ಕುಂಭಮೇಳದ ಮೂಲಕ ಖ್ಯಾತಿ ಗಳಿಸಿದ್ದ ಮೊನಾಲಿಸಾ, ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ಕೇರಳದಲ್ಲಿ ವಿವಾಹವಾಗಿದ್ದಾರೆ. ಕುಟುಂಬದ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿದ್ದ ಈ ಜೋಡಿ, ತಿರುವನಂತಪುರಂನ ದೇವಸ್ಥಾನವೊಂದರಲ್ಲಿ ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಿರುವನಂತಪುರಂ (ಮಾ.11): ಪ್ರಯಾಗ್‌ರಾಜ್ ಕುಂಭಮೇಳದ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಮನೆಮಾತಾಗಿದ್ದ ಇಂದೋರ್‌ನ ಸುಂದರಿ ಮೋನಿ ಭೋಂಸ್ಲೆ ಅಲಿಯಾಸ್ ಮೊನಾಲಿಸಾ, ಕೊನೆಗೂ ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ಕೇರಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುವನಂತಪುರಂನ ಅರುಮಾನೂರು ಶ್ರೀ ನೈನಾರ್ ದೇವಸ್ಥಾನದಲ್ಲಿ ಇವರ ವಿವಾಹ ಕಾರ್ಯಕ್ರಮ ನೆರವೇರಿದೆ. ಫರ್ಮಾನ್‌ ಖಾನ್‌ ಜೊತೆಗಿನ ಪ್ರೀತಿಗೆ ಪೋಷಕರು ಒಪ್ಪುತ್ತಿಲ್ಲ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ ದಿನವೇ, ದಿಢೀರ್‌ ಆಗಿ ಮೋನಾಲಿಸಾ ಹಾಗೂ ಫರ್ಮಾನ್‌ ಖಾನ್‌ ಅವರ ವಿವಾಹ ನೆರವೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸ್ ಠಾಣೆಯಿಂದ ಮದುವೆ ಮಂಟಪಕ್ಕೆ!

ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಮತ್ತು ಮಹಾರಾಷ್ಟ್ರದ ಫರ್ಮಾನ್ ಖಾನ್ ಇಂದು ಬೆಳಿಗ್ಗೆ ತಿರುವನಂತಪುರಂನ ತಂಬನೂರು ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ಕೋರಿದ್ದರು. ತನ್ನ ತಂದೆ ಬೇರೊಬ್ಬರ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದಾರೆ ಮತ್ತು ಅನ್ಯಧರ್ಮದ ಯುವಕನನ್ನು ಪ್ರೀತಿಸುತ್ತಿರುವುದಕ್ಕೆ ಕುಟುಂಬ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಮೊನಾಲಿಸಾ ದೂರಿನಲ್ಲಿ ತಿಳಿಸಿದ್ದರು. ತಾನು ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದ ಸಂದರ್ಭವನ್ನು ಬಳಸಿಕೊಂಡು, ತನಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು.

ಕುಟುಂಬದ ವಿರೋಧದ ನಡುವೆಯೂ ಈ ಪ್ರೇಮಿಗಳು ಒಂದಾಗಲು ಕೇರಳದ ಆಡಳಿತಾರೂಢ ನಾಯಕರು ಸಾಥ್ ನೀಡಿದರು. ಅರುಮಾನೂರು ದೇವಸ್ಥಾನದಲ್ಲಿ ನಡೆದ ವಿವಾಹಕ್ಕೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್‌ಕುಟ್ಟಿ ಮತ್ತು ರಾಜ್ಯಸಭಾ ಸಂಸದ ಎ.ಎ. ರಹೀಮ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು. ಕುಂಭಮೇಳದಲ್ಲಿ ವೈರಲ್ ಆಗಿದ್ದ ಈ ಹುಡುಗಿ, ಸರಿಯಾಗಿ ಕುಂಭ ಮಾಸದಲ್ಲೇ ಮದುವೆಯಾಗುತ್ತಿರುವುದು ಈ ವಿವಾಹದ ವಿಶೇಷತೆಯಾಗಿತ್ತು.

Scroll to load tweet…

ಇದೇ ಅಸಲಿ 'ಕೇರಳ ಸ್ಟೋರಿ': ಗಣ್ಯರ ಪ್ರತಿಕ್ರಿಯೆ

ಮದುವೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಎ.ಎ. ರಹೀಮ್, "ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎನ್ನುತ್ತಾರೆ, ಆ ಸ್ವರ್ಗವೇ ಈ ಕೇರಳ. ಯಾರನ್ನಾದರೂ ಮದುವೆಯಾಗುವ ಹಕ್ಕನ್ನು ಭಾರತದ ಸಂವಿಧಾನ ನೀಡಿದೆ. ಅಂತಹ ಸ್ವಾತಂತ್ರ್ಯ ಕೇರಳದಲ್ಲಿ ಮಾತ್ರ ಸಾಧ್ಯ. ಈ ಜೋಡಿಯನ್ನು ಅಭಿನಂದಿಸಲು ಸಿಪಿಎಂ ಇಲ್ಲಿಗೆ ಬಂದಿದೆ" ಎಂದರು. ಇದೇ ವೇಳೆ ಸಚಿವ ವಿ. ಶಿವನ್‌ಕುಟ್ಟಿ ಪ್ರತಿಕ್ರಿಯಿಸಿ, "ಇದೇ ನಿಜವಾದ ಕೇರಳ ಸ್ಟೋರಿ" ಎಂದು ಬಣ್ಣಿಸಿದರು.