ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್‌ ಕೀ ಬಾತ್' ಕಾರ್ಯಕ್ರಮದಲ್ಲಿ, ಕರ್ನಾಟಕದ ಬೈಲಕುಪ್ಪೆ ಬೌದ್ಧವಿಹಾರದ ಪ್ರಕೃತಿ ಸಂರಕ್ಷಣಾ ಕಾರ್ಯವನ್ನು ಶ್ಲಾಘಿಸಿದ್ದಾರೆ. 100 ಎಕರೆ ಕಾಡಿನಲ್ಲಿ 700ಕ್ಕೂ ಹೆಚ್ಚು ಸ್ಥಳೀಯ ಮರಗಳನ್ನು ಸಂರಕ್ಷಿಸಿ, ಪ್ರಕೃತಿಯೊಂದಿಗಿನ ಬೌದ್ಧ ಸಂಪ್ರದಾಯದ ಸಂಬಂಧಕ್ಕೆ ಉತ್ತಮ ಉದಾಹರಣೆಯಾಗಿದೆ.

ನವದೆಹಲಿ: ಮೇ 1ರ ಬೌದ್ಧಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕೊಡಗು ಜಿಲ್ಲೆ ಬೈಲಕುಪ್ಪೆಯ ಬೌದ್ಧ ವಿರಾಮವನ್ನು ಸ್ಮರಿಸಿ, ಪ್ರಕೃತಿ ರಕ್ಷಣೆಗೆ ಅದು ನಡೆಸುತ್ತಿರುವ ಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೇನಲ್ಲಿ ನಾವು ಬುದ್ಧ ಪೂರ್ಣಿಮೆ ಆಚರಿಸುತ್ತೇವೆ. ಎಲ್ಲ ದೇಶವಾಸಿಗಳಿಗೆ ನಾನು ಅನಂತ ಶುಭಾಶಯ ಕೋರುತ್ತೇನೆ. ಭಗವಾನ್ ಗೌತಮ ಬುದ್ಧನ ಜೀವನ ಸಂದೇಶವು ಇಂದಿಗೂ ಪ್ರಸ್ತುತ’ ಎಂದು ಹೇಳಿದರು ಹಾಗೂ ಬೌದ್ಧ ಸಂಪ್ರದಾಯವು ಹೇಗೆ ಪ್ರಕೃತಿಯೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಬೈಲಕುಪ್ಪೆಯ ಬೌದ್ಧ ವಿಹಾರದ ಉದಾಹರಣೆಯೊಂದಿಗೆ ವಿವರಿಸಿದರು.

‘ಬೌದ್ಧ ಸಂಪ್ರದಾಯವು ನಮಗೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದನ್ನು ಕಲಿಸುತ್ತದೆ. ಭಗವಾನ್ ಬುದ್ಧನಿಗೆ ಒಂದು ಮರದ ಕೆಳಗೆ ಜ್ಞಾನೋದಯವಾಯಿತು. ಪ್ರಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗ. ದೇಶಾದ್ಯಂತ ಇಂತಹ ಯತ್ನ ನಡೆಯುತ್ತಲೇ ಇವೆ. ಕರ್ನಾಟಕದಲ್ಲಿರುವ ಕರ್ಮ ವಿಹಾರವು ಒಂದು ಉತ್ತಮ ಉದಾಹರಣೆ. ಈ ವಿಹಾರವು 100 ಎಕರೆ ವಿಸ್ತಾರವಾದ ರೋಮಾಂಚಕ ಅರಣ್ಯ. ಈ ಕಾಡಿನಲ್ಲಿ 700 ಕ್ಕೂ ಹೆಚ್ಚು ಸ್ಥಳೀಯ ಮರಗಳನ್ನು ಸಂರಕ್ಷಿಸಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.