Asianet Suvarna News Asianet Suvarna News

ದೇಶವ್ಯಾಪಿ ಲಾಕ್‌ಡೌನ್‌ ಭಾಗಶಃ ಓಪನ್‌: ಏನೇನು ಶುರು?

ಲಾಕ್‌ ಭಾಗಶಃ ಓಪನ್‌!| ರಾಜ್ಯದಲ್ಲಿ ನಿರ್ಬಂಧ ನಾಳೆವರೆಗೆ ವಿಸ್ತರಣೆ| ದೇಶದಲ್ಲಿ ಹಾಟ್‌ಸ್ಪಾಟ್‌ ಅಲ್ಲದ ಕಡೆ ಇಂದಿನಿಂದ ನಿರ್ಬಂಧ ಸಡಿಲ| ರೈತರು, ಕಾರ್ಮಿಕರಿಗೆ ಅನುಕೂಲ| ದಿಲ್ಲಿ, ಮಹಾರಾಷ್ಟ್ರ ‘ಲಾಕ್‌’ ಬಿಗಿ| 

Lockdown relaxation in india Full list of activities allowed from Monday
Author
Bangalore, First Published Apr 20, 2020, 7:06 AM IST

ನವದೆಹಲಿ(ಏ.20): ಕೊರೋನಾ ವೈರಸ್‌ ನಿಗ್ರಹಕ್ಕಾಗಿ ದೇಶವ್ಯಾಪಿ ಘೋಷಿಸಿದ್ದ ಲಾಕ್‌ಡೌನ್‌ಗೆ ಕೆಲವೊಂದು ವಿನಾಯ್ತಿ ನೀಡಿ ಕೇಂದ್ರ ಸರ್ಕಾರ ಈ ಹಿಂದೆ ಹೊರಡಿಸಿದ್ದ ಆದೇಶ ಸೋಮವಾರದಿಂದ ಜಾರಿಗೆ ಬರಲಿದೆ. ಹಾಟ್‌ಸ್ಪಾಟ್‌ ಅಲ್ಲದ ಪ್ರದೇಶಗಳಲ್ಲಿ ರೈತರು, ಕಾರ್ಮಿಕರು, ಕೆಳಸ್ತರದ ಕೋಟ್ಯಂತರ ನೌಕರರಿಗೆ ಉದ್ಯೋಗ ಸಿಗುವಂತಹ ಕೆಲಸಗಳು ವಿನಾಯ್ತಿ ಅವಧಿಯಲ್ಲಿ ಪುನಾರಂಭವಾಗಲಿದೆ. ಹೀಗಾಗಿ ಹೆಚ್ಚೂ ಕಡಿಮೆ ಒಂದು ತಿಂಗಳಿನಿಂದ ಸ್ತಬ್ಧಗೊಂಡಿದ್ದ ದೇಶದ ಆರ್ಥಿಕ ಚಟುವಟಿಕೆಗಳಿಗೆ ಮತ್ತೆ ಸಣ್ಣಮಟ್ಟದಲ್ಲಿ ಚಾಲನೆ ಸಿಗಲಿದೆ.

ಆದರೆ ಏ.20ರಿಂದ ಜಾರಿಗೆ ಬರುತ್ತಿರುವುದು ಭಾಗಶಃ ವಿನಾಯ್ತಿ ಮಾತ್ರ. ಅದು ಕೂಡಾ ಹೆಚ್ಚಿನ ಕೊರೋನಾ ದಾಖಲಾಗದ ಶ್ವೇತ ವಲಯ ಮತ್ತು ಯಾವುದೇ ಪ್ರಕರಣ ದಾಖಲಾಗದ ಹಸಿರು ವಲಯಗಳಲ್ಲಿ ಮಾತ್ರ. ಇನ್ನು ಹೆಚ್ಚಿನ ಪ್ರಕರಣ ಬೆಳಕಿಗೆ ಬಂದ ಕೆಂಪು ವಲಯದಲ್ಲಿ ತೀರಾ ಅಗತ್ಯವಾದ ಕೆಲ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳ ಮೇಲೆ ಹಿಂದಿನಂತೆ ನಿರ್ಬಂಧ ಮುಂದುವರೆಯಲಿದೆ. ಜೊತೆಗೆ ಅಗತ್ಯ ಬಿದ್ದರೆ ಈ ನಿಯಮಗಳನ್ನು ಇನ್ನಷ್ಟುಕಠಿಣಗೊಳಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಕೇವಲ 6 ಹೊಸ ಕೇಸು, 10 ದಿನದಲ್ಲೇ ಅತಿ ಕಡಿಮೆ!

ಈ ನಡುವೆ ಹೆಚ್ಚಿನ ಸೋಂಕು ಮತ್ತು ಸಾವು ದಾಖಲಾದ ಮಹಾರಾಷ್ಟ್ರ, ದೆಹಲಿ, ತೆಲಂಗಾಣ ರಾಜ್ಯಗಳು ವಿನಾಯ್ತಿ ನೀಡಲು ನಿರಾಕರಿಸಿವೆ. ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಇದುವರೆಗೆ ಜಾರಿಯಲ್ಲಿದ್ದ ನಿಯಂತ್ರಣ ಕ್ರಮಗಳನ್ನು ಮುಂದುವರೆಸುವುದಾಗಿ ಘೋಷಿಸಿವೆ. ಉಳಿದಂತೆ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರ ಘೋಷಿಸಿದ್ದ ವಿನಾಯ್ತಿಗಳನ್ನು ಯಥಾವತ್ತು ಜಾರಿಗೆ ತರಲು ನಿರ್ಧರಿಸಿವೆ.

