ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ, 20ಕ್ಕೂ ಅಧಿಕ ಸಾವು?
ಉತ್ತರ ಪ್ರದೇಶದ ಭಂಡಾ ಜಿಲ್ಲೆಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿದ್ದು, 20ಕ್ಕೂ ಅಧಿಕ ಮಂದಿ ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈವರೆಗೂ ನಾಲ್ಕು ಮಂದಿಯ ಶವವನ್ನು ನದಿಯಿಂದ ಹೊರತೆಗೆಯಲಾಗಿದೆ.
ಲಕ್ನೋ (ಆ. 11): ಉತ್ತರ ಪ್ರದೇಶದ ಭಂಡಾ ಜಿಲ್ಲೆಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಅಂದಾಜು 36ಕ್ಕೂ ಅಧಿಕ ಮಂದಿ ಇದ್ದ ದೋಣಿ ಯಮುನಾ ನದಿಯಲ್ಲಿ ಮುಳುಗಿದ್ದು, 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈವರೆಗೂ ನಾಲ್ಕು ಮಂದಿಯ ಶವವನ್ನು ನದಿಯಿಂದ ಹೊರತೆಗೆಯಲಾಗಿದೆ. ಜಿಲ್ಲಾಡಳಿತ ಘಟನೆ ನಡೆದ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಭಂಡಾದಿಂದ ಫತೇಪುರಕ್ಕೆ ತೆರಳುತ್ತಿದ್ದ ದೋಣಿ ಯಮುನಾ ನದಿಯಲ್ಲಿ ಮುಳುಗಿದೆ. ಕೆಲವೊಂದು ವರದಿಗಳ ಪ್ರಕಾರ ದೋಣಿಯಲ್ಲಿ 40ರಿಂದ 50 ಮಂದಿ ಇದ್ದರು. ಇದರಲ್ಲಿ ಮಕ್ಕಳು ಸೇರಿದಂತೆ 20 ರಿಂದ 25 ಮಹಿಳೆಯರೂ ಇದ್ದರು ಎಂದು ಹೇಳಲಾಗಿದೆ. ಮಹಿಳೆಯರು ರಕ್ಷಾಬಂಧನದಂದು ರಾಖಿ ಕಟ್ಟಲು ತಮ್ಮ ತಾಯಿಯ ಮನೆಗೆ ಹೋಗುತ್ತಿದ್ದರು. ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಲು ಮುಳುಗು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಇದುವರೆಗೂ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದ್ದರೆ, ಕೆಲವರು ಈಜಿಕೊಂಡು ದಡ ಸೇರಿದ್ದಾರೆ. ಕಾಣೆಯಾದ 20ಕ್ಕೂ ಅಧಿಕ ವ್ಯಕ್ತಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.
ರಕ್ಷಾಬಂಧನದ ನಿಮಿತ್ತ ಸಂಗ್ರಾ ಗ್ರಾಮದ ಮಹಿಳೆಯರು ಮತ್ತು ಜನರು ಮಾರ್ಕ ಘಾಟ್ ತಲುಪಿದ್ದರು. ಫತೇಪುರ್ ಜಿಲ್ಲೆಯ ಅಸೋಥರ್ ಘಾಟ್ಗೆ ಯಮುನಾ ನದಿಯನ್ನು ದಾಟಲು ಸುಮಾರು 50 ಜನರು ದೋಣಿಯನ್ನು ಏರಿದ್ದರು. ಯಮುನಾ ನದಿಯ ಮಧ್ಯದ ಹೊಳೆಯನ್ನು ತಲುಪಿದ ತಕ್ಷಣ ದೋಣಿ ಅಸಮತೋಲನಗೊಂಡು ಪಲ್ಟಿಯಾಗಿದೆ.
