ಚಾಕೋಲೇಟ್ ನೀಡಿದ ಯೋಧರಿಗೆ ಮಕ್ಕಳ ಖಡಕ್ ಸೆಲ್ಯೂಟ್: ಪುಟಾಣಿಗಳ ವಿಡಿಯೋ ವೈರಲ್
ಪುಟ್ಟ ಬಾಲಕರಿಬ್ಬರು ಚಾಕೋಲೇಟ್ ನೀಡಿದ ಯೋಧರಿಗೆ ಖಡಕ್ ಆಗಿ ಸೆಲ್ಯೂಟ್ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ಸೈನಿಕರ ಬಗ್ಗೆ ಪುಟ್ಟ ಮಕ್ಕಳಲ್ಲೂ ಇತ್ತೀಚೆಗೆ ಗೌರವ ದೇಶಭಕ್ತಿ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಪುಟಾಣಿ ಬಾಲಕಿಯೊಬ್ಬಳು ವಿಮಾನ ನಿಲ್ದಾಣವೊಂದರಲ್ಲಿ ನಿಂತಿದ್ದ ಯೋಧರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಪುಟ್ಟ ಬಾಲಕಿಗೆ ಎಳವೆಯಲ್ಲೇ ದೇಶಭಕ್ತಿ ತುಂಬಿದ ಪೋಷಕರ ಸಂಸ್ಕಾರಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಅದೆ ರೀತಿ ಈಗ ಪುಟ್ಟ ಬಾಲಕರಿಬ್ಬರು ಚಾಕೋಲೇಟ್ ನೀಡಿದ ಯೋಧರಿಗೆ ಖಡಕ್ ಆಗಿ ಸೆಲ್ಯೂಟ್ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಈ ವಿಡಿಯೋವನ್ನು ನಿವೃತ್ತ ಯೋಧ ಶೌರ್ಯ ಚಕ್ರ ಪ್ರಶಸ್ತಿ ಪಡೆದಿರುವ ಪವನ್ ಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಬಾಲಕರಿಬ್ಬರು ರಸ್ತೆ ಬದಿ ನಿಂತಿದ್ದು, ಇವರ ಮುಂದೆ ಸಾಗುತ್ತಿದ್ದ ಸೇನಾ ವಾಹನವೊಂದು ಇವರನ್ನು ನೋಡಿ ನಿಂತಿದ್ದು, ಆ ವಾಹನದಲ್ಲಿದ್ದ ಸೈನಿಕರು ಈ ಪುಟ್ಟ ಮಕ್ಕಳಿಗೆ ಚಾಕೋಲೇಟ್ನ್ನು ನೀಡುತ್ತಾರೆ. ಚಾಕೋಲೇಟ್ ಸ್ವೀಕರಿಸಿದ ಈ ಪುಟ್ಟ ಮಕ್ಕಳು ಸೇನಾ ವಾಹನ ಅಲ್ಲಿಂದ ಹೊರಡುವ ವೇಳೆ ಯೋಧರಿಗೆ ಗೌರವಯುತವಾಗಿ ಸೆಲ್ಯೂಟ್ ಹೊಡೆದು ಗೌರವ ಅರ್ಪಿಸಿದ್ದಾರೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 8 ಸಾವಿರಕ್ಕೂ ಹೆಚ್ಚು ಜನಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಪ್ರಭಾವಶಾಲಿಯಾದ ಸೆಲ್ಯೂಟ್ ಎಂದು ಮಕ್ಕಳ ದೇಶಪ್ರೇಮವನ್ನು ನೋಡುಗರು ಕೊಂಡಾಡಿದ್ದಾರೆ.
ಈ ಪುಟ್ಟ ಮಕ್ಕಳು ದೇಶದಲ್ಲಿರುವ ವಯಸ್ಕ ವ್ಯಕ್ತಿಗಳಿಗಿಂತ ಹೆಚ್ಚಿನ ದೇಶಪ್ರೇಮವನ್ನು ಹೊಂದಿದ್ದಾರೆ ಎಂದು ಈ ವಿಡಿಯೋಗೆ ಚೀನಾರ್ ಕಾರ್ಪ್ಸ್ನಲ್ಲಿ ಕಮಾಂಡರ್ ಆಗಿರುವ ಯೋಧರೊಬ್ಬರು ಕಾಮೆಂಟ್ ಮಾಡಿದ್ದಾರೆ. ಲೆಫ್ಟಿನೆಂಟ್ ಜನರಲ್ ಆಗಿರುವ ಸತೀಶ್ ದುವಾ ಅವರು ಕೂಡ ಕಾಮೆಂಟ್ ಮಾಡಿದ್ದು,ಇದೊಂದು ಸ್ಮಾರ್ಟ್ ಆಗಿರುವಂತಹ ಸೆಲ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇದೊಂದು ಆಕರ್ಷಕವಾದ ಸೆಲ್ಯೂಟ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಕ್ಕಳಲ್ಲಿ ದೇಶಪ್ರೇಮ ಬಿತ್ತುವುದು ಹೇಗೆ?
