ನಿಮಿಷಾ ಪ್ರಿಯಾ ಕುಟುಂಬದ ಕೋರಿಕೆಯ ಮೇರೆಗೆ, ವಿದೇಶಾಂಗ ಸಚಿವಾಲಯದ ಮೂಲಕ $40,000 ಪರಿಹಾರವನ್ನು ಕೊಲೆಯಾದವರ ಕುಟುಂಬಕ್ಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ದೆಹಲಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆ ಕುರಿತು ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಸಂಸದ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್ ಉತ್ತರಿಸಿದ್ದಾರೆ. ನಿಮಿಷ ಪ್ರಿಯ ಕುಟುಂಬಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ರೀತಿಯ ಸಹಾಯ ಮಡಲಾಗಿದೆ. ನಿಮಿಷಾ ಪ್ರಿಯಾ ಕುಟುಂಬದ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯದ ಮೂಲಕ $40,000 ಪರಿಹಾರವನ್ನು ಕೊಲೆಯಾದವರ ಕುಟುಂಬಕ್ಕೆ ನೀಡಲಾಗಿದೆ ಮುಂದಿನ ಕ್ರಮಗಳಿಗಾಗಿ ನಿಮಿಷಾ ಪ್ರಿಯಾ ಕುಟುಂಬ ಮತ್ತು ಕೊಲೆಯಾದವರ ಕುಟುಂಬದ ನಡುವೆ ಚರ್ಚೆ ಮುಂದುವರಿದಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ನಿಮಿಷಾ ಪ್ರಿಯಾ ಅವರ ಬಿಡುಗಡೆಯು ಕೊಲೆಯಾದ ವ್ಯಕ್ತಿಯ ಕುಟುಂಬ ಮತ್ತು ನಿಮಿಷಾ ಪ್ರಿಯಾ ಕುಟುಂಬದ ನಡುವಿನ ವಿಷಯ ಎಂದು ಹೇಳಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈ ತೊಳೆದುಕೊಂಡಿದೆ ಎಂದು ಸಿಪಿಐನ ಸಂಸದ ಜಾನ್ ಬ್ರಿಟ್ಟಾಸ್ ಆರೋಪ ಮಾಡಿದ್ದರು ಇದಕ್ಕೆ ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಉತ್ತರಿಸಿದ್ದು, ನಿಮಿಷಾ ಪ್ರಿಯಾ ಕುಟುಂಬದ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯದ ಮೂಲಕ $40,000 ಪರಿಹಾರವನ್ನು ಕೊಲೆಯಾದವರ ಕುಟುಂಬಕ್ಕೆ ನೀಡಲಾಗಿದೆ. ನಿರ್ಬಂಧದ ನಡುವೆಯೂ ಕೂಡ ನಿಮಿಷಾ ಪ್ರಿಯಾ ಅವರ ತಾಯಿಗೆ ಯೆಮೆನ್‌ಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಚರ್ಚೆಗಾಗಿ ಪವರ್ ಆಫ್ ಅಟಾರ್ನಿಯನ್ನು ನೇಮಿಸಲಾಗಿದೆ. ವಿದೇಶಾಂಗ ಸಚಿವಾಲಯದ ನಿಧಿಯನ್ನು ಬಳಸಿಕೊಂಡು ವಕೀಲರ ಸಹಾಯವನ್ನು ಖಚಿತಪಡಿಸಲಾಗಿದೆ. ಆಕ್ಷನ್ ಕೌನ್ಸಿಲ್ ಸಂಗ್ರಹಿಸಿದ ಬ್ಲಡ್ ಮನಿಯನ್ನು ಯೆಮೆನ್‌ಗೆ ತಲುಪಿಸಲು ಸಹಾಯ ಮಾಡಲಾಗಿದೆ. ಆದರೆ ಬಿಡುಗಡೆ ಸಾಧ್ಯವಾಗಬೇಕಾದರೆ ಎರಡೂ ಕುಟುಂಬಗಳ ನಡುವಿನ ಚರ್ಚೆ ಯಶಸ್ವಿಯಾಗಬೇಕು ಎಂದು ಸಚಿವರು ಹೇಳಿದ್ದಾರೆ.