ವಿನಾಯ್ತಿ ವೇಳೆ ಮುಖ್ಯವಾಗಿ ಕೃಷಿ ಚಟುವಟಿಕೆ, ಕೃಷಿಗೆ ಬೇಕಾದ ವಸ್ತುಗಳ ಖರೀದಿ, ಉಪಕರಣಗಳ ದುರಸ್ತಿಗೆ ಅವಕಾಶ, ರಸಗೊಬ್ಬರ, ಕೀಟನಾಶಕ, ಬೀಜಗಳ ಉತ್ಪಾದನೆ ಹಾಗೂ ಮಾರಾಟ, ಸಮುದ್ರ ಮತ್ತು ಒಳನಾಡು ಮೀನುಗಾರಿಕೆ, ಇ- ಕಾಮರ್ಸ್‌ ವ್ಯವಹಾರ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ನೀರಾವರಿ ಯೋಜನೆ, ಕಟ್ಟಡ, ಕೈಗಾರಿಕಾ ಯೋಜನೆಗಳ ನಿರ್ಮಾಣ ಕಾಮಗಾರಿ, ಕಾಫಿ, ಚಹಾ, ರಬ್ಬರ್‌ ತೋಟ, ಉದ್ಯೋಗ ಖಾತ್ರಿ, ಗಣಿಗಾರಿಕೆ, ಅಂಗನವಾಡಿ, ಬುದ್ಧಿಮಾಂದ್ಯರ ಶಿಕ್ಷಣ ಸಂಸ್ಥೆಗಳು, ಎಲೆಕ್ಟ್ರಿಷಿಯನ್‌, ಪ್ಲಂಬರ್‌, ಕಾರ್ಪೆಂಟರ್‌, ಮೋಟರ್‌ ಮೆಕಾನಿಕ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಮಾ.25ರಂದು ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು 14 ದಿನಗಳ ಲಾಕ್‌ಡೌನ್‌ ಘೋಷಿಸಿದ್ದರು. ಬಳಿಕ ಇದನ್ನು ಮೇ 3ರವರೆಗೂ ವಿಸ್ತರಿಸಲಾಗಿತ್ತು. ಆದರೆ 40 ದಿನಗಳ ಕಾಲ ಪೂರ್ಣ ಪ್ರಮಾಣದಲ್ಲಿ ದೇಶವ್ಯಾಪಿ ಲಾಕ್‌ಡೌನ್‌, ಆರ್ಥಿಕತೆಗೆ ಭಾರೀ ಹೊಡೆತ ನೀಡುವ ಕಾರಣ, ಹೆಚ್ಚಿನ ಸೋಂಕು ಕಾಣಿಸಿಕೊಳ್ಳದ ಪ್ರದೇಶಗಳಲ್ಲಿ ಕೆಲ ವಿನಾಯ್ತಿಗೆ ರಾಜ್ಯ ಸರ್ಕಾರಗಳು ಮನವಿ ಮಾಡಿದ್ದವು. ಅದರಂತೆ ಏ.20ರಿಂದ ಕೆಲವೊಂದು ಸೇವೆ, ಚಟುವಟಿಕೆಗಳ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಬ್ರೆಕಿಂಗ್: ಪಾದರಾಯನಪುರದಲ್ಲಿ ಪುಂಡಾಟ; ಪೊಲೀಸರು, ಆರೋಗ್ಯ ಸಿಬ್ಬಂದಿ ಮೇಲೆ ಎರಗಿದ್ರು!

ಏನೇನು ಶುರು?

- ಎಲ್ಲ ರೀತಿಯ ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಚಟುವಟಿಕೆ

- ರಸ್ತೆ, ನೀರಾವರಿ, ಗ್ರಾಮೀಣ ಕಟ್ಟಡ, ಕೈಗಾರಿಕೆ, ಆಹಾರ ಸಂಸ್ಕರಣೆ

- ಔಷಧ, ವೈದ್ಯಕೀಯ ಉಪಕರಣಗಳ ಉತ್ಪಾದನೆ, ಪಶು ಆಸ್ಪತ್ರೆ

- ಇ-ಕಾಮರ್ಸ್‌, ಕೊರಿಯರ್‌, ವಿಮೆ, ಸರ್ಕಾರಿ ಸೇವೆಗಳ ಕಾಲ್‌ಸೆಂಟರ್‌

- ಎಲೆಕ್ಟ್ರಿಷಿಯನ್‌, ಪ್ಲಂಬರ್‌, ಕಾರ್ಪೆಂಟರ್‌, ಮೋಟರ್‌ ಮೆಕ್ಯಾನಿಕ್‌

- 2 ಚಾಲಕರು, 1 ಕ್ಲೀನರ್‌ ಇರುವ ಟ್ರಕ್‌, ಕೋಲ್ಡ್‌ ಸ್ಟೋರೇಜ್‌, ಉಗ್ರಾಣ

- ಸಾಮಾಜಿಕ ಅಂತರ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಉದ್ಯೋಗ ಖಾತ್ರಿ

- ಅಗತ್ಯ ಸೇವೆಗೆ ಕಾರಲ್ಲಿ ಇಬ್ಬರು, ಬೈಕ್‌ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ

ಅಗತ್ಯ ವಸ್ತು ಮಾತ್ರ ಆನ್‌ಲೈನಲ್ಲಿ ಮಾರಾಟ

ಇ-ಕಾಮರ್ಸ್‌ ಕಂಪನಿಗಳು ಎಲೆಕ್ಟ್ರಾನಿಕ್‌ ಉಪಕರಣ, ಬಟ್ಟೆ, ಸ್ಟೇಷನರಿ ಮಾರಾಟ ಮಾಡಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಅದನ್ನು ರದ್ದುಗೊಳಿಸಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.

Follow Us:
Download App:
  • android
  • ios