ಮಕ್ಕಳಿಗೆ ರಾಷ್ಟ್ರೀಯ ಹಬ್ಬಗಳ ಮಹತ್ವ,ದೇಶಭಕ್ತಿಯ ಬಗ್ಗೆ ತಿಳಿಸುವುದು ಯಾರು? ಎಂಬ ಪ್ರಶ್ನೆ ಇಂದಿನ ಪೋಷಕರಲ್ಲಿ ಮೂಡಬಹುದು. ಶಾಲೆಗಳಲ್ಲಿ ಈ ಕೆಲಸ ನಡೆಯುತ್ತೋ,ಇಲ್ಲವೋ ಗೊತ್ತಿಲ್ಲ. ಆದರೆ,ಮನೆಯಲ್ಲಿ ನೀವೇ ಏಕೆ ಈ ಕೆಲಸ ಮಾಡಬಾರದು? ಸ್ವಾತಂತ್ರ್ಯ ಹೋರಾಟಗಾರರ ಕಥೆ ಹೇಳಿ: ಮಕ್ಕಳಿಗೆ ಕಥೆ ಹೇಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಹೀಗಿರುವಾಗ ನೀತಿಕಥೆಗಳ ಜೊತೆಗೆ ಸ್ವಾತಂತ್ರ್ಯಹೋರಾಟ ಹಾಗೂ ಹೋರಾಟಗಾರರ ಕುರಿತ ಪುಟ್ಟ ಪುಟ್ಟ ಕಥೆಗಳನ್ನು ಮಕ್ಕಳಿಗೆ ಹೇಳಿ.ಇದರಿಂದ ಮಕ್ಕಳಿಗೆ ಸ್ವಾತಂತ್ರ್ಯಹೋರಾಟಗಾರರ ಜೀವನ, ಆದರ್ಶ ಹಾಗೂ ಶೌರ್ಯದ ಪರಿಚಯವಾಗುತ್ತದೆ. ದೇಶಭಕ್ತಿ ಎಂದರೆ ಏನು ಎಂಬುದು ಕ್ರಮೇಣ ಅರ್ಥವಾಗುತ್ತದೆ.
ಈ ಗೀತೆ ಕೇಳಿ ಯೋಧರಿಗೊಂದು ನಮನ ಸಲ್ಲಿಸಿ.. ನನ್ನ ಭಾರತ
ದೇಶಕ್ಕಾಗಿ ಪ್ರಾಣತೆತ್ತ ವೀರರ ಬಗ್ಗೆ ತಿಳಿಸಿ: ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಬಗ್ಗೆ ಮಕ್ಕಳಿಗೆ ತಿಳಿಸಿ. ಸೈನಿಕರು ದೇಶರಕ್ಷಣೆಗಾಗಿ ಶತ್ರುಗಳ ವಿರುದ್ಧ ಹೇಗೆ ಹೋರಾಟ ನಡೆಸುತ್ತಾರೆ ಎಂಬುದನ್ನು ತಿಳಿಸುವ ಜೊತೆಗೆ ಅವರ ತ್ಯಾಗ, ಬಲಿದಾನಗಳ ಬಗ್ಗೆಯೂ ಮಾಹಿತಿ ನೀಡಿ.ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರ ಸಾಹಸಗಾಥೆಗಳನ್ನು ಹೇಳಿ. ದೇಶದ ಅಭಿವೃದ್ಧಿಗಾಗಿ ದುಡಿದ ಮಹಾನೀಯರ ಜೀವನಚರಿತ್ರೆಗಳನ್ನು ಮಕ್ಕಳಿಗೆ ತಂದು ಕೊಟ್ಟು ಓದಲು ಪ್ರೇರೇಪಿಸಿ.ಇದರಿಂದ ದೇಶದ ಅಭಿವೃದ್ಧಿಗೆ ನಾನು ಕೂಡ ಏನಾದರೂ ಮಾಡಬೇಕೆಂಬ ದುಡಿತ ಮಕ್ಕಳ ಮನಸ್ಸಿನಲ್ಲಿ ಬೆಳೆಯುತ್ತದೆ.
ನಮ್ಮ ದೇಶದ ಇತಿಹಾಸದ ಬಗ್ಗೆಯೂ ಮಕ್ಕಳಿಗೆ ತಿಳಿ ಹೇಳುವ ಕೆಲಸವಾಗಬೇಕು.ಶಾಲೆಯ ಪಠ್ಯಪುಸ್ತಕದಲ್ಲಿ ದೇಶದ ಇತಿಹಾಸದ ಬಗ್ಗೆ ಸಾಕಷ್ಟು ಮಾಹಿತಿಯಿರಬಹುದು.ಆದರೆ, ಅಲ್ಲಿರದ ಎಷ್ಟೋ ಸಂಗತಿಗಳಿವೆ.ಅದನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಿ.ಮಕ್ಕಳ ವಯಸ್ಸಿಗೆ ಅನುಗುಣವಾಗಿ ಪುರಾಣ,ಭಾರತವನ್ನಾಳಿದ ರಾಜ-ಮಹಾರಾಜರ ಕಥೆಗಳನ್ನು ಹೇಳಿ.