ನಮ್ಮ ಹಳ್ಳಿಯಿಂದ ಪತ್ನಿಯ ಊರಿಗೆ ತೆರಳಬೇಕು ಎಂದು ಇಲ್ಲಿ ಬಂದಿದ್ದೆವು. ರಕ್ಷಾಬಂಧನ ಸಂಭ್ರಮ ಆಚರಿಸುವ ಸಲುವಾಗಿ ಹೋಗಲು ಸಿದ್ಧರಾಗಿದ್ದೆವು. ನದಿ ತೀರಕ್ಕೆ ಬಂದಾಗ ಇಲ್ಲಿ ಕೇವಲ ಒಂದು ಬೋಟ್ ಮಾತ್ರವೇ ಇತ್ತು. ಮಧ್ಯಾಹ್ನ 3 ಗಂಟೆಯ ಸಮಯವಾಗಿತ್ತು. ಅಂದಾಜು 50 ವ್ಯಕ್ತಿಗಳು ಇದನ್ನು ಏರಿದ್ದರು. ಕೆಲವೊಬ್ಬರು ತಮ್ಮ ಬೈಕ್ಗಳನ್ನು ಕೂಡ ಇದರಲ್ಲಿ ಇರಿಸಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ನದಿಯ ಮಧ್ಯಭಾಗಕ್ಕೆ ದೋಣಿ ತಲುಪಿದಾಗ ಜನ ಭಯಭೀತರಾಗಿದ್ದರು. ಜನರು ಆ ಕಡೆ, ಈ ಕಡೆ ಹೋಗಲು ಆರಂಭಿಸಿದರು. ಈ ಸಮಯದಲ್ಲಿ ದೋಣಿಯ ಒಂದೇ ಭಾಗದಲ್ಲಿ ಹೆಚ್ಚಿನ ಜನ ಬಂದಿದ್ದರಿಂದ ಇಡೀ ದೋಣಿ ನದಿಯಲ್ಲಿ ಮುಳುಗಿತು. ಕೆಲವು ವ್ಯಕ್ತಿಗಳು ಈಜಿ ದಡ ಸೇರಲು ಆರಂಭಿಸಿದರೆ, ಮಹಿಳೆಯರು ಹಾಗೂ ಮಕ್ಕಳು ಅಲ್ಲಿಯೇ ಮುಳುಗಿದರು. ಸಾಕಷ್ಟು ಚಿಕ್ಕ ಮಕ್ಕಳು ಕೂಡ ಇದ್ದರು. ದೋಣಿ ಮುಳುಗಡೆಯಾದ ಬೆನ್ನಲ್ಲಿಯೇ ಕೆಲವು ಜನರು ಬೋಟ್ಗಳು ಹತ್ತಿರ ಬಂದು ಅವರನ್ನು ರಕ್ಷಣೆ ಮಾಡಲು ಆರಂಭಿಸಿದರು. ಈ ವೇಳೆ ನನಗೂ ಕೂಡ ಒಂದು ಬೋಟ್ ಸಿಕ್ಕಿತು. ಆದರೆ, ಸಾಕಷ್ಟು ಮಹಿಳೆಯರು ಹಾಗೂ ಮಕ್ಕಳು ನದಿಯಲ್ಲಿ ಮುಳುಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಪ್ರತ್ಯಕ್ಷದರ್ಶಿಯ ಪ್ರಕಾರ, ಬೋಟ್ನಲ್ಲಿ ಅಂದಾಜು 40 ಮಂದಿ ಇದ್ದರು. ಇದರಲ್ಲಿ ಕನಿಷ್ಠ 15 ಮಂದಿಯ ರಕ್ಷಣೆ ಮಾಡಲಾಗಿದೆ. 25ಕ್ಕೂ ಅದಧಿ ಮಂದಿ ನದಿಯಲ್ಲಿ ಮುಳುಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ದೋಣಿ ದುರಂತ; 40 ಮಂದಿ ರಕ್ಷಣೆ, 100ಕ್ಕೂ ಜನ ನಾಪತ್ತೆ!
ದಡ ಸೇರುವ ಮೂಲಕ ಪಾರಾದ ಕೆ.ಪಿ.ಯಾದವ್ ಎನ್ನುವ ವ್ಯಕ್ತಿ ಮಾತನಾಡಿದ್ದು, ಲಖನೌದಿಂದ ಸಂಧಾರಕ್ಕೆ ಬಂದಿದ್ದೆ, ಸಂಧಾರದಲ್ಲಿ ಪತ್ನಿಯನ್ನು ಬಿಟ್ಟು ಅಕ್ಕನ ಮನೆಗೆ ರಾಖಿ ಸಂಭ್ರಮಕ್ಕೆ ಹೋಗುತ್ತಿದ್ದ, ಬರೈಚಿಗೆ ಹೋಗಬೇಕಿತ್ತು.ಒಬ್ಬನೇ ಹೋಗುತ್ತಿದ್ದೆ. ಒಂದು ಮೋಟಾರ್ ಸೈಕಲ್ ಹಾಗೂ ನಾನು ದೋಣಿಯಲ್ಲಿದ್ದೆ, ಹಾಗಾಗಿ ದೋಣಿ ಮುಳುಗಿದಾಗ ಮೋಟಾರ್ ಸೈಕಲ್ ಕೂಡ ಮುಳುಗಿದೆ ಎಂದಿದ್ದಾರೆ.
ಮಂಗಳೂರಿನಲ್ಲಿ ದಡಕ್ಕಪ್ಪಳಿಸಿದ ಮೀನುಗಾರಿಕಾ ಬೋಟ್ : 10 ಮಂದಿ ರಕ್ಷಣೆ
ಆದರೆ, ನನಗೆ ಸಿಕ್ಕಿದ ಬಿದಿರಿನ ಸಹಾಯದಿಂದ ಪ್ರಾಣ ಉಳಿಸಿಕೊಳ್ಳಲು ಯಶಸ್ವಿಯಾದೆ. ದೋಣಿಯ ಚುಕ್ಕಾಣಿ ಇದ್ದಕ್ಕಿದ್ದಂತೆ ಮುರಿದುಹೋಯಿತು, ನಂತರ ಬಲವಾದ ಪ್ರವಾಹದಿಂದಾಗಿ ದೋಣಿ ಮುಳುಗಡೆ ಆಯಿತು. ಆದರೆ ನಾವಿಕನಿಗೆ ಅದನ್ನು ಮತ್ತೆ ನಿಭಾಯಿಸಲು ಸಾಧ್ಯವಾಗಲಿಲ್ಲ. ಆ ಬಳಿಕ ದೋಣಿ ಮಗುಚಿ ಬಿದ್ದಿದೆ. ದೋಣಿಯಲ್ಲಿ ಕನಿಷ್ಠ 35 ಕ್ಕೂ ಹೆಚ್ಚು ಜನರಿದ್ದರು ಎಂದು ನನ್ನ ಅಂದಾಜು. ಕೆಲವರು ಬದುಕುಳಿದಿದ್ದಾರೆ ಆದರೆ ಇನ್ನೂ ಹೆಚ್ಚಿನ ಜನರು ಹೊರಬರಲು ಸಾಧ್ಯವಾಗಿಲ್ಲ ಎಂದಿದ್ದಾರೆ.