ವ್ಯಕ್ತಿಯೊಬ್ಬ ಧ್ವನಿ ಬದಲಿಸೋ ಆ್ಯಪ್ ಮೂಲಕ ಮಹಿಳಾ ಕಾಲೇಜಿನ ಶಿಕ್ಷಕಿಯಂತೆ ಮಾತಾಡಿ, ಸ್ಕಾಲರ್‌ಶಿಪ್ ಪಡೆಯಲು ತಾನು ಕೊಟ್ಟ ವಿಳಾಸಕ್ಕೆ ಬರುವಂತೆ ಹೇಳಿ 7 ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. 

ಸಿಧಿ , ಮಧ್ಯಪ್ರದೇಶ: ಧ್ವನಿ ಬದಲಿಸೋ ಆ್ಯಪ್ ಮೂಲಕ ಮಹಿಳಾ ಕಾಲೇಜು ಶಿಕ್ಷಕಿಯಂತೆ ಕರೆ ಮಾಡಿ ವಿದ್ಯಾರ್ಥಿವೇತನ ಪಡೆಯಲು ಬರಲು ಹೆಣ್ಣುಮಕ್ಕಳನ್ನು ಕರೆದಲ್ಲಿ ಬರಲು ಹೇಳಿ ಕನಿಷ್ಠ ಏಳು ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

ಹೆಚ್ಚಿನ ಹೆಣ್ಣುಮಕ್ಕಳು ಬುಡಕಟ್ಟು ಸಮುದಾಯಗಳಿಗೆ ಸೇರಿದವರು.

ಆರೋಪಿ ಬ್ರಜೇಶ್ ಪ್ರಜಾಪತಿ ತನ್ನ ಸಂಭಾವ್ಯ ಸಂತ್ರಸ್ತರೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ಮಹಿಳೆಯಂತೆ ಧ್ವನಿ ಬದಲಾಯಿಸುವ ಆ್ಯಪ್ ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ತನಿಖೆಗೆ ಮುಖ್ಯಮಂತ್ರಿ ಮೋಹನ್ ಯಾದವ್ ಆದೇಶಿಸಿದ್ದರೆ, ಬಂಧನದ ನಂತರ ಆರೋಪಿಯ ಅನಧಿಕೃತ ಮನೆಯನ್ನು ಕೆಡವಲಾಗಿದೆ.

ಪ್ರಜಾಪತಿಯ ಮೂವರು ಸಹಚರರನ್ನು ಸಹ ಬಂಧಿಸಲಾಗಿದೆ ಎಂದು ರೇವಾ ರೇಂಜ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಮಹೇಂದ್ರ ಸಿಂಗ್ ಸಿಕರ್ವಾರ್ ಹೇಳಿದ್ದಾರೆ.

ಈ 6 ರೊಮ್ಯಾಂಟಿಕ್ ಬಾಲಿವುಡ್ ಚಿತ್ರಗಳು ಕಾಲಾತೀತ ಪ್ರೇಮಕತೆಗಳು

ಹೀಗೆ ಕರೆಸುತ್ತಿದ್ದ..
ಪ್ರಜಾಪತಿ ಮಹಿಳಾ ಕಾಲೇಜು ಶಿಕ್ಷಕಿಯಂತೆ ಹೆಣ್ಣಿನ ದನಿಯಲ್ಲಿ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ವಿದ್ಯಾರ್ಥಿವೇತನವನ್ನು ಪಡೆಯಲು ಅವರನ್ನು ಭೇಟಿಯಾಗುವಂತೆ ಹೇಳುತ್ತಿದ್ದ. ಮತ್ತು ಬರಲು ಹೇಳಿದ ಸ್ಥಳದಿಂದ 'ಆಕೆಯ ಮಗ' ಬಂದು ಮನೆಗೆ ಕರೆದುಕೊಂಡು ಬರುತ್ತಾನೆ ಎನ್ನುತ್ತಿದ್ದ. ನಂತರ ಪ್ರಜಾಪತಿ ಸ್ವತಃ ಹೆಲ್ಮೆಟ್ ಮತ್ತು ಕೈಗವಸುಗಳನ್ನು ಧರಿಸಿ, ಭೇಟಿಯಾಗಲು ಹೇಳಿದ ಸ್ಥಳಕ್ಕೆ ಬರುವ ವಿದ್ಯಾರ್ಥಿನಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗುತ್ತಿದ್ದ ಎಂದು ಪೋಲೀಸರು ವಿವರಿಸಿದ್ದಾರೆ. 