ಎಚ್ಚರಿಕೆಯಿಂದ ನಿರ್ವಹಿಸಬೇಕಾದ ವಿಷಯ ಇದಾಗಿದ್ದು, ಅನಗತ್ಯ ಚರ್ಚೆಗಳು ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಅಡ್ಡಿಯಾಗಬಹುದು ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವರು ಇದೇ ವೇಳೆ ತಿಳಿಸಿದರು. ಈ ಮೂಲಕ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಜಾನ್ ಬ್ರಿಟ್ಟಾಸ್ ಆರೋಪಕ್ಕೆ ತಿರುಗೇಟು ನೀಡಿದರು. ಪ್ರಸ್ತುತ ಹೌತಿ ಉಗ್ರರ ನಿಯಂತ್ರಣದಲ್ಲಿರುವ ಉತ್ತರ ಯೆಮೆನ್‌ನಲ್ಲಿ ಈ ಅಪರಾಧ ನಡೆದಿದೆ. ನಿಮಿಷಾ ಪ್ರಿಯಾ ಇರುವ ಜೈಲು ಕೂಡ ಅವರ ನಿಯಂತ್ರಣದಲ್ಲಿದೆ. ಹೌತಿ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್ ನಾಯಕ ಮತ್ತು ಬಂಡಾಯ ಅಧ್ಯಕ್ಷ ಮೆಹದಿ ಅಲ್ ಮಶಾದ್ ಮರಣದಂಡನೆಗೆ ಅನುಮೋದನೆ ನೀಡಿದ್ದಾರೆ ಎಂದು ಯೆಮೆನ್ ಸ್ಪಷ್ಟಪಡಿಸಿದೆ. ಈ ಹಿಂದೆ, ಯೆಮೆನ್ ಅಧ್ಯಕ್ಷ ರಶಾದ್ ಅಲ್ ಅಲಿಮಿ ಮರಣದಂಡನೆಗೆ ಅನುಮೋದನೆ ನೀಡಿದ್ದಾರೆ ಮತ್ತು ಒಂದು ತಿಂಗಳೊಳಗೆ ಅದನ್ನು ಜಾರಿಗೊಳಿಸಲಾಗುವುದು ಎಂದು ವರದಿಗಳು ಬಂದಿದ್ದವು.

ಇದಕ್ಕೆ ದೆಹಲಿಯಲ್ಲಿರುವ ಯೆಮೆನ್ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದು, ನಿಮಿಷಾ ಪ್ರಿಯಾ ಅವರ ಮರಣದಂಡನೆಗೆ ಅಧ್ಯಕ್ಷರು ಅನುಮೋದನೆ ನೀಡಿಲ್ಲ ಮರಣದಂಡನೆಗೆ ಅನುಮೋದನೆ ನೀಡಿದ್ದು ಹೌತಿ ಸುಪ್ರೀಂ ಕೌನ್ಸಿಲ್ ಎಂದು ದೆಹಲಿಯಲ್ಲಿರುವ ಯೆಮೆನ್ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಯೆಮೆನ್ ಅಧ್ಯಕ್ಷರು ಮರಣದಂಡನೆಗೆ ಅನುಮೋದನೆ ನೀಡಿದ್ದಾರೆ ಎಂಬ ವರದಿಗಳಿಗೆ ರಾಯಭಾರ ಕಚೇರಿಯ ಪ್ರತಿಕ್ರಿಯೆ ಇದಾಗಿದೆ. ನಿಮಿಷಾ ಪ್ರಿಯಾ ಅವರ ಮರಣದಂಡನೆಗೆ ಅಧ್ಯಕ್ಷ ರಶಾದ್ ಅಲ್ ಅಲಿಮಿ ಅನುಮೋದನೆ ನೀಡಿಲ್ಲ ಎಂದು ಯೆಮೆನ್ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. 

2017ರ ಜುಲೈನಲ್ಲಿ ಬಂಧಿತರಾದ ನಿಮಿಷಾ ಪ್ರಿಯಾ ಅವರಿಗೆ 2020ರಲ್ಲಿ ಮರಣದಂಡನೆ ವಿಧಿಸಲಾಯಿತು. ನಿಮಿಷಾ ಪ್ರಿಯಾ ಸಲ್ಲಿಸಿದ ಎಲ್ಲಾ ಮೇಲ್ಮನವಿಗಳನ್ನು ತಿರಸ್ಕರಿಸಲಾಗಿದೆ. ಬ್ಲಡ್ ಮನಿಯ ಎರಡನೇ ಕಂತಿನ ಪಾವತಿ ವಿಳಂಬವಾದ ನಂತರ ಯೆಮೆನ್ ಅಧ್ಯಕ್ಷರು ಮರಣದಂಡನೆಗೆ ಅನುಮೋದನೆ ನೀಡಿದ್ದಾರೆ ಎಂಬ ವರದಿಗಳು ಪ್ರಸಾರವಾಗಿದ್ದವು. ತಮ್ಮ ಉದ್ಯಮ ಪಾಲುದಾರನಾದ ಯಮನ್ ದೇಶದ ಪ್ರಜೆಯನ್ನು ಹತ್ಯೆ ಮಾಡಿದ ಕಾರಣಕ್ಕೆ ನಿಮಿಷಪ್ರಿಯಾಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.