ಬಕ್ರೀದ್ ಹಬ್ಬದಂದು 60 ವರ್ಷದ ವ್ಯಕ್ತಿಯೊಬ್ಬರು ಆತ್ಮಹ*ತ್ಯೆ ಮಾಡಿಕೊಂಡಿದ್ದು, 'ನಾನೇ ಬಲಿಪಶು' ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಲಕ್ನೋದಲ್ಲಿ ನಡೆದ ಘಟನೆಯಲ್ಲಿ, ಇಶ್ ಮುಹಮ್ಮದ್ ಅನ್ಸಾರಿ ಎಂಬವರು ಗುಡಿಸಲಿನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಲಕ್ನೋ (ಜೂ.08) : ಬಕ್ರೀದ್ ಹಬ್ಬದ ದಿನ 60 ವರ್ಷದ ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಅಲ್ಲಾಗೆ ತನ್ನನ್ನು ತಾನು ಬಲಿ ಅರ್ಪಿಸುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಇಶ್ ಮುಹಮ್ಮದ್ ಅನ್ಸಾರಿ ಎಂಬವರು ಶನಿವಾರ ಬೆಳಿಗ್ಗೆ ತಮ್ಮ ಮನೆಯ ಪಕ್ಕದಲ್ಲಿದ್ದ ಗುಡಿಸಲಿನಲ್ಲಿ ಕತ್ತು ಕೊಯ್ದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿರುಚಾಟ ಕೇಳಿ ಕುಟುಂಬಸ್ಥರು ಓಡಿ ಬಂದು, ಪೊಲೀಸರ ಸಹಾಯದಿಂದ ಇಶ್ ಮುಹಮ್ಮದ್ರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಗೋರಖ್ಪುರ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತಾದರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಪೆರುಮ್ಮಾಳ್ ನಮಾಜ್ ಮುಗಿಸಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸುಲ್ತಾನ್ ಸಯ್ಯದ್ ಮಖ್ದೂಮ್ ಅಶ್ರಫ್ ಶಾ ದರ್ಗಾದಿಂದ ಅನ್ಸಾರಿ ವಾಪಸ್ ಬಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮನೆಗೆ ವಾಪಸ್ ಬಂದ ನಂತರ ಅನ್ಸಾರಿ ನೇರವಾಗಿ ಮನೆಯ ಪಕ್ಕದಲ್ಲಿದ್ದ ಗುಡಿಸಲಿಗೆ ಹೋದರು ಎಂದು ಅವರ ಪತ್ನಿ ಹಜ್ರಾ ಖಾತೂನ್ ಪಿಟಿಐಗೆ ತಿಳಿಸಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ ಸ್ಥಳೀಯರು ಮತ್ತು ಪೊಲೀಸರನ್ನು ಬೆಚ್ಚಿಬೀಳಿಸಿದೆ.
‘ಒಬ್ಬ ವ್ಯಕ್ತಿ ಮೇಕೆಯನ್ನು ತನ್ನ ಮಗುವಿನಂತೆ ಸಾಕಿ ಬಲಿ ಕೊಡುತ್ತಾನೆ. ಅದೂ ಒಂದು ಜೀವಿ. ನಾವು ನಮ್ಮನ್ನು ನಾವೇ ಬಲಿ ಕೊಡಬೇಕು. ನಾನು ಅಲ್ಲಾನ ದೂತನ ಹೆಸರಿನಲ್ಲಿ ನನ್ನನ್ನು ನಾನೇ ಬಲಿ ಕೊಡುತ್ತಿದ್ದೇನೆ’ - ಡೆತ್ ನೋಟ್ನಲ್ಲಿ ಹೀಗೆ ಬರೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅನ್ಸಾರಿ ಸ್ವಯಂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ ಮತ್ತು ಮುಂದಿನ ತನಿಖೆ ನಡೆಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದಾರೆ ಎಂದು ಅವರು ಹೇಳಿದರು.