ತನಿಖೆಯ ಸಮಯದಲ್ಲಿ, ಅಪರಾಧಿಯ ಕೈಯಲ್ಲಿ ಸುಟ್ಟಗಾಯಗಳು ಮತ್ತು ಇತರೆ ಗಾಯಗಳ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಏಳು ಬಾಲಕಿಯರ ಮೇಲೆ ಅತ್ಯಾಚಾರವೆಸಗಿರುವುದಾಗಿ ಪ್ರಜಾಪತಿ ತಪ್ಪೊಪ್ಪಿಕೊಂಡರೆ, ನಾಲ್ವರು ಹುಡುಗಿಯರು ದೂರು ನೀಡಲು ಮುಂದೆ ಬಂದಿದ್ದಾರೆ ಎಂದು ಐಜಿ ಸಿಕರ್ವಾರ್ ತಿಳಿಸಿದ್ದಾರೆ. ಆತ ಇನ್ನಷ್ಟು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿರಬಹುದಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆತನ ಸಹಚರರಾದ ಲವ್ಕುಶ ಪ್ರಜಾಪತಿ, ರಾಹುಲ್ ಪ್ರಜಾಪತಿ ಮತ್ತು ಸಂದೀಪ್ ಪ್ರಜಾಪತಿಯನ್ನೂ ಬಂಧಿಸಲಾಗಿದ್ದು, ಅವರಿಂದ 16 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದು, ಕಾಲೇಜು ವಾಟ್ಸಾಪ್ ಗ್ರೂಪ್‌ನಿಂದ ಹುಡುಗಿಯರ ಸಂಖ್ಯೆಗಳನ್ನು ಪಡೆದುಕೊಂಡಿದ್ದಾರೆ ಎಂದು ಐಜಿ ತಿಳಿಸಿದ್ದಾರೆ.

ಮೇ 16ರಂದು ಮೊದಲ ಅತ್ಯಾಚಾರ, ಅಪಹರಣ, ಹಲ್ಲೆ ಮತ್ತು ದರೋಡೆ ಪ್ರಕರಣವನ್ನು ದಾಖಲಿಸಲಾಗಿದೆ. ಮೇ 18 ಮತ್ತು ಮೇ 23 ರಂದು ಕ್ರಮವಾಗಿ ಮೇ 4 ಮತ್ತು ಮೇ 20 ರಂದು ನಡೆದ ಅಪರಾಧಗಳ ಕುರಿತು ಎರಡು ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 15 ರಂದು ನಡೆದ ಅಪರಾಧದ ಕುರಿತು ಮೇ 19 ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾವಿ ಸೊಸೆ ರಾಧಿಕಾಗೆ ದುಬೈನಲ್ಲಿ 640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆ ನೀಡಿದ ನೀತಾ ಅಂಬಾನಿ; ಇಲ್ಲಿವೆ ಫೋಟೋಸ್

ಸಿಎಂ ಯಾದವ್ ಅವರ ನಿರ್ದೇಶನದ ನಂತರ, ಐಜಿ ಸಿಕರ್ವಾರ್ ಅವರು ಕುಸ್ಮಿಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ನೇತೃತ್ವದ ಒಂಬತ್ತು ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದಾರೆ, ರೋಶ್ನಿ ಸಿಂಗ್ ಠಾಕೂರ್ ಅವರು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಇಂತಹ ಖಂಡನೀಯ ಕೃತ್ಯಗಳನ್ನು ಎಸಗುವವರು ಸಮಾಜದ ಶತ್ರುಗಳು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅವರನ್ನು ಯಾವುದೇ ಬೆಲೆಗೆ ಬಿಡುವುದಿಲ್ಲ' ಎಂದು ಮುಖ್ಯಮಂತ್ರಿ ಎಕ್ಸ್‌ನಲ್ಲಿ ಬರೆದಿದ್ದಾರೆ.