ಮಹಾರಾಷ್ಟ್ರದಲ್ಲಿ ಜೂನ್ 1ರ ವರೆಗೆ ಲಾಕ್ಡೌನ್ ವಿಸ್ತರಣೆ; ಕರ್ನಾಟಕದ ನಿರ್ಧಾರವೇನು?
- ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್ಡೌನ್ ವಿಸ್ತರಣೆ
- ಜೂನ್ 1 ರವರೆಗೆ ಲಾಕ್ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ
- ಕರ್ನಾಟಕದಲ್ಲೂ ವಿಸ್ತರಣೆಯಾಗುತ್ತಾ ಲಾಕ್ಡೌನ್?
ಮುಂಬೈ(ಮೇ.13): ಕೊರೋನಾ ವೈರಸ್ 2ನೇ ಅಲೆ ನಿಯಂತ್ರಿಸಲು ಹಲವು ರಾಜ್ಯಗಳು ಲಾಕ್ಡೌನ್ ನಿರ್ಬಂಧ ಹೇರಿದೆ. ಬಳಿಕ ಹಂತ ಹಂತವಾಗಿ ವಿಸ್ತರಣೆ ಮಾಡುತ್ತಲೇ ಬಂದಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ಹೇರಿದ್ದ ಲಾಕ್ಡೌನ್ ಮತ್ತೆ ವಿಸ್ತರಿಸಿದೆ. ನೂತನ ಮಾರ್ಗಸೂಚಿ ಪ್ರಕಾರ ಜೂನ್ 1, ಬೆಳಗ್ಗೆ 7 ಗಂಟೆ ವರೆಗೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮುಂದುವರಿಯಲಿದೆ.
ಕೊರೋನಾ ಹೆಚ್ಚಳ: ಹೊಟೆಲ್ಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಲು ಆದೇಶ!
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧೀಕೃತ ಘೋಷಣೆ ಮಾಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಹೇರಿರುವ ಲಾಕ್ಡೌನ್ ಮೇ.15, ಬೆಳಗ್ಗೆ 7 ಗಂಟೆಗೆ ಅಂತ್ಯವಾಗಬೇಕಿತ್ತು. ಆದರೆ ವಿಸ್ತರಣೆಯಿಂದ ಇದೀಗ ಜೂನ್ 1ವರೆಗೆ ಕಠಿಣ ನಿರ್ಬಂಧಗಳು ಜಾರಿಯಲ್ಲಿರಲಿದೆ.
ಲಾಕ್ಡೌನ್ ಮಾರ್ಗಸೂಚಿ:
ಲಾಕ್ಡೌನ್ ವಿಸ್ತರಣೆ ಜೊತೆಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ನೂತನ ಮಾರ್ಗಸೂಚಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ.
ದೇಶದ ಯಾವುದೇ ರಾಜ್ಯ ಅಥವ ಯಾವುದೇ ಕೇಂದ್ರಾಡಳಿತ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ಆಗಮಿಸಲು ನೆಗಟೀವ್ RTPCR ವರದಿ ಕಡ್ಡಾಯವಾಗಿದೆ. ಈ ವರದಿ 48ಗಂಟೆ ಮೀರಿರಬಾರದು.
ಮಾದರಿಯಾದ ಗ್ರಾಮ: 45 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಕೊಟ್ಟಾಯ್ತು..!.
ಹಾಲು ಸಂಗ್ರಹಣೆ, ಸಾಗಣೆ ಮತ್ತು ಸಂಸ್ಕರಣೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅದರ ಚಿಲ್ಲರೆ ಮಾರಾಟ ಹಾಗೂ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳಿಗೆ ನೀಡಿರುವ ನಿಗದಿತ ಸಮಯ ಹಾಗೂ ಹೋಮ್ ಡೆಲಿವರಿ ನಿಯಮ ಮುಂದುವರಿಯಲಿದೆ.
APMCs ಸೇರಿದಂತೆ ಮಾರುಕಟ್ಟೆಗಳಲ್ಲಿ ಕೊರೋನಾ ನಿಯಮ ಕಟ್ಟು ನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ಸ್ಥಳೀಯ ಜಿಲ್ಲಾಡಳಿತಕ್ಕೆ ಜವಾಬ್ದಾರಿ ನೀಡಲಾಗಿದೆ. ಇದರ ಜೊತೆಗೆ ಈ ಹಿಂದಿ ಜಾರಿಗೆ ತಂದಿರುವ ಕಟ್ಟು ನಿಟ್ಟಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಮಹಾರಾಷ್ಟ್ರದಲ್ಲಿ ಮೇ. 12ರಂದು ಕೊರೋನಾದಿಂದ 816 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 46,781 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ 5,46,129 ಸಕ್ರೀಯ ಪ್ರಕರಣಗಳಿವೆ.
ಕರ್ನಾಟಕದಲ್ಲಿ ಲಾಕ್ಡೌನ್:
ಕರ್ನಾಟಕದಲ್ಲಿ 2ನೇ ಅಲೆ ನಿಯಂತ್ರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೇ. 07 ರಂದು ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಮೇ.24,ಬೆಳಗ್ಗೆ 6 ಗಂಟೆ ವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ದೆಹಲಿ, ಮಹಾರಾಷ್ಟ್ರ ಈಗಾಗಲೇ ಲಾಕ್ಡೌನ್ ವಿಸ್ತರಣೆ ಮಾಡುತ್ತಲೇ ಇದೆ. ಇತ್ತ ಕರ್ನಾಟಕ ಕೂಡ ಲಾಕ್ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚು. ಸದ್ಯ ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ತಜ್ಞರ ಸಲಹೆ ಪ್ರಕಾರ, ಲಾಕ್ಡೌನ್ ವಿಸ್ತರಣೆ ಸಾಧ್ಯತೆ ಹೆಚ್ಚಾಗಿದೆ.