕಣ್ಗಾವಲಿನಿಂದ ತಪ್ಪಿಸಿಕೊಂಡು ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲು ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಲು ಸಹಾಯ ಮಾಡಿದ್ದರು. ಇದು ಪಹಲ್ಗಾಮ್ ದಾಳಿಯಲ್ಲಿ ಹಾಗೂ ಈ ಹಿಂದೆ ಕಾಶ್ಮೀರದಲ್ಲಿ ನಡೆದಿರುವ ದಾಳಿಗಳಲ್ಲೂ ಪಾಕಿಸ್ತಾನದ ಐಎಸ್ಐ ಪಾತ್ರವಿದೆ ಎಂಬುದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಅಲ್ಲದೇ 024ರ ಆಕ್ಟೋಬರ್ನಲ್ಲಿ ಗಂಡರ್ಬಾಲ್ನ ಗಗಂಗಿರ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಇವರೇ ಕಾರಣೀಕರ್ತರಾಗಿದ್ದಾರೆ. ಈ ದಾಳಿಯಲ್ಲಿ ವೈದ್ಯರು ಸೇರಿದಂತೆ ಸ್ಥಳೀಯರಲ್ಲದ ಆರು ಜನ ಸಾವನ್ನಪ್ಪಿದ್ದರು. ಹಾಗೆಯೇ ಬಾರಾಮುಲ್ಲಾದ ಬುಟಾ ಪತ್ರಿಯಲ್ಲಿ ಉಗ್ರರು ನಡಸಿದ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ಇಬ್ಬರು ಸೇನಾ ಪೋರ್ಟರ್ಗಳು ಸಾವನ್ನಪ್ಪಿದರು.
ಇದನ್ನೂ ಓದಿ:ಕಾಶ್ಮೀರದಲ್ಲಿ ಹೈ ಅಲರ್ಟ್,ಪೆಹಲ್ಗಾಂ ರೀತಿಯಲ್ಲಿ ದಾಳಿಗೆ ಸಂಚು, ಕಾಶ್ಮೀರದ 48 ಪ್ರವಾಸಿ ತಾಣ ಬಂದ್
ಮೂರೂ ದಾಳಿಗಳಲ್ಲಿಯೂ ಈ ಹಾಸೀಂ ಮೂಸಾ ಸಾಮಾನ್ಯ ಅಪರಾಧಿಯಾಗಿ ಹೊರಹೊಮ್ಮಿದ್ದಾನೆ. ಹಾಗೆಯೇ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇತರ ಇಬ್ಬರು ಸ್ಥಳೀಯ ಭಯೋತ್ಪಾದಕರಾದ ಜುನೈದ್ ಅಹ್ಮದ್ ಭಟ್ ಮತ್ತು ಅರ್ಬಾಜ್ ಮಿರ್ ಕೂಡ ಗಗನಗೀರ್ ಮತ್ತು ಬುಟಾ ಪತ್ರಿ ದಾಳಿಗಳಲ್ಲಿ ಭಾಗಿಯಾಗಿದ್ದರು ಆದರೆ ನವೆಂಬರ್ ಮತ್ತು ಡಿಸೆಂಬರ್ 2024 ರಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಅಂದಿನಿಂದ ಮೂಸಾ ಕಾಶ್ಮೀರದಲ್ಲಿ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಕಾರ್ಯಾಚರಣೆಯನ್ನು ಮುಂದುವರಿಸಲು ಕೆಲಸ ಮಾಡುತ್ತಿದ್ದ ಎಂಬುದು ತನಿಖೆ ವೇಳೆ ಸಾಬೀತಾಗಿದೆ.
ಪಹಲ್ಗಾಮ್ ದಾಳಿ ತನಿಖೆ ವೇಳೆ ಈ ಕೃತ್ಯಗಳಲ್ಲಿ ದಕ್ಷಿಣ ಕಾಶ್ಮೀರದ ಸ್ಥಳೀಯ ಭಯೋತ್ಪಾದಕ ಜಾಲ ಮತ್ತು ಭಯೋತ್ಪಾದಕ ಸಂಘಟನೆಗಳು ಭಾಗಿಯಾಗಿರುವುದು ಸಾಬೀತಾಗಿದೆ. ಇಲ್ಲಿ ಸ್ಥಳೀಯರು ಪಹಲ್ಗಾಮ್ ದಾಳಿ ಮಾಡಿದ ತಂಡಕ್ಕೆ ಮಾರ್ಗದರ್ಶನ ನೀಡಿದರು ಮತ್ತು ಆಶ್ರಯ ಸೇರಿದಂತೆ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದರು ಮತ್ತು ದಾಳಿಯಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳ ಸಾಗಣೆಗೆ ಸಹಾಯ ಮಾಡಿದರು. ದಾಳಿಯ ಮೊದಲು ಮತ್ತು ನಂತರ ಭಯೋತ್ಪಾದಕರ ಅಡಗುತಾಣಗಳನ್ನು ನಕ್ಷೆ ಮಾಡಲು ಸಹಾಯ ಮಾಡಿದ ಸ್ಥಳೀಯರ ಭಾಗವಹಿಸುವಿಕೆಯೊಂದಿಗೆ ದಾಳಿ ಸ್ಥಳದ ವಿವರವಾದ ವಿಚಕ್ಷಣವನ್ನು ನಡೆಸಲಾಯಿತು.
ಇದುವರೆಗಿನ ಮಾಹಿತಿಯು ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಾದ ಹಾಸೀಂ ಮೂಸಾ ಮತ್ತು ಅಲಿ ಭಾಯ್ ಮತ್ತು ಅಷ್ಟೇ ಸ್ಥಳೀಯರಾದ ಆದಿಲ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಪಾತ್ರವನ್ನು ದೃಢಪಡಿಸಿದ್ದರೂ, ಕಾಶ್ಮೀರದಲ್ಲಿ ಬಂಧಿಸಿದ 15 ಜನರ ವಿಚಾರಣೆ ವೇಳೆ ಹೆಚ್ಚಿನ ಪಾಕಿಸ್ತಾನಿ ಭಯೋತ್ಪಾದಕರು ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಸೂಚಿಸಿದೆ. ಒಟ್ಟಿನಲ್ಲಿ ಪ್ರವಾಸಿಗರಿಂದಲೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಕೆಲ ಕಾಶ್ಮೀರಿಗಳು ಅವರ ಮೇಲೆಯೇ ದಾಳಿ ಮಾಡಿ ತಮ್ಮ ಹೊಟ್ಟೆಗೆ ತಾವೇ ಮಣ್ಣು ಹಾಕಿಕೊಳ್ಳುವ ಕೆಲಸ ಮಾಡಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ.

