ಯಾತ್ರೆಯಲ್ಲಿ ಸೋನಿಯಾ ಗಾಂಧಿ , ಪ್ರಿಯಾಂಕಾ ಗಾಂಧಿ, ನಟ ಕಮಲ್‌ ಹಾಸನ್‌ ಸೇರಿದಂತೆ ಅನೇಕರು ರಾಹುಲ್‌ ಗಾಂಧಿ ಜತೆ ಹೆಜ್ಜೆ ಹಾಕಿದರು. 

ನವದೆಹಲಿ: ಕನ್ಯಾಕುಮಾರಿಯಿಂದ (Kanyakumari) ಕಾಶ್ಮೀರದವರೆಗೆ (Jammu and Kashmir) ಕಾಂಗ್ರೆಸ್‌ (Congress) ಪಕ್ಷ ಹಮ್ಮಿಕೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ (Bharat Jodo Yatra) ಶನಿವಾರ ರಾಷ್ಟ್ರರಾಜಧಾನಿ ದೆಹಲಿಯನ್ನು (National Capital Delhi) ಪ್ರವೇಶಿಸಿದ್ದು, ಅಬ್ಬರದ ಕಾಲ್ನಡಿಗೆ ನೆರವೇರಿತು. ಯಾತ್ರೆಯಲ್ಲಿ ಸೋನಿಯಾ ಗಾಂಧಿ (Sonia Gandhi), ಪ್ರಿಯಾಂಕಾ ಗಾಂಧಿ (Priyanka Gandhi), ನಟ ಕಮಲ್‌ ಹಾಸನ್‌ (Kamal Haasan) ಸೇರಿದಂತೆ ಅನೇಕರು ರಾಹುಲ್‌ ಗಾಂಧಿ (Rahul Gandhi) ಜತೆ ಹೆಜ್ಜೆ ಹಾಕಿದರು. ನಟ ಕಮಲ್‌ ಹಾಸನ್‌ ಕೂಡ ಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

Add Asianetnews Kannada as a Preferred SourcegooglePreferred

ಬದರ್‌ಪುರ ಗಡಿಯಿಂದ ಯಾತ್ರೆ ದೆಹಲಿಯ ಆಶ್ರಮ ಚೌಕಕ್ಕೆ ಯಾತ್ರೆ ಆಗಮಿಸಿತು. ಯಾತ್ರೆ ಸಾಗುವ ಸಂಪೂರ್ಣ ಹಾದಿಯನ್ನು ಸಿಂಗರಿಸಲಾಗಿತ್ತು. ದಾರಿಯುದ್ದಕ್ಕೂ ತ್ರಿವರ್ಣ ಧ್ವಜಗಳು, ಬಲೂನುಗಳು ಹಾಗೂ ಮುಖಂಡರ ಭಾವಚಿತ್ರವಿದ್ದ ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ದಾರಿಯ ಪಕ್ಕದಲ್ಲಿ ನಿಂತಿದ್ದ ಜನರು ಡ್ರಮ್‌ ಬಾರಿಸುತ್ತಾ. ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಯಾತ್ರೆಗೆ ಶುಭಕೋರಿದರು. ಇಕ್ಕೆಲಗಳಲ್ಲೂ ನಿಂತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಯಾತ್ರಿಗಳ ಮೇಲೆ ಹೂವಿನ ಮಳೆಗರೆದರು. ಈ ವೇಳೆ ಹರ್ಯಾಣ ಮತ್ತು ದೆಹಲಿಯ ಜನರು ‘ಭಾರತ್‌ ಜೋಡೋ’, ‘ರಾಹುಲ್‌ ಗಾಂಧಿ ಜಿಂದಾಬಾದ್‌’ ಮುಂತಾದ ಘೋಷಣೆಗಳನ್ನು ಕೂಗಿದರು. ರಾಷ್ಟ್ರಧ್ವಜ ಹಿಡಿದಿದ್ದ ಸಾವಿರಾರು ಜನರು ರಾಹುಲ್‌ ಗಾಂಧಿಯ ಹಿಂದೆ ಹೆಜ್ಜೆ ಹಾಕಿದರು.

ಇದನ್ನು ಓದಿ: ಕೇಂದ್ರದ ‘ಹಿಂದಿ ಹೇರಿಕೆ’ಗೆ ರಾಹುಲ್‌ ತೀವ್ರ ವಿರೋಧ

ಯಾತ್ರೆಯುದ್ಧಕ್ಕೂ ‘ದ್ವೇಷ ಬಿಡಿ, ಭಾರತವನ್ನು ಒಗ್ಗೂಡಿಸಿ’ ಎಂಬ ಘೋಷಣೆಗಳು ಮೊಳಗುತ್ತಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಯಾತ್ರೆಯಲ್ಲಿ ಭಾಗಿಯಾಗಿದ್ದರು. ಸೆಪ್ಟೆಂಬರ್‌ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್‌ ಜೋಡೋ ಪಾದಯಾತ್ರೆ, ಜನವರಿ 20ರಂದು ಜಮ್ಮು ಕಾಶ್ಮೀರದಲ್ಲಿ ಅಂತ್ಯವಾಗಲಿದೆ.

ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ:
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶದಲ್ಲಿ ಭಯವನ್ನು ಹರಡುತ್ತಿದೆ. ನಂತರ ಈ ಭಯವನ್ನು ದ್ವೇಷವಾಗಿ ಪರಿವರ್ತಿಸುತ್ತಿದೆ. ಆದರೆ ಕಾಂಗ್ರೆಸ್‌ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಭಾರತ್‌ ಜೋಡೋ ಯಾತ್ರೆ ಎಂದರೆ ಅದು ಹಿಂದೂಸ್ತಾನ ಮತ್ತು ಪ್ರೀತಿ. ನಾವು ಎಲ್ಲಾ ಕಡೆ ಪ್ರೀತಿ ಹಂಚುತ್ತಿದ್ದೇವೆ. ಭಯ ಪಡಬೇಡಿ ಎಂದು ಜನರಿಗೆ ಹೇಳುತ್ತೇವೆ. ದೇಶದಲ್ಲಿರುವ ದ್ವೇಷದ ಮಾರುಕಟ್ಟೆಯಲ್ಲಿ ನಾವು ಪ್ರೀತಿಯ ಹೂವಿನ ಅಂಗಡಿ ಇಟ್ಟಿದ್ದೇವೆ. ದೇಶವನ್ನು ಒಗ್ಗೂಡಿಸುವ ಯಾತ್ರೆ ಇದು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಇದೇ ವೇಳೆ ಕೇಂದ್ರದಲ್ಲಿರುವುದು ನರೇಂದ್ರ ಮೋದಿ ಸರ್ಕಾರವಲ್ಲ. ಅಂಬಾನಿ-ಅದಾನಿ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್‌ ಗೆಹ್ಲೋಟ್‌..!

ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟ ಯಾತ್ರೆ
ದೆಹಲಿ ಪ್ರವೇಶಿಸಿರುವ ಪಾದಯಾತ್ರೆ ಅಪೋಲೋ ಆಸ್ಪತ್ರೆಯ ಬಳಿ ಬಂದಾದ ತಮ್ಮ ಯಾತ್ರೆಯನ್ನು ನಿಲ್ಲಿಸಿದ ರಾಹುಲ್‌ ಗಾಂಧಿ, ಆ ಮಾರ್ಗವಾಗಿ ಸಾಗಿ ಬಂದ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಅಲ್ಲದೇ ಆ್ಯಂಬುಲೆನ್ಸ್‌ಗೆ ದಾರಿ ಬಿಡುವಂತೆ ತಮ್ಮ ಸಹ ಯಾತ್ರಿಗಳಿಗೂ ಸೂಚನೆ ನೀಡಿದರು.

ತಾಯಿಯಿಂದ ಪಡೆದ ಪ್ರೀತಿ ಹಂಚುತ್ತಿದ್ದೇನೆ
ಪಾದಯಾತ್ರೆಯ ವೇಳೆ ತನ್ನ ತಾಯಿ ಸೋನಿಯಾ ಗಾಂಧಿ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿರುವ ರಾಹುಲ್‌ ಗಾಂಧಿ, ‘ನಾನು ತಾಯಿಯಿಂದ ಪಡೆದುಕೊಂಡಿರುವ ಪ್ರೀತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋನಲ್ಲಿ ಕರ್ನಾಟಕ ಮಾಜಿ ಸಚಿವರ ಪತ್ನಿ ಕೈಹಿಡಿದು ನಡೆದ ರಾಹುಲ್‌ ಗಾಂಧಿ

ಈ ಮಧ್ಯೆ, ‘ನಾನು ಕಾಂಗ್ರೆಸ್‌ ಪಕ್ಷದ ಯಾತ್ರೆಯಲ್ಲಿ ಭಾಗಿಯಾಗಿದ್ದೇನೆ. ಏಕೆಂದರೆ ನಾನೊಬ್ಬ ಭಾರತೀಯ. ರಾಷ್ಟ್ರದ ವಿಷಯಕ್ಕೆ ಬಂದರೆ ಎಲ್ಲಾ ರಾಜಕೀಯ ಪಕ್ಷಗಳು ಮಂಕಾಗಿವೆ ಎಂದು ಹೇಳಲಾಗುತ್ತಿದೆ. ಈ ಸಾಲನ್ನು ಮಸುಕು ಮಾಡಲು ನಾನು ಯಾತ್ರೆಯ ಜೊತೆ ಸೇರಿದ್ದೇನೆ’ ಎಂದು ನಟ, ರಾಜಕಾರಣಿ ಕಮಲ್‌ ಹಾಸನ್‌ ಹೇಳಿದ್ದಾರೆ.