Asianet Suvarna News Asianet Suvarna News

ಕೇರಳದಲ್ಲಿ ಗಜೇಂದ್ರನ ಹಾವಳಿ: ಬಸ್ ಅಡ್ಡಗಟ್ಟಿ ಮೇಲೆತ್ತಲು ನೋಡಿದ ಕಬಾಲಿ

ಒಂಟಿ ಸಲಗ ಕಬಾಲಿ ಈಗ ಕೇರಳ ಸಾರಿಗೆ ಸಂಸ್ಥೆಯ ಬಸ್ ಮೇಲೆ ದಾಳಿಗೆ ಮುಂದಾಗಿದ್ದು, ಮಕ್ಕಳ ಆಟದ ಸಾಮಾಗ್ರಿಯಂತೆ ಬಸ್‌ನ್ನು ತನ್ನ ಸೊಂಡಿಲಿನಲ್ಲಿ ಮೇಲೆತ್ತಲು ನೋಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

kerala Elephant kabali create traffice jam, tried lift a bus in Athirappilly-Valparai ghat section akb
Author
First Published Nov 24, 2022, 3:02 PM IST

ಕೇರಳದಲ್ಲಿ ಆನೆ ಕಬಾಲಿ ಹಾವಳಿ ಮುಂದುವರೆದಿದೆ. ವಾರಗಳ ಹಿಂದಷ್ಟೇ ಈ ಕಬಾಲಿಯ ಅವಾಂತರಕ್ಕೆ ಸಿಲುಕಿ ಬಸ್ ಚಾಲಕ ಸುಮಾರು ಎಂಟು ಕಿಲೋ ಮೀಟರ್‌ವರೆಗೆ ಬಸ್‌ನ್ನು ಹಿಮ್ಮುಖವಾಗಿ ಚಲಾಯಿಸಿ ಸಾಹಸ ಮೆರದಿದ್ದರು. ಈ ಘಟನೆ ಮಾಸುವ ಮುನ್ನವೇ ಈ ಒಂಟಿ ಸಲಗ ಕಬಾಲಿ ಈಗ ಕೇರಳ ಸಾರಿಗೆ ಸಂಸ್ಥೆಯ ಬಸ್ ಮೇಲೆ ದಾಳಿಗೆ ಮುಂದಾಗಿದ್ದು, ಮಕ್ಕಳ ಆಟದ ಸಾಮಾಗ್ರಿಯಂತೆ ಬಸ್‌ನ್ನು ತನ್ನ ಸೊಂಡಿಲಿನಲ್ಲಿ ಮೇಲೆತ್ತಲು ನೋಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಈ ಒಂಟಿ ಸಲಗ ಅತಿರಪಲ್ಲಿ-ವಲಪರೈ (Athirappilly-Valparai) ಘಾಟ್ ರಸ್ತೆಯಲ್ಲಿ ಅಡ್ಡಾಡುತ್ತಿದ್ದು, ಸದ್ಯಕ್ಕೆ ಸಮಾಧಾನಗೊಳ್ಳುವ ಮೂಡ್‌ನಲ್ಲಂತೂ ಇಲ್ಲ. ಅಕ್ಟೋಬರ್ ತಿಂಗಳಿನಿಂದಲೂ ಇದು ಈ ಘಾಟ್ ಸೆಕ್ಷನ್‌ನ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಬೆನ್ನಟ್ಟುವ ಕೆಲಸ ಮಾಡ್ತಿದೆ. ಹಾಗೆಯೇ ನಿನ್ನೆ ರಾತ್ರಿಯೂ ಇದು ವಾಹನಗಳ ಮೇಲೆ ತನ್ನ ಪ್ರತಾಪ ತೋರಿದೆ. ಮಲಕ್ಕಪ್ಪರ ಪ್ರದೇಶಕ್ಕೆ ತೆರಳುತ್ತಿದ್ದ ಬಸ್‌ನ ಮೇಲೆ ಈ ಕಬಾಲಿ ದಾಳಿ ಮಾಡಿದ್ದು, ತನ್ನ ಸೊಂಡಿಲಿನಿಂದ ಆ ಬಸ್‌ನ್ನು ಮೇಲೆತ್ತಲು ನೋಡಿದೆ. ಎರಡು ಗಂಟೆಗೂ ಹೆಚ್ಚು ಹೊತ್ತುಗಳ ಕಾಲ ಬಸ್‌ನ್ನು ಆಟದ ಸಾಮಾನಿನಂತೆ ಮೇಲೆ ಕೆಳಗೆ ಮಾಡಲು ನೋಡಿದೆ. ಆದರೆ ಬಸ್‌ನಲ್ಲಿದ್ದ ಯಾರಿಗೂ ಇದರಿಂದ ಯಾವುದೇ ಹಾನಿಯಾಗಿಲ್ಲ. 

ಆನೆಗೂ ಹೆದರದೇ, ರಿವರ್ಸ್ ಡ್ರೈವ್ ಮಾಡಿದ ಚಾಲಕ ಧೈರ್ಯಕ್ಕೆ ಭೇಷ್ ಎನ್ನಲೇ ಬೇಕು!

ಮೊದಲು ಅಂಬಲಪ್ಪರದ ಮೊದಲ ಹೇರ್‌ಪಿನ್ ತಿರುವಿನಲ್ಲಿ ಇದು ಬಸ್‌ನ್ನು ಅಡ್ಡಗಟ್ಟಿದ್ದರಿಂದ ಎರಡು ಗಂಟೆ ತಡವಾಗಿ ರಾತ್ರಿ 11 ಗಂಟೆಗೆ ಬಸ್‌ ಮಲಕ್ಕಪ್ಪರ ತಲುಪಿದೆ. ಅಂಬಲಪ್ಪರದ ಮೊದಲ ಹೇರ್‌ಪಿನ್ ತಿರುವು ಈ ಒಂಟಿ ಸಲಗ ಕಬಾಲಿಯ ರೋಡ್‌ ಶೋ ಕಾರಣಕ್ಕೆ ಈ ಹಿಂದೆಯೂ ಹಲವು ಬಾರಿ ಸುದ್ದಿಯಲ್ಲಿತ್ತು. ಕೇರಳದ ಅರಣ್ಯ ಇಲಾಖೆ ಸಿಬ್ಬಂದಿ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ (Rajnikanth) ಅವರ ಸಿನಿಮಾ ಕಬಾಲಿಯ ಹೆಸರಿಟ್ಟಿದ್ದರು. ಎರಡು ವಾರಗಳ ಹಿಂದೆ ಈ ಕಬಾಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊರಗಿದ್ದಾಗ ಅರಣ್ಯ ಇಲಾಖೆಗೆ ಸೇರಿದ ಜೀಪೊಂದರ ಮೇಲೆ ದಾಳಿ ನಡೆಸಿ ಚೆಂಡಾಟವಾಡಿದ್ದು, ಅದನ್ನು ಸಂಪೂರ್ಣವಾಗಿ ಜಖಂಗೊಳಿಸಿತ್ತು. ಶೋಲಯರ್ ಪವರ್ ಹೌಸ್‌ನ (Sholayar power house) ಮೇಲೆಯೂ ಆನೆ ದಾಳಿಗೆ ಯತ್ನಿಸಿದ್ದು, ಹೀಗಾಗಿ ಕೇರಳ ರಾಜ್ಯದ ವಿದ್ಯುತ್ ಪ್ರಸರಣ ನಿಗಮಕ್ಕೆ (KSEB) ಈ ಪವರ್‌ ಹೌಸ್ ಸುತ್ತಲೂ ಬೇಲಿ ನಿರ್ಮಿಸುವಂತೆ ಒತ್ತಾಯ ಕೇಳಿ ಬಂದಿದೆ. 

ಆನೆಗಳ ಮದವೇರುವ (musth) ಸಮಯ ಇದಾಗಿದ್ದು, ಈ ಸಮಯದಲ್ಲಿ ಗಂಡು ಆನೆಗಳಲ್ಲಿ ಸಂತಾನೋತ್ಪತಿ ಹಾರ್ಮೋನ್‌ಗಳು ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ. ಇದರ ಅವಧಿ ಸುಮಾರು ಮೂರು ತಿಂಗಳ ಕಾಲ ಇದ್ದು, ಇದು ಶಾಂತ ಸ್ವಭಾವದ ಆನೆಗಳು ಕೂಡ ಆಕ್ರಮಣಕಾರಿಯಾಗುವಂತೆ ಮಾಡುತ್ತದೆ. ಇದರಿಂದ ಶಾಂತ ಸ್ವಭಾವದ ಕಬಾಲಿಯೂ ಕೂಡ ಹಿಂಸೆ ಮಾಡಲು ಶುರು ಮಾಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈ ಒಂಟಿ ಸಲಗ ರಸ್ತೆಯಲ್ಲಿ ಆಗಾಗ ವಾಹನಗಳ ಮೇಲೆ ದಾಳಿ ನಡೆಸುವುದಲ್ಲದೇ ರಸ್ತೆಯಲ್ಲಿ ಗಂಟೆಗಟ್ಟಲೇ ನಿಂತುಕೊಂಡು ರಸ್ತೆ ಸಂಚಾರವನ್ನು ಬಂದ್ ಮಾಡುತ್ತಿದೆ.

ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿಗೆ ಜನರ ಬಲಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಇದರಿಂದ ಮಲಕ್ಕಪ್ಪರ (Malakkappara) ಎಸ್ಟೇಟ್‌ನಿಂದ (estates) ಟೀ ಸೊಪ್ಪುಗಳನ್ನು ಸಾಗಿಸುವ ಲಾರಿಗಳು ಪ್ರವಾಸಿ ವಾಹನಗಳನ್ನು ಆಗಾಗ ಅಡ್ಡಗಟ್ಟುವುದರಿಂದ ಈ ಕಿರಿದಾದ ರಸ್ತೆ ಟ್ರಾಫಿಕ್ (traffic) ದಟ್ಟಣೆಗೆ ಕಾರಣವಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಕಬಾಲಿಯ ಹಲವು ವಿಡಿಯೋಗಳು ಪೋಸ್ಟ್ ಆಗಿದ್ದು, ಕರ್ಕಶವಾದ ಹಾರ್ನ್‌ (horn) ಹೊಡೆಯುವ ಮೂಲಕ ಅಲ್ಲದೇ ಇನ್ನಿತರ ವಿಧಗಳಿಂದ ಈ ಮದವೇರಿದ ಕಬಾಲಿಯನ್ನು ಕೆಣಕದಂತೆ ಪ್ರವಾಸಿಗರಿಗೆ ಕೇರಳ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರಿಗೆ ಜಾಗೃತಿ ಮೂಡಿಸುತ್ತಿರುವುದಲ್ಲದೇ ಆ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿದ್ದಾರೆ. 
 

Follow Us:
Download App:
  • android
  • ios