ತಮಿಳುನಾಡು ಪೊಲೀಸ್ಗೆ ಮುಖಭಂಗ, ಮೋದಿ ರೋಡ್ ಶೋಗೆ ಹೈಕೋರ್ಟ್ ಅನುಮತಿ!
ತಮಿಳುನಾಡಿನ ಕೊಯಂಬತ್ತೂರಿಲ್ಲಿ ಪ್ರಧಾನಿ ನರೇಂದ್ರ ಮೋದಿ 4 ಕಿಲೋಮೀಟರ್ ರೋಡ್ಶೋಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಸೂಕ್ಷ್ಮ ಪ್ರದೇಶ ಅನ್ನೋ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿತ್ತು. ಆದರೆ ಮದ್ರಾಸ್ ಹೈಕೋರ್ಟ್ ರೋಡ್ ಶೋಗೆ ಅನುಮತಿ ನೀಡಿದೆ.
ಕೊಯಂಬತ್ತೂರು(ಮಾ.15) ದೇಶದ ಪ್ರಧಾನಿಯ ರೋಡ್ ಶೋಗೆ ಸೂಕ್ಷ್ಮ ಪ್ರದೇಶ ಅನ್ನೋ ಕಾರಣ ನೀಡಿ ಅನುಮತಿ ನಿರಾಕರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿತ್ತು. ಮಾರ್ಚ್ 18 ರಂದು ಕೊಯಂಬತ್ತೂರಿನಲ್ಲಿ ಪ್ರಧಾನಿ ಮೋದಿಯ 4 ಕಿಲೋಮೀಟರ್ ರೋಡ್ ಶೋ ಆಯೋಜಿಸಲು ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಆದರೆ ಸೂಕ್ಷ್ಮ ಪ್ರದೇಶದ ಕಾರಣ ನೀಡಿದ ತಮಿಳುನಾಡು ಪೊಲೀಸ್ ಮೋದಿ ರೋಡ್ಶೋಗೆ ಅನುಮತಿ ನಿರಾಕರಿಸಿತ್ತು. ಈ ಕುರಿತು ಕೋರ್ಟ್ ಮೆಟ್ಟಿಲೇರಿದ ಬಿಜೆಪಿಗೆ ಗೆಲುವಾಗಿದೆ. ಪ್ರಧಾನಿ ಮೋದಿ ರೋಡ್ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಈ ಬೆಳವಣಿಗೆ ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ ತಂದಿದೆ.
ಲೋಕಸಭಾ ಚುನಾವಣೆ ಕಾವೇರುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತ ಪ್ರವಾಸದಲ್ಲಿದ್ದಾರೆ. ಮಾರ್ಚ್ 18 ರಂದು ಕೊಯಂಬತ್ತೂರಿನಲ್ಲಿ 4 ಕಿಲೋಮೀಟರ್ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಹೈದರಾಬಾದ್ ಸೇರಿದಂತೆ ಇತರ ದಕ್ಷಿಣ ಭಾರತದ ಪಟ್ಟಣದಲ್ಲೂ ಮೋದಿ ರೋಡ್ ಶೋ ಆಯೋಜಿಸಲಾಗಿದೆ. ಆದರೆ ತಮಿಳುನಾಡು ಪೊಲೀಸರು ಮಾತ್ರ ಅನುಮತಿ ನಿರಾಕರಿಸಿದ್ದರು. ಮಾರ್ಚ್ 18 ರ ಮೋದಿ ರೋಡ್ ಶೋ ಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಪೊಲೀಸರು ಹೇಳಿದ್ದರು.
ಪ್ರಧಾನಿ ಮೋದಿಯ ರೋಡ್ ಶೋ ಸೂಕ್ಷ್ಮ ಪ್ರದೇಶಗಳಲ್ಲಿ ಹಾದು ಹೋಗಲಿದೆ. ಹೀಗಾಗಿ ಇಲ್ಲಿ ರೋಡ್ ಶೋ ನಡೆಸುವುದು ದಂಗೆಗಳಿಗೆ ಕಾರಣವಾಗಬಹುದು. ಇದು ಕೋಮು ಸೂಕ್ಷ್ಮ ಪ್ರದೇಶವಾಗಿದೆ.ಜೊತೆಗೆ ರೋಡ್ ಶೋನಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಅನುಮತಿ ನಿರಾಕರಿಸಿತ್ತು. ಈ ಕುರಿತು ತಮಿಳುನಾಡು ಬಿಜೆಪಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಬಿಜೆಪಿ ಅರ್ಜಿ ಕುರಿತು ವಿಚಾರಣೆ ನಡೆಸಿದ ಜಸ್ಟೀಸ್ ಎ ಆನಂದ್ ವೆಕಂಟೇಶ್, ಮೋದಿ ರೋಡ್ ಶೋಗೆ ಅನುಮತಿ ನೀಡಿದೆ. ಇದೇ ವೇಳೆ ಪೊಲೀಸರು ಸಮಯ ಹಾಗೂ ಮಾರ್ಗ ಸೂಚಿಸಲು ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ರೋಡ್ ಶೋ ವೇಳೆ ಬೋರ್ಡ್ ಬ್ಯಾನರ್ಗೆ ಅವಕಾಶವಿಲ್ಲ ಎಂದು ಕೋರ್ಟ್ ಸೂಚಿಸಿದೆ. ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕೋರ್ಟ್ ಸೂಚನೆ ನೀಡಿದೆ.
ಕೊಯಂಬತ್ತೂರಿನಲ್ಲಿ ಬಿಜೆಪಿ ಆಯೋಜಿಸಿರುವ ಮೋದಿ ರೋಡ್ ಶೋ ಗೆ 1 ಲಕ್ಷಕ್ಕೂ ಅದಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಯಂಬತ್ತೂರು ಬಿಜೆಪಿ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.
ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡುತ್ತಾ ಎನ್ಡಿಎ..? ಹಿಂದಿ ರಾಜ್ಯಗಳಲ್ಲಿ ಮತ್ತೊಮ್ಮೆ ಮೋದಿ ಮೋಡಿ ಮಾಡ್ತಾರಾ